ನ್ಯೂಸ್ ನಾಟೌಟ್: ಕುಂಭಮೇಳದ ತ್ರಿವೇಣಿ ಸಂಗಮದಲ್ಲಿ ಈಗಾಗಲೇ ಕೋಟಿ ಕೋಟಿ ಸಂಖ್ಯೆಯಲ್ಲಿ ಜನ ಪವಿತ್ರ ಸ್ನಾನ ಮಾಡಿ ಪಾವನರಾಗಿದ್ದಾರೆ . ಅಂದಾಜು ಲೆಕ್ಕ ಹೇಳೋದಾದರೆ ಸುಮಾರು 55 ಕೋಟಿಗೂ ಅಧಿಕ ಮಂದಿ ಪುಣ್ಯಸ್ನಾನ ಮಾಡಿದ್ದಾರೆ. ಫೆ.೨೬ರಂದು ಕೊನೆಯ ದಿನವಾಗಿರೋದ್ರಿಂದ ಇನ್ನೂ ಭಕ್ತರ ಸಂಖ್ಯೆ ಹೆಚ್ಚುತ್ತಲೇ ಇದೆ. ಮಹಿಳೆಯರು ಪುರುಷರು ಸೇರಿದಂತೆ ೨ ತಿಂಗಳ ಮಕ್ಕಳು ಕೂಡ ಗಂಗೆಯಲ್ಲಿ ಮಿಂದು ಪಾವನವಾಗಿದ್ದಾರೆ.
ಆದರೆ ಈ ಸಂದರ್ಭ ಕೆಲವು ಕಿಡಿಕೇಡಿಗಳು, ಮಹಿಳೆಯರು ಸ್ನಾನ ಮಾಡುತ್ತಿರುವ ವಿಡಿಯೋ ಮಾಡಿ ಅದನ್ನು ಮಾರಾಟ ಮಾಡುತ್ತಿದ್ದಾರೆನ್ನುವ ಆತಂತಕಾರಿ ವಿಷಯವೊಂದು ಬಹಿರಂಗಗೊಂಡಿದೆ.ಹೌದು, 2-3 ಸಾವಿರಗಳಿಗೆ ಈ ವಿಡಿಯೋ ಮಾರಾಟ ಮಾಡುತ್ತಿದ್ದಾರೆ ಎಂಬ ಅಂಶ ಬಯಲಿಗೆ ಬಂದಿದೆ. ವಿಡಿಯೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿದ್ದು, ಈ ಬಗ್ಗೆ ಉತ್ತರ ಪ್ರದೇಶ ಸರ್ಕಾರ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿದ್ದು, ಇಂಥ ವಿಡಿಯೋಗಳನ್ನು ಡೌನ್ ಲೋಡ್, ಅಥವಾ ಅಪ್ ಲೋಡ್ ಮಾಡಿದರೆ ಬಂಧಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.
ಇದಾಗಲೇ 17 ಜಾಲತಾಣಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ ಎಂಬ ಮಾಹಿತಿ ಲಭ್ಯಗೊಂಡಿದೆ. ಹೀಗಾಗಿ ಪೊಲೀಸರು ಇವರ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ. ಇದಾಗಲೇ ಹಲವಾರು ರೀತಿಯ ವಿಡಿಯೋ ವೈರಲ್ ಆಗುತ್ತಿದ್ದು, ಮಹಿಳೆಯರು ಸ್ನಾನ ಮಾಡುವ ಮತ್ತು ಬಟ್ಟೆ ಬದಲಾಯಿಸುವ ವಿಡಿಯೋಗಳು ಕೂಡ ಸೇರಿಕೊಂಡಿವೆ. ಈ ವಿಕೃತ ಮನಸ್ಥಿತಿಯವರನ್ನು ಪತ್ತೆ ಹಚ್ಚುವಲ್ಲಿ ಉತ್ತರ ಪ್ರದೇಶದ ಸಾಮಾಜಿಕ ಮಾಧ್ಯಮ ಮೇಲ್ವಿಚಾರಣಾ ತಂಡವು ಕಾರ್ಯನಿರತವಾಗಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದೆ.
ಇದಾಗಲೇ ಹಲವಾರು ಸಂಖ್ಯೆಯಲ್ಲಿ ಮಹಿಳಾ ಭಕ್ತರೂ ಪುಣ್ಯಸ್ನಾನ ಮಾಡುತ್ತಿದ್ದು, ಈ ಘಟನೆಯಿಂದ ಆತಂಕಕ್ಕೆ ಒಳಗಾಗಿದ್ದಾರೆ. ಇಲ್ಲಿ ಪುಣ್ಯಸ್ನಾನ ಮಾಡಲು ಬರುವ ನಿಜವಾದ ಭಕ್ತಾದಿಗಳಿಗೆ ಇವುಗಳ ಅರಿವೇ ಇರುವುದಿಲ್ಲ. ಎಲ್ಲರೂ ಒಟ್ಟಾಗಿಯೇ ಸ್ನಾನ ಮಾಡಿದರೂ, ಇಂಥ ಕೆಟ್ಟ ಕಾಮುಕ ಭಾವನೆಗಳಿಗೆ ಇಲ್ಲಿ ಆಸ್ಪದವೇ ಇಲ್ಲ. ಆದರೆ ಇದಕ್ಕಾಗಿಯೇ ಕೆಲವು ವಿಕೃತ ಮನಸ್ಥಿತಿಗಳು ಬಂದು ಕುಂಭಮೇಳದ ಹೆಸರನ್ನು ಕೆಡಿಸಲು ಮುಂದಾಗಿದೆ. ಇದಾಗಲೇ ಕುಂಭಮೇಳಕ್ಕೆ ಜನರು ಬರದಂತೆ ತಡೆಯಲು ಹಲವಾರು ರೀತಿಯಲ್ಲಿ ಕುಕೃತ್ಯಗಳನ್ನು ಎಸಲಾಗಿದೆ. ಆದರೆ ಯೋಗಿ ಆದಿತ್ಯನಾಥ ಸರ್ಕಾರ ಒದಗಿಸಿರುವ ಕಟ್ಟುನಿಟ್ಟಿನ ಸೆಕ್ಯುರಿಟಿಯಿಂದಾಗಿ ಇದು ಸಾಧ್ಯವಾಗುತ್ತಿಲ್ಲ.
ಇದೇ 17ರಂದು ಮಹಿಳಾ ಯಾತ್ರಿಕರ ಅನುಚಿತ ವೀಡಿಯೊಗಳನ್ನು ಪೋಸ್ಟ್ ಮಾಡಲಾಗಿತ್ತು. ಇವರ ವಿರುದ್ಧ ಇದಾಗಲೇ ಕ್ರಮ ತೆಗೆದುಕೊಳ್ಳಲಾಗಿದೆ. ಇನ್ಸ್ಟಾಗ್ರಾಮ್ ಖಾತೆಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಜೊತೆಗೆ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಗಳನ್ನು ಪ್ರಾರಂಭಿಸಲಾಗಿದೆ ಎಂದು ಯುಪಿ ಪೊಲೀಸರು ಹೇಳಿದ್ದಾರೆ. ಖಾತೆ ನಿರ್ವಾಹಕರನ್ನು ಗುರುತಿಸಲು ಇನ್ಸ್ಟಾಗ್ರಾಮ್ ಅನ್ನು ಹೊಂದಿರುವ ಮತ್ತು ನಿರ್ವಹಿಸುವ ತಂತ್ರಜ್ಞಾನ ಸಮೂಹವಾದ ಮೆಟಾದಿಂದ ಮಾಹಿತಿ ಕೋರಲಾಗಿದೆ. ವಿವರಗಳನ್ನು ಸ್ವೀಕರಿಸಿದ ನಂತರ ಬಂಧನ ಸೇರಿದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ವಿವರಿಸಿದ್ದಾರೆ. ಕೆಲವು ಪ್ರದೇಶಗಳಲ್ಲಿ ಪೊಲೀಸ್ ಭದ್ರತೆಯನ್ನು ಹೆಚ್ಚಿಸಲಾಗಿದೆ. ಪೊಲೀಸರ ತಂಡಗಳು ಬೋಟ್ಗಳ ಮೂಲಕ ನಿರಂತರವಾಗಿ ಗಂಗಾನದಿಯಲ್ಲಿ ಗಸ್ತು ಹೊಡೆಯುತ್ತಿವೆ. ಯಾವುದೇ ಅಘಾತಕಾರಿ ಘಟನೆ ಸಂಭವಿಸಿದರೂ ಕೂಡ ತಕ್ಷಣ ಕಾರ್ಯಪ್ರವೃತ್ತರಾಗಲು ಎಲ್ಲ ರೀತಿಯಲ್ಲೂ ಸಜ್ಜಾಗಿದ್ದಾರೆ.