ನ್ಯೂಸ್ ನಾಟೌಟ್: ರಾಜಕೀಯವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶರವೇಗವಾಗಿ ಬೆಳೆಯುತ್ತಿರುವ ಅರುಣ್ ಕುಮಾರ್ ಪುತ್ತಿಲ ಅವರ ಹೆಸರನ್ನು ಹಾಳು ಮಾಡುವುದಕ್ಕೆ ವ್ಯವಸ್ಥಿತವಾದ ಸಂಚನ್ನು ರೂಪಿಸಲಾಗಿದೆ ಅನ್ನುವ ದೂರು ಕೇಳಿ ಬಂದಿದೆ. ಅರುಣ್ ಕುಮಾರ್ ಪುತ್ತಿಲ ಮುಸ್ಲಿಂಮರ ಪವಿತ್ರ ಹಬ್ಬವಾದ ಬಕ್ರೀದ್ಗೆ ಹೋಗಿದ್ದಾರೆಂದು ಕೆಲವರು ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ. ಈ ಬಗ್ಗೆ ನ್ಯೂಸ್ ನಾಟೌಟ್ ಜೊತೆಗೆ ಮಾತನಾಡಿದ ಅರುಣ್ ಕುಮಾರ್ ಪುತ್ತಿಲ ಸ್ಪಷ್ಟನೆ ನೀಡಿದ್ದಾರೆ. ಮಾನವೀಯತೆಯುಳ್ಳ ಮನುಷ್ಯನಾಗಿ ವರ್ತಿಸಿದ್ದೇನೆ. ಇದರಲ್ಲಿ ಹುಳುಕು ಹುಡುಕುವ ಕೆಲಸ ಮಾಡಬೇಡಿ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಕೆಲವರು ನನ್ನ ಬಗ್ಗೆ ವ್ಯವಸ್ಥಿತ ಸಂಚು ರೂಪಿಸುವ ಪ್ರಯತ್ನ ನಡೆಸುತ್ತಿದ್ದಾರೆ. ನಾನು ಎರಡು ದಿನಗಳ ಹಿಂದೆ ಹೊಸ ಉದ್ಯಮವೊಂದರ ಉದ್ಘಾಟನಾ ಕಾರ್ಯಕ್ರಮ ಮುಗಿಸಿ ಹಿಂದಿರುಗಿ ಬರುತ್ತಿದ್ದೆ. ಈ ವೇಳೆ ರಸ್ತೆಯಲ್ಲಿ ಜನ ಸೇರಿದ್ದನ್ನು ನೋಡಿ ವಿಚಾರಿಸಿದಾಗ ಮುಸ್ಲಿಂ ಮಹಿಳೆಯೊಬ್ಬಳು ಹೆರಿಗೆಗೆ ದಾಖಲಾದ ಸಂದರ್ಭದಲ್ಲಿ ಮೃತಪಟ್ಟ ವಿಚಾರ ತಿಳಿಯಿತು. ಶೇಕಮಲೆ ಬೊಳ್ಳಾಡಿ ಇಬ್ರಾಹಿಂ ಎಂಬವರ ಪತ್ನಿ 9 ತಿಂಗಳ ಗರ್ಭಿಣಿ ಹಸೀನಾ (29) ಮಂಗಳೂರಿನ ಎಜೆ ಆಸ್ಪತ್ರೆಗೆ ದಾಖಲಾಗಿದ್ದರು. ಜೂ.28 ರಂದು ಹೆರಿಗೆ ಸಂದರ್ಭ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಹೆರಿಗೆಯಲ್ಲಿ ಮಗು ಜೀವಂತವಾಗಿದ್ದು ಎಜೆ ಆಸ್ಪತ್ರೆಯ ವೈದ್ಯರಿಗೆ ಕರೆ ಮಾಡಿ ನಾನು ಮಗುವಿನ ಆರೋಗ್ಯ ವಿಚಾರಿಸಿದೆ. ಮಾನವೀಯ ನೆಲೆಯಲ್ಲಿ ಇದನ್ನೆಲ್ಲ ಮಾಡಿದ್ದೇನೆ. ಆದರೆ ಕೆಲವು ವಿರೋಧಿಗಳು ಇದರ ಫೋಟೋವನ್ನು ಜಾಲತಾಣದಲ್ಲಿ ಬಳಸಿಕೊಂಡು ನನ್ನ ತೇಜೋವಧೆಗೆ ಪ್ರಯತ್ನಿಸಿದ್ದಾರೆ. ಸತ್ಯ ವಿಚಾರವನ್ನು ಮರೆ ಮಾಚಿ ನಾನು ಬಕ್ರೀದ್ ಹಬ್ಬದ ಊಟಕ್ಕೆ ಹೋಗಿದ್ದೇನೆ ಅನ್ನುವ ರೀತಿಯಲ್ಲಿ ಸುಳ್ಳು ಸುದ್ದಿಯನ್ನು ಹಬ್ಬಿಸಿದ್ದಾರೆ ಎಂದು ಪುತ್ತಿಲ ಸ್ಪಷ್ಟನೆ ನೀಡಿದ್ದಾರೆ.
ಅರುಣ್ ಪುತ್ತಿಲ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪುತ್ತೂರಿನಿಂದ ಸ್ಪರ್ಧೆ ಮಾಡಿದ್ದರು. ಪಕ್ಷೇತರರಾಗಿ ನಿಂತಿದ್ದ ಪುತ್ತಿಲರಿಗೆ ವ್ಯಾಪಕ ಜನ ಬೆಂಬಲ ಸಿಕ್ಕಿತ್ತು. ಚುನಾವಣೆಯಲ್ಲಿ ಅಲ್ಪ ಮತಗಳ ಅಂತರದಿಂದ ಸೋತಿದ್ದರೂ ಪುತ್ತಿಲರು ಹಿಂದೂ ಪರಿವಾರದ ಹೃದಯವನ್ನೇ ಗೆದ್ದಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಮಾಡುವ ಗುರಿಯನ್ನು ಕಾರ್ಯಕರ್ತರು ಹೊಂದಿದ್ದಾರೆ.