ನ್ಯೂಸ್ ನಾಟೌಟ್ : ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಟ್ರೋಫಿಗೆ ಮುತ್ತಿಟ್ಟು ವಿಜಯೋತ್ಸವ ಸಂಭ್ರಮಕ್ಕಾಗಿ ಬೆಂಗಳೂರಿಗೆ ಆಗಮಿಸಿತ್ತು. ಬೆಂಗಳೂರಿನಲ್ಲಿ ಅದ್ಧೂರಿ ಕಾರ್ಯಕ್ರಮ ನಡುವೆ ಅಭಿಮಾನಿಗಳು ಜೀವ ಕಳೆದುಕೊಂಡಿದ್ದಾರೆ. ಇದರಲ್ಲಿ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಅಕ್ಷತಾ ಕೂಡ ಒಬ್ಬರು. ಗಂಡನ ಎದುರೇ ಜೀವ ಬಿಟ್ಟಿರುವ ಘಟನೆ ನಡೆದಿದೆ.
ಸಿದ್ದಾಪುರ ಮೂಲದ ಅಕ್ಷತಾ (26) ಹಾಗೂ ಪತಿ ಆಶಯ್ ಇಬ್ಬರು ಒಂದು ವರ್ಷದ ಹಿಂದೆ ಸಂಭ್ರಮದಿಂದ ಮದುವೆಯಾಗಿದ್ದರು. ವಿವಾಹದ ನಂತರ ಇಬ್ಬರು ಬೆಂಗಳೂರಿಗೆ ಬಂದು, ನಗರದ ಕಮ್ಮನಹಳ್ಳಿಯಲ್ಲಿ ದಂಪತಿ ವಾಸ ಮಾಡುತ್ತಿದ್ದರು. ಪತಿ ಖಾಸಗಿ ಕಂಪನಿಯಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿದ್ರೆ, ಮೃತ ಅಕ್ಷತಾ ಅವರು ಸಿಎ ಆಗಿ ಕೆಲಸ ಮಾಡುತ್ತಿದ್ದರು.
ಆರ್ ಸಿಬಿ, ಪಂಜಾಬ್ ವಿರುದ್ಧ ವಿಜಯ ಸಾಧಿಸಿ ಐಪಿಎಲ್ ಟ್ರೋಫಿಗೆ ಮುತ್ತಿಟ್ಟು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂಗೆ ತಂಡ ಆಗಮಿಸಿತ್ತು. ಆರ್ಸಿಬಿಯ ವಿಜಯೋತ್ಸವವನ್ನು ನೋಡುವುದಕ್ಕಾಗಿ ಗಂಡನ ಜೊತೆ ಅಕ್ಷತಾ ಅವರು ಸ್ಟೇಡಿಯಂಗೆ ಬಂದಿದ್ದರು. ವಿಜಯೋತ್ಸವ ಸಮಾರಂಭಕ್ಕೆ ಅತ್ಯಧಿಕ ಜನರು ಬಂದಿದ್ದರಿಂದ ನೂಕುನುಗ್ಗಲಿನಲ್ಲಿ ಕಾಲ್ತುಳಿತ ಆಗಿದೆ. ಈ ವೇಳೆ ಗಂಡನ ಎದುರಲ್ಲೇ ಅಕ್ಷತಾ ಪ್ರಾಣ ಬಿಟ್ಟಿದ್ದಾರೆ.
ಬೌರಿಂಗ್ ಆಸ್ಪತ್ರೆಯಲ್ಲಿ ಅಕ್ಷತಾ ಅವರ ಮರಣೋತ್ತರ ಪರೀಕ್ಷೆ ಮುಕ್ತಾಯವಾಗಿದೆ. ಈ ಹಿನ್ನೆಲೆಯಲ್ಲಿ ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರ ಮಾಡಲಾಗಿದೆ. ಸಿದ್ದಾಪುರದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಗುತ್ತದೆ.