ನ್ಯೂಸ್ ನಾಟೌಟ್ : ಭಾರತ ದೇಶ 5ಜಿ ಯುಗದ ಹೊಸ್ತಿಲು ದಾಟಿ ಒಳ ಬಂದಿದೆ. ಕೋಟಿ ಕೋಟಿ ಬೆಲೆಬಾಳುವ ಮಿಂಚಿನ ವೇಗದ ಕಾರುಗಳು ರಸ್ತೆಯಲ್ಲಿ’ವ್ರೂಂ’ಗುಟ್ಟುತ್ತಿವೆ. ಹಾಲಿವುಡ್ ಸಿನಿಮಾದ ಬಜೆಟ್ಟಿನಲ್ಲಿ ತಯಾರಾದ ವ್ಯೋಮನೌಕೆ ಮಂಗಳನನ್ನು ಮುಟ್ಟಿ ದೇಶದ ಮೀಸೆಯನ್ನೂ ತಿರುವುವಂತೆ ಮಾಡಿದೆ. ಮಿಲಿಯನ್ ಡಾಲರ್ ಕುಬೇರರ ಪಟ್ಟಿಯಲ್ಲಿ ಭಾರತೀಯ ಸಿರಿವಂತರು ಸತತವಾಗಿ ಟಾಪ್ 10ರಲ್ಲಿ ಸ್ಥಾನ ಪಡೆಯುತ್ತಿದ್ದಾರೆ. ಈ ಎಲ್ಲ ಕೋಟಿ ಕೋಟಿ ಮಾತುಗಳ ನಡುವೆ ದಿನದಲ್ಲಿ ಕನಿಷ್ಠ 100 – 150 ರೂ.ಗೂ ಪರದಾಡುವ 26.97 ಕೋಟಿ ಬಡಪಾಯಿಗಳು ಇದೇ ಭಾರತದಲ್ಲಿಯೇ ಇದ್ದಾರೆ!
ಅಕ್ಟೋಬರ್ 17 ‘ಅಂತಾರಾಷ್ಟ್ರೀಯ ಬಡತನ ನಿರ್ಮೂಲನಾ ದಿನ’. 1991ರ ಪೂರ್ವದಲ್ಲಿ ಉದಾರೀಕರಣ, ಜಾಗತೀಕರಣಕ್ಕೆ ತೆರೆದುಕೊಳ್ಳದ ಕಾಲಘಟ್ಟದವರೆಗೂ ಭಾರತ ಅಕ್ಷರಶಃ ಬಡ ಜನರಿಂದಲೇ ತುಂಬಿ ತುಳುಕುತ್ತಿತ್ತು. ನಂತರದ ದಿನಗಳಲ್ಲಷ್ಟೇ ಇಲ್ಲಿ ಕೈಗಾರಿಕೆ, ಐಟಿ, ಆಟೋದ್ಯಮದ ಕ್ರಾಂತಿ ನಡೆದು, ಉದ್ಯೋಗಗಳು ಸೃಷ್ಟಿಯಾಗಿ ಬಡತನ ಸಾಕಷ್ಟು ನೀಗಿದೆ. ಭಾರತ ಅಭಿವೃದ್ಧಿಶೀಲ ರಾಷ್ಟ್ರವಾಗಿ ಗುರುತಿಸಿಕೊಂಡಿದೆ. ಪೆಡಂಭೂತವಾಗಿ ಕಾಡುತ್ತಿರುವ ಈ ಬಡತನವನ್ನು ಹೋಗಲಾಡಿಸಲು ಆಗಾಗ್ಗೆ ಬಂದ ಸರಕಾರಗಳು ಗರೀಬಿ ಹಠಾವೋದಿಂದ ಅಂತ್ಯೋದಯದವರೆಗೂ ಸಹಸ್ರಾರು ಕೋಟಿ ಲೆಕ್ಕದ ಹತ್ತಾರು ಯೋಜನೆಗಳನ್ನು ರೂಪಿಸುತ್ತಲೇ ಇವೆ. ಆದಾಗ್ಯೂ, ಬಡತನವನ್ನು ಈ ದೇಶದಿಂದ ಸಂಪೂರ್ಣವಾಗಿ ಹೊರದಬ್ಬಲು ಸಾಧ್ಯವಾಗಿಲ್ಲ.
ಎಷ್ಟು ಬಡವರಿದ್ದಾರೆ?
ನಿರೀಕ್ಷಿಸಿದ್ದಂತೆ 2021ರಲ್ಲಿ 16ನೇ ಜನಗಣತಿ ನಡೆದಿದ್ದರೆ ಇದರ ನಿಖರ ಲೆಕ್ಕ ಸಿಗುತ್ತಿತ್ತು. 2011ರ ಜನಗಣತಿ ಪ್ರಕಾರ, ದೇಶದ ಶೇ.21 ಮಂದಿ ಬಡತನ ರೇಖೆಗಿಂತ ಕೆಳಗಿಳಿದ್ದಾರೆ. ಕೇಂದ್ರ ಸರಕಾರ ಇತ್ತೀಚೆಗೆ ಸಂಸತ್ತಿನಲ್ಲಿ ನೀಡಿದ ಮಾಹಿತಿ ಪ್ರಕಾರ ಭಾರತದಲ್ಲಿ ಶೇ.26.97 ಮಂದಿ ಬಡತನ ರೇಖೆಗಿಂತ ಕೆಳಗಿಳಿದ್ದಾರೆ. ಭಾರತದಲ್ಲಿನ ಬಡತನದ ಕುರಿತು ವಿಶ್ವ ಬ್ಯಾಂಕ್ ಕೂಡ 2019ರಲ್ಲಿ ಸಮೀಕ್ಷೆ ನಡೆಸಿತ್ತು. ಈ ಪ್ರಕಾರ, 2011 ರಿಂದ 2019ರ ನಡುವೆ ಭಾರತದಲ್ಲಿ ಶೇ.12.3 ಪ್ರಮಾಣದಷ್ಟು ಬಡತನ ಇಳಿಕೆ ಕಂಡಿದೆ. 2019ರ ವರದಿಯು ‘ಭಾರತದಲ್ಲಿನ ಬಡತನವು ಶೇ.10.2ಕ್ಕೆ ಇಳಿಕೆಯಾಗಿದೆ’ ಎಂದು ಹೇಳಿದೆ. 2023ರಲ್ಲಿ ನಡೆಸಲು ಉದ್ದೇಶಿಸಿರುವ ಜನಗಣತಿಯಲ್ಲಿ ಈ ಕುರಿತಾದ ಸ್ಪಷ್ಟ ಅಂಕಿ – ಅಂಶಗಳು ಹೊರಬೀಳಲಿವೆ.
ಯಾವ ರಾಜ್ಯದಲ್ಲಿ ಹೆಚ್ಚು ಬಡವರು?
ಸಣ್ಣ ರಾಜ್ಯಗಳಲ್ಲಿ ಜನರ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿದೆ ಎಂದು ವಿಶ್ವ ಬ್ಯಾಂಕ್ ವರದಿ ಹೇಳಿದೆ. ಕೇಂದ್ರಾಡಳಿತ ಪ್ರದೇಶವಾದ ದಾದ್ರಾ ಮತ್ತು ನಗರ ಹವೇಲಿಯಲ್ಲಿ ಶೇ.39.31, ಪುಟಾಣಿ ರಾಜ್ಯ ಜಾರ್ಖಂಡ್ ಶೇ.39.96, ಒಡಿಶಾದಲ್ಲಿ ಶೇ.32.59 ಬಡವರು ವಾಸಿಸುತ್ತಿದ್ದಾರೆ. ದೊಡ್ಡ ರಾಜ್ಯಗಳ ಪೈಕಿ ಬಿಹಾರದಲ್ಲಿ ಶೇ.33, ಉತ್ತರ ಪ್ರದೇಶದಲ್ಲಿ ಶೇ.29 ಮಂದಿ ಬಡತನ ರೇಖೆಗಿಂತ ಕೆಳಗಿದ್ದಾರೆ. ಕರ್ನಾಟಕದಲ್ಲಿ ಈ ಪ್ರಮಾಣ ಶೇ.21ರಷ್ಟಿದೆ.