ನ್ಯೂಸ್ ನಾಟೌಟ್: ರಸ್ತೆ ಬದಿಯಲ್ಲಿ ಕಸ ಬಿಸಾಡಬೇಡಿ ಎಂದು ಕೆಲವರಿಗೆ ಎಷ್ಟೇ ತಿಳಿ ಹೇಳಿದರೂ ಅವರು ತಮ್ಮ ಚಾಳಿಯನ್ನು ಮುಂದುವರಿಸುತ್ತಲೇ ಇರುತ್ತಾರೆ.ಆದರೆ ಇದರಿಂದ ತೊಂದರೆಯಾಗೋದು ಜನ ಸಾಮಾನ್ಯರಿಗೆ ಮಾತ್ರ. ಮಕ್ಕಳು ವಾಹನ ಸವಾರರು ದಾರಿ ಹೋಕರು ಈ ಸಮಸ್ಯೆಯನ್ನು ಎದುರಿಸುತ್ತಲೇ ಇರುತ್ತಾರೆ. ರಸ್ತೆ ಬದಿಯಲ್ಲಿ ,ಖಾಲಿ ಇದ್ದ ಜಾಗದಲ್ಲಿ, ನದಿ-ತೊರೆ-ತೋಡುಗಳಲ್ಲಿ ಕಸ ಎಸೆಯಬೇಡಿ ಎಂದು ಗೋಳಾಡಿದರೂ ಕಿವಿಗೆ ಹಾಕಿಕೊಳ್ಳದೇ ಇರೋರಿಗಾಗಿ ಸ್ಥಳೀಯ ಆಡಳಿತಗಳು ಕಸ ಎಸೆಯುವ ನಿರ್ದಿಷ್ಟ ಸ್ಥಳವನ್ನು ಗುರುತಿಸಿ ಅಲ್ಲಿ ಸಿಸಿ ಕ್ಯಾಮರಾ ಅಳವಡಿಸಿ ಕಸ ಎಸೆಯುವವರ ವಿರುದ್ಧ ಕ್ರಮಕ್ಕೂ ಮುಂದಾಗಿದೆ. ಆದರೆ ಸಿಸಿ ಕ್ಯಾಮರಾ ಇಲ್ಲದ ಜಾಗದಲ್ಲಿ ಕೆಲವು ಎಚ್ಚರಿಕೆಯ ಬೋರ್ಡ್ಗಳನ್ನು ಇದೀಗ ಅಳವಡಿಸಲಾಗಿದೆ.
ಏನದು ಬೋರ್ಡ್?
ಹೌದು, ನಿಯಮವನ್ನು ಗಾಳಿಗೆ ತೂರುವ ಕೆಲವು ಜನರಿಗೆ ಖಡಕ್ ಆಗಿರುವ ಬರಹಗಳೊಂದಿಗೆ ಬೋರ್ಡ್ ಅಳವಡಿಸಲಾಗಿದೆ. ಈ ಮೂಲಕ ಎಲ್ಲೆಂದರಲ್ಲಿ ಕಸ ಎಸೆಯುವುದಕ್ಕೆ ಕಡಿವಾಣ ಹಾಕೋದಕ್ಕೆ ಸ್ಥಳೀಯಾಡಳಿತ ಪ್ರಯತ್ನಿಸುತ್ತಿದೆ. ರಸ್ತೆ ಪಕ್ಕದಲ್ಲಿರುವ ಖಾಸಗಿ ಜಾಗಕ್ಕೂ ಕಸಗಳು ಇಂದು ಬಂದು ಬೀಳುತ್ತಿವೆ. ಅಲ್ಲದೇ ನೀರಿನ ಮೂಲಗಳಾದ ತೊರೆ-ತೋಡುಗಳಿಗೂ ಕಸ ಎಸೆಯುವುದನ್ನು ಕಂಟ್ರೋಲ್ ಮಾಡಲು ಇದೀಗ ಕೆಲವು ಕಡೆಗಳಲ್ಲಿ ಸಾರ್ವಜನಿಕರೇ ಮುಂದಾಗಿರೋದು ಗಮನಾರ್ಹ ಸಂಗತಿ.
ಕಸ ಎಸೆಯುವವರಿಗೆ ಖಾರವಾದ ಬರಹಗಳಿದ್ದರೆನೇ ನಾಟೋದು ಅನ್ನುವ ಉದ್ದೇಶದಿಂದ ಸ್ಥಳೀಯರು ಎಚ್ಚೆತ್ತುಕೊಂಡಿದ್ದಾರೆ.ಕಸ ಎಸೆದವರಿಗೆ ಕಠಿಣ ಕ್ರಮ, ಶಿಸ್ತು ಕ್ರಮ, ದಂಡ-ಪಿಂಡ ಎನ್ನುವ ಬರಹಗಳಿಂದ ಕಸ ಎಸೆಯುವವರಿಗೆ ಬುದ್ಧಿ ಬರುವುದಿಲ್ಲ ಎಂದು, ಇದೀಗ ಕಸ ಎಸೆಯುವವರ ವೈಯುಕ್ತಿಕ ವಿಚಾರವನ್ನೇ ಬರೆದು ಮುಡಿಪು ಹತ್ತಿರದ ನೂಜ ಎಂಬಲ್ಲಿ ಬೋರ್ಡ್ ಅಳವಡಿಸಲು ಆರಂಭಿಸಿದ್ದಾರೆ.ಈ ಬೋರ್ಡ್ ಗಳನ್ನು ಗಮನಿಸುವ ವ್ಯಕ್ತಿ ಆ ಜಾಗದಲ್ಲಿ ಕಸ ಎಸೆಯಲು ಹಿಂದೆ-ಮುಂದೆ ನೋಡಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗಿವೆ. ಸದ್ಯ ಇಂತಹ ಬರಹಗಳಿರುವ ಕಡೆಗಳಲ್ಲಿ ಕಸ ಎಸೆಯೋದು ಕೊಂಚ ಮಟ್ಟಿಗೆ ಕಡಿಮೆಯಾಗಿದೆ ಎಂದು ಹೇಳಲಾಗಿದೆ. ಆದರೆ ಓದಲು-ಬರೆಯಲು ಬರದ ಜನ ಮಾತ್ರ ಈ ಬರಹಗಳನ್ನು ಮಾಮೂಲಿ ಎಂದು ತಿಳಿದು ಕಸ ಎಸೆಯುತ್ತಿದ್ದಾರೆ ಅನ್ನೋದು ದುಖಃಕರ ಸಂಗತಿ.