ನ್ಯೂಸ್ ನಾಟೌಟ್: ಪುತ್ತೂರು ಕಬಕ ಗ್ರಾಮದ ಮುರ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿ ಮತ್ತು ಕೆದಿಲ -ಮುರ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಅವೈಜ್ಞಾನಿಕವಾಗಿ ನಿರ್ಮಾಣದಿಂದ ನಡೆಯುತ್ತಿರುವ ಅಪಘಾತದಿಂದ ರೊಚ್ಚಿಗೆದ್ದ ನೂರಾರು ಸ್ಥಳೀಯರು ಗುರುವಾರ(ಡಿ.19) ಸಂಜೆ ಪ್ರತಿಭಟನೆ ನಡೆಸಿದ್ದಾರೆ.
ಪುತ್ತೂರು ಕಬಕ ಗ್ರಾಮದ ಮುರ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿ ಮತ್ತು ಕೆದಿಲ -ಮುರ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಅವೈಜ್ಞಾನಿಕವಾಗಿ ನಿರ್ಮಿಸಲಾದ ಕಾರಣ ನಿರಂತರವಾಗಿ ನಡೆಯುತ್ತಿರುವ ರಸ್ತೆ ಅಪಘಾತದಿಂದ ಅನೇಕ ಸಾವು ನೋವುಗಳು ಉಂಟಾಗಿದ್ದು, ಜನರು ಜೀವಭಯದಿಂದ ಈ ರಸ್ತೆಯನ್ನು ಉಪಯೋಗಿಸುವಂತೆ ಆಗಿದೆ. ಮುರ ಪೇಟೆಗೆ ಬಂದವರು, ಮನೆಗೆ ಸೇರುವುದೇ ಅಥವಾ ಆಸ್ಪತ್ರೆಗೆ ಸೇರುವುದೇ? ಎಂಬಷ್ಟು ಭಯಭೀತಿ ಈ ಸ್ಥಳದಲ್ಲಿ ಉಂಟಾಗಿದ್ದು, ಇದಕ್ಕೆಲ್ಲಾ ಸಂಬಂಧಪಟ್ಟ ಇಲಾಖೆಗಳು ಅವೈಜ್ಞಾನಿಕವಾಗಿ ನಿರ್ಮಿಸಿದ ರಸ್ತೆ ಮತ್ತು ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಇದೇ ಸ್ಥಳದಲ್ಲಿ ಡಿ.19 ರಂದು ಮಧ್ಯಾಹ್ನ ನಡೆದ ಬಸ್ ಮತ್ತು ಬೈಕ್ ಅಪಘಾತದಲ್ಲಿ ಸ್ಥಳೀಯ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆಯಿಂದ ರೊಚ್ಚಿಗೆದ್ದ ನೂರಾರು ಜನರು ಗುರುವಾರ ಸಂಜೆ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸುವಂತೆ ಆಗ್ರಹಿಸಿ ಮುರ ಜಂಕ್ಷನ್ ಬಳಿ “ಮುರ ನಾಗರಿಕ ಒಕ್ಕೂಟ”ದ ವತಿಯಿಂದ ಪ್ರತಿಭಟನೆ ಮಾಡಿ ತಮ್ಮ ಆಕ್ರೋಶ ಮತ್ತು ನೋವನ್ನು ವ್ಯಕ್ತಪಡಿಸಿದ್ದಾರೆ. ಶಾಶ್ವತ ಪರಿಹಾರಕ್ಕೆ ಆಗ್ರಹಿಸಿ ತಮ್ಮ ಜೀವ ಮತ್ತು ಜೀವನಕ್ಕೆ ಭದ್ರತೆ ನೀಡಬೇಕೆಂದು ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ಶಾಶ್ವತ ಪರಿಹಾರವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಪುತ್ತೂರು ಸರ್ಕಲ್ ಇನ್ಸ್ಪೆಕ್ಟರ್ ಮುಖಾಂತರ ಸಂಬಂಧಪಟ್ಟ ಇಲಾಖೆಗಳಿಗೆ ಮನವಿ ಸಲ್ಲಿಸಲಾಗಿದೆ.
ಪ್ರತಿಭಟನಾಕಾರರಿಂದ ಅಧಿಕಾರಿಗಳು ಮನವಿ ಸ್ವೀಕರಿಸಿ, ಸೇರಿದವರಲ್ಲಿ ಕೂಡಲೇ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳೊಂದಿಗೆ ಚರ್ಚೆ ನಡೆಸುವುದಾಗಿ ಮತ್ತು ಪರಿಹಾರಕ್ಕೆ ಪ್ರಯತ್ನಿಸುವುದಾಗಿ ತಿಳಿಸಿದ್ದಾರೆ. ಈ ಸಮಯದಲ್ಲಿ ಪುತ್ತೂರು ಸರ್ಕಲ್ ಇನ್ಸ್ಪೆಕ್ಟರ್ ಜಾನ್ಸನ್ ಡಿಸೋಜಾ, ಟ್ರಾಫಿಕ್ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಉದಯರವಿ ಹಾಗೂ ಸಿಬ್ಬಂದಿ ಮತ್ತು ನೂರಾರು ಮಂದಿ ಪ್ರತಿಭಟನಾಕಾರರು ಉಪಸ್ಥಿತರಿದ್ದರು.