ನ್ಯೂಸ್ ನಾಟೌಟ್:ಡ್ಯಾನ್ಸ್ ಮಾಸ್ಟರ್, ದಕ್ಷಿಣ ಭಾರತದ ಖ್ಯಾತ ನಟ ಪ್ರಭುದೇವ ಅವರು ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದ್ದಾರೆ. ದೇವರಿಗೆ ವಿಶೇಷ ಪೂಜೆ ಮಾಡಿಸಿದ್ದಾರೆ. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಕುಟುಂಬ ಸಮೇತರಾಗಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ತಮ್ಮ ತಾಯಿಯ ಊರಾದ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಕೆಂಬಾಳು ಗ್ರಾಮದಲ್ಲಿ ಶಿಥಿಲಾವಸ್ಥೆಯಲ್ಲಿದ್ದ ಚೋಳರ ಕಾಲದ ಮಲೈ ಮಹದೇಶ್ವರ ದೇವಸ್ಥಾನವನ್ನು 25 ಲಕ್ಷ ರೂ. ವೆಚ್ಚದಲ್ಲಿ ಜೀರ್ಣೋದ್ಧಾರ ಮಾಡಿಸಿದ್ದಾರೆ.
ತಮ್ಮ ತಾಯಿ ಮಹದೇವಮ್ಮನವರ ಆಸೆಯಂತೆ ಈ ಕಾರ್ಯವನ್ನು ಕೈಗೊಂಡಿರುವ ಪ್ರಭುದೇವ, ಗ್ರಾಮದಲ್ಲಿ ಜಮೀನು ಖರೀದಿಸಿದ್ದ ಸ್ಥಳದ ಪಕ್ಕದಲ್ಲೇ ಇರುವ ಈ ದೇವಸ್ಥಾನವನ್ನು ಗ್ರಾಮಸ್ಥರ ಮನವಿಯಂತೆ ನವೀಕರಿಸಿದ್ದಾರೆ. ಕಳೆದ ಎರಡು ದಿನಗಳಿಂದ ಪ್ರಭುದೇವ ಮತ್ತು ಆತನ ಪತ್ನಿ ಹಿಮಾನಿ ದೇವಸ್ಥಾನದಲ್ಲಿ ತಂಗಿ, ಕಳಶ ಪೂಜೆ, ಹೋಮ, ಹವನ, ನವಗ್ರಹ ಪೂಜೆಯಲ್ಲಿ ಭಾಗವಹಿಸಿದ್ದಾರೆ. ಜೀರ್ಣೋದ್ಧಾರದ ಸಂಭ್ರಮದಲ್ಲಿ ಪ್ರಭುದೇವ ಕುಟುಂಬವು ಇಡೀ ಗ್ರಾಮಸ್ಥರಿಗೆ ಊಟದ ವ್ಯವಸ್ಥೆಯನ್ನೂ ಮಾಡಿದೆ. ಈ ಕಾರ್ಯಕ್ಕೆ ಗ್ರಾಮಸ್ಥರು ಪ್ರಭುದೇವ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ತಾಯಿ ಹೇಳಿದ್ದೇನು?
ಕೆಂಬಾಲು ಗ್ರಾಮದಲ್ಲಿ ಜಮೀನು ಖರೀದಿಸಿದಾಗ, ಅದರ ಪಕ್ಕದಲ್ಲೇ ಮಲೆಮಹದೇಶ್ವರ ದೇವಸ್ಥಾನವಿತ್ತು. ಒಮ್ಮೆ ಪೂಜೆಗೆ ತೆರಳಿದ ಸಂದರ್ಭದಲ್ಲಿ ಅವರ ಪಕ್ಕದಲ್ಲೇ ಹಾವು ಕಾಣಿಸಿಕೊಂಡಿತ್ತು, ಇದನ್ನು ದೈವಿಕ ಸಂಕೇತವೆಂದು ಭಾವಿಸಿದೆ. ದೇವಸ್ಥಾನವನ್ನು ಅಭಿವೃದ್ಧಿಪಡಿಸಬೇಕೆಂದು ಅಂದೆ ತೀರ್ಮಾನಿದೆ. 1986ರಲ್ಲಿ ಶೀಥಲಾವಸ್ಥೆಯಲ್ಲಿದ್ದ ದೇವಸ್ಥಾನದ ಗೋಡೆಗಳನ್ನು ಕಟ್ಟಿಸಿದೆವು. ಇಂದು ಮಗ ಪ್ರಭುದೇವ ದೇವಸ್ಥಾನದ ಜೀರ್ಣೋದ್ಧಾರದ ಕನಸನ್ನು ಪೂರ್ಣಗೊಳಿಸಿದ್ದಾರೆ, ಆದರೂ ಇನ್ನಷ್ಟು ಕೆಲಸ ಬಾಕಿಯಿದೆ ಎಂದು ಮಹದೇವಮ್ಮನವರು ಹೇಳಿದ್ದಾರೆ.
ಮಗಳ ಹುಟ್ಟುಹಬ್ಬ:
ಪ್ರಭುದೇವ ಅವರ ಮಗಳ ಹುಟ್ಟುಹಬ್ಬದ ಸಂದರ್ಭದಲ್ಲಿ ದಂಪತಿ ದೇವಸ್ಥಾನದಲ್ಲಿ ಪೂಜೆಯಲ್ಲಿ ಭಾಗವಹಿಸಿದ್ದರು. ತಮ್ಮ ಮಗ ತನ್ನ ಕನಸನ್ನು ಸಾಕಾರಗೊಳಿಸಿರುವುದು ಮಹದೇವಮ್ಮನವರಿಗೆ ತುಂಬಾ ಖುಷಿಯನ್ನು ನೀಡಿದೆ. ‘ದೇವರೇ ಎಲ್ಲವನ್ನೂ ಕೊಟ್ಟಿದ್ದಾನೆ, ದೇವಸ್ಥಾನಕ್ಕೆ ಮಾಡಿದ ಖರ್ಚಿನ ಲೆಕ್ಕವನ್ನು ನಾನು ಇಡುವುದಿಲ್ಲ’ ಎಂದು ಹೇಳಿದ್ದಾರೆ. ದೇವರ ಮೇಲಿನ ಭಕ್ತಿಯಿಂದ ಪ್ರೇರಿತರಾದ ತಾಯಿ ಮಹದೇವಮ್ಮ ಪ್ರತಿದಿನವೂ ಸರಸ್ವತಿ ಪೂಜೆಯನ್ನು ಮಾಡುತ್ತಾರೆ ಮತ್ತು ಸರಸ್ವತಿ ದೇವಸ್ಥಾನವನ್ನು ಕಟ್ಟಿಸುವ ಆಸೆಯನ್ನೂ ವ್ಯಕ್ತಪಡಿಸಿದ್ದಾರಲ್ಲದೆ ದೇವಸ್ಥಾನದ ಅಭಿವೃದ್ಧಿಗೆ ತಾವು ಮಾಡಿದ ಕೊಡುಗೆಯನ್ನು ಲೆಕ್ಕಕ್ಕಿಡದೆ, ದೇವರ ಆಶೀರ್ವಾದವೇ ಎಲ್ಲವೆಂದು ಅವರು ಭಾವಿಸಿದ್ದಾರೆ. ತಮ್ಮ ಮಗನ ಸಹಕಾರದಿಂದ ದೇವಸ್ಥಾನದ ಕನಸು ನನಸಾಗುತ್ತಿರುವುದು ಅವರಿಗೆ ಅಪಾರ ಸಂತೋಷವನ್ನು ತಂದಿದೆ. ಭವಿಷ್ಯದಲ್ಲಿ ಸರಸ್ವತಿ ದೇವಸ್ಥಾನವನ್ನು ಕಟ್ಟಿಸುವ ತಮ್ಮ ಆಸೆಯನ್ನೂ ಅವರು ಪ್ರಕಟಿಸಿದ್ದಾರೆ.