ನ್ಯೂಸ್ ನಾಟೌಟ್: ಪುತ್ತೂರು ಶಾಸಕ ಅಶೋಕ್ ರೈ ಅವರು ಎಲ್ಲ ರಾಜಕಾರಣಿಗಳಂತಲ್ಲ. ತಮ್ಮ ಕಾರ್ಯವೈಖರಿ, ಸಮಾಜಮುಖಿ ಚಿಂತನೆ, ಬಡವರ ಪರ ಗಟ್ಟಿ ಧ್ವನಿಯ ಮೂಲಕವೇ ನೊಂದವರ ಪಾಲಿಗೆ ಆಶಾಕಿರಣವಾಗಿದ್ದಾರೆ. ಇಂತಹ ರಾಜಕಾರಣಿಗಳು ಅಪರೂಪದಲ್ಲಿ ಅಪರೂಪ ಅನ್ನುತ್ತಿದ್ದಾರೆ ಪುತ್ತೂರಿನ ಜನ..!
ಈ ಮಾತು ಜನರದ್ದು ಮಾತ್ರವಲ್ಲ, ಅಶೋಕ್ ರೈಯವರ ನಡವಳಿಕೆಯಲ್ಲೂ ಇದೆ. ಸಾಮಾನ್ಯವಾಗಿ ರಾಜಕಾರಣಿಗಳು ತಮಗೆ ಅನಾರೋಗ್ಯ ಎದುರಾದಾಗ ಐಶಾರಾಮಿ ಎಸಿ ಕೊಠಡಿಯಲ್ಲಿಯೇ ಚಿಕಿತ್ಸೆ ಪಡೆಯುತ್ತಾರೆ, ಕೆಲವರು ಅತ್ಯುತ್ತಮ ವೈದ್ಯರನ್ನು ಹುಡುಕುತ್ತಾರೆ, ಸಾಲದೂ ಅನ್ನುವಂತೆ ಸಣ್ಣ ಗಾಯಕ್ಕೂ ವಿದೇಶಕ್ಕೆ ಹೋಗಿ ಚಿಕಿತ್ಸೆ ಪಡೆದುಕೊಂಡು ಬಂದ ಜನನಾಯಕರು ನಮ್ಮ ನಡುವೆ ಎಷ್ಟೋ ಮಂದಿ ಇದ್ದಾರೆ. ಈ ಎಲ್ಲ ನಾಯಕರ ನಡುವೆ ಅಶೋಕ್ ರೈ ವಿಭಿನ್ನವಾಗಿ ಕಾಣಿಸುತ್ತಾರೆ.
ಇತ್ತೀಚೆಗೆ ಅಶೋಕ್ ರೈ ಅವರು ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿದ್ದ ಸಂದರ್ಭದಲ್ಲಿ ಮಸಲ್ ಕ್ಯಾಚ್ ಗೆ ಒಳಗಾಗಿದ್ದರು. ಕೆಲವು ದಿನಗಳಿಂದ ನೋವು ಬಾಧಿಸುತ್ತಲೇ ಇತ್ತು. ತಕ್ಷಣ ಅವರು ಯಾವ ಐಶಾರಾಮಿ ಸೌಲಭ್ಯವುಳ್ಳ ಆಸ್ಪತ್ರೆಗೂ ಹೋಗಲಿಲ್ಲ. ಅವರು ನೇರವಾಗಿ ಪುತ್ತೂರಿನಲ್ಲಿರುವ ಸರ್ಕಾರಿ ಅಸ್ಪತ್ರೆಗೆ ಹೋಗಿ ಅಲ್ಲಿನ ವೈದ್ಯರಿಂದ ಚಿಕಿತ್ಸೆ ಪಡೆದುಕೊಂಡರು. ಸಾಮಾನ್ಯ ಜನರಂತೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಅವರ ನಡೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಸರ್ಕಾರಿ ಆಸ್ಪತ್ರೆಯತ್ತ ಬನ್ನಿ ಸರ್ಕಾರಿ ಆಸ್ಪತ್ರೆಯಲ್ಲೂ ಒಳ್ಳೆಯ ಚಿಕಿತ್ಸೆ ಸಿಗುತ್ತದೆ ಅನ್ನುವ ಸಂದೇಶವನ್ನೂ ಶಾಸಕರು ಎಲ್ಲರಿಗೂ ಸಾರಿರುವುದು ವಿಶೇಷ.