ನ್ಯೂಸ್ ನಾಟೌಟ್: ಪಂಚಮಸಾಲಿ ಪ್ರತಿಭಟನೆ ವೇಳೆ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರು ಕಾನೂನು ಉಲ್ಲಂಘನೆ ಮಾಡಿದ್ದಾರೆ. ಕೆಲವರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಆದ್ದರಿಂದ, ಲಾಠಿ ಚಾರ್ಜ್ ಮಾಡುವ ಅನಿವಾರ್ಯ ಇತ್ತು ಎಂದು ಗೃಹಸಚಿವ ಜಿ. ಪರಮೇಶ್ವರ್ ಪೊಲೀಸರ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.
2ಎ ಮೀಸಲಾತಿಗೆ ಆಗ್ರಹಿಸಿ ಬೆಳಗಾವಿಯಲ್ಲಿ ಪಂಚಮಸಾಲಿಗಳ ಪ್ರತಿಭಟನೆ ವೇಳೆ ಲಾಠಿ ಚಾರ್ಜ್ ಘಟನೆಗೆ ಸಂಬಂಧಿಸಿದಂತೆ ಮಾಧ್ಯಮಗಳೊಂದಿಗೆ ಗೃಹಸಚಿವರು ಪ್ರತಿಕ್ರಿಯೆ ನೀಡಿದರು.
ಪಂಚಮಸಾಲಿ ಪ್ರತಿಭಟನೆ ಅವರ ಹಕ್ಕು. 5 ಸಾವಿರ ಟ್ರ್ಯಾಕ್ಟರ್ ಗಳನ್ನು ತೆಗೆದುಕೊಂಡು ಮುತ್ತಿಗೆ ಹಾಕಲು ಪ್ರತಿಭಟನೆ ಮಾಡಲು ಮುಂದಾಗಿದ್ದರು. ಅದಕ್ಕೆ ಅನುಮತಿ ನೀಡಲಾಗಿತ್ತು, ಮೂವರು ಸಚಿವರನ್ನು ಪ್ರತಿಭಟನಾ ಸ್ಥಳಕ್ಕೆ ಕಳಿಸಲಾಗಿತ್ತು. ಸಿಎಂ ಜೊತೆ ಮಾತುಕತೆಗೆ ಸ್ವಾಮೀಜಿ ಬರಲಿಲ್ಲ. ಮುಖ್ಯರಸ್ತೆಗೆ ಪ್ರತಿಭಟನಾಕಾರರು ಬಂದರು. ಕಾನೂನು ಉಲ್ಲಂಘನೆ ಮಾಡಿ ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲು ಹೋದಾಗ ಲಘು ಲಾಠಿ ಪ್ರಹಾರ ನಡೆದಿದೆ. ಸ್ವಾಮೀಜಿ ಅವರು ಕಾನೂನು ಉಲ್ಲಂಘನೆ ಮಾಡಿದ್ದಾರೆ. ಲಾಠಿ ಚಾರ್ಜ್ ಮಾಡುವುದು ಅನಿವಾರ್ಯ ಆಗಿತ್ತು. ಪ್ರತಿಭಟನೆ ವೇಳೆ ಕಲ್ಲು ತೂರಾಟ ನಡೆಸಿದ್ದಾರೆ ಆದ್ದರಿಂದ, ಲಾಠಿ ಚಾರ್ಜ್ ಮಾಡುವ ಅನಿವಾರ್ಯ ಇತ್ತು ಎಂದು ತಿಳಿಸಿದರು.
ಇನ್ನೂ ಗೋಲಿಬಾರ್ ಮಾಡುವ ಪ್ಲ್ಯಾನ್ ಇತ್ತು ಎಂಬ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ, ಆ ರೀತಿ ಏನೂ ಇಲ್ಲ, ಪೊಲೀಸರು ಯಾರ ಮೇಲೂ ದುರುದ್ದೇಶಪೂರಿತವಾಗಿ ಲಾಠಿ ಪ್ರಹಾರ ನಡೆಸಿಲ್ಲ ಎಂದು ಹೇಳಿದ್ದಾರೆ.
ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲು ಬಂದ ಹೋರಾಟಗಾರರನ್ನು ಪೊಲೀಸರು ದಾರಿಯಲ್ಲೇ ತಡೆದಿದ್ದರು. ಮುತ್ತಿಗೆ ಹಾಕಲು ಅನುಮತಿ ನೀಡುವುದಿಲ್ಲ ಎಂದು ಪೊಲೀಸರು ತಿಳಿಸಿದರೂ ಪ್ರತಿಭಟನಾಕಾರರು ಪಟ್ಟುಹಿಡಿದಿದ್ದರು. ಈ ವೇಳೆ ತಳ್ಳಾಟ ನೂಕಾಟ ನಡೆದಿದೆ. ಈ ಸಂದರ್ಭದಲ್ಲಿ ಪೊಲೀಸರ ಮೇಲೆಯೇ ಚಪ್ಪಲಿ, ಕಲ್ಲು ಬಿದ್ದಿದೆ. ಮೈ ಮೇಲೆಯೇ ಕಲ್ಲುತೂರಿದ್ದರು, ಇದರಿಂದ ಪೊಲೀಸರು ಪ್ರತಿಭಟನಾ ನಿರತರ ಮೇಲೆ ಲಾಠಿ ಬೀಸಿದ್ದರು.
Click