ನ್ಯೂಸ್ ನಾಟೌಟ್: ಅನ್ಯಕೋಮಿನ ಯುವಕ-ಯುವತಿ ನಡುವಿನ ಪ್ರೇಮ ವಿವಾಹವೊಂದು ಹಿಂದೂಪರ ಸಂಘಟನೆ ಹಾಗೂ ಪೊಲೀಸರ ನಡುವೆ ಸಂಘರ್ಷಕ್ಕೆ ಕಾರಣವಾದ ಘಟನೆ ಬಾಗಲಕೋಟೆಯ ನವನಗರದ ನಗರಸಭೆ ಎದುರು(ಮೇ.೮) ನಿನ್ನೆ ರಾತ್ರಿ ನಡೆದಿದೆ. ಬಾದಾಮಿ ಮೂಲದ ಯುವಕ ಮತ್ತು ಯುವತಿ ದೇವಸ್ಥಾನದಲ್ಲಿ ಪ್ರೇಮ ವಿವಾಹವಾಗಿದ್ದು, ರಕ್ಷಣೆ ಕೋರಿ ಎಸ್ಪಿ ಕಚೇರಿಗೆ ಧಾವಿಸಿದ್ದಾರೆ.
ವಿಷಯ ತಿಳಿದ ಹಿಂದೂ ಸಂಘಟನೆ ಕಾರ್ಯಕರ್ತರು ಎಸ್ಪಿ ಕಚೇರಿಗೆ ದೌಡಾಯಿಸಿದ್ದರು. ಇದೇ ವೇಳೆ ಯುವತಿಯ ಮನೆಯವರೂ ಅಲ್ಲಿಗೆ ಬಂದಿದ್ದಾರೆ. ಈ ವೇಳೆ ಹಿಂದೂ ಕಾರ್ಯಕರ್ತರು-ಯುವತಿ ಮನೆಯವರ ನಡುವೆ ವಾಗ್ವಾದ ಏರ್ಪಟ್ಟಿತ್ತು. ಈ ವೇಳೆ ಮಧ್ಯೆ ಪ್ರವೇಶಿಸಿದ ನವನಗರ ಸಿಪಿಐ ರಾಮಣ್ಣ ಬಿರಾದಾರ್, ಎರಡೂ ಗುಂಪಿನವರನ್ನ ಚದುರಿಸಲು ಪ್ರಯತ್ನಿಸಿದಾಗ, ಹಿಂದೂ ಕಾರ್ಯಕರ್ತ ಕುಮಾರಸ್ವಾಮಿ ಹಾಗೂ ಸಿಪಿಐ ಬಿರಾದಾರ್ ನಡುವೆ ವಾಗ್ವಾದ ಏರ್ಪದೆ. ಈ ವೇಳೆ ಪೊಲೀಸರು ಪರಿಸ್ಥತಿ ತಿಳಿಗೊಳಿಸಲು ಪ್ರಯತ್ನಿಸಿದ್ದಾರೆ.
ಆದ್ರೆ ಈ ಮದುವೆಗೆ ಒಪ್ಪದ ಹಿಂದೂ ಕಾರ್ಯಕರ್ತರು ಪ್ರತಿಭಟನೆಗೆ ಮುಂದಾಗಿದ್ದಾರೆ. ಆಗ ಪೊಲೀಸರ ಮೇಲೆ ಕಲ್ಲು ತೂರಾಟ ನಡೆದಿದ್ದರಿಂದ ಸ್ಥಳದಲ್ಲಿ ವಾತಾವರಣ ಉದ್ವಿಗ್ನಗೊಂಡಿದೆ. ನಂತರ ಪೊಲೀಸರು ಕೆಲವರನ್ನ ವಶಕ್ಕೆ ಪಡೆಯಲು ಮುಂದಾಗಿದ್ದಾರೆ. ಪರಿಸ್ಥಿತಿ ಉದ್ವಿಗ್ನಗೊಳ್ಳುತ್ತಿದ್ದಂತೆ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ.