ನ್ಯೂಸ್ ನಾಟೌಟ್: ಕಾಶ್ಮೀರದ ಪಹಲ್ಗಾಮ್ ನಲ್ಲಿ ಅಮಾಯಕ ಪ್ರವಾಸಿಗರ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದ ಬೆನ್ನಲ್ಲೇ ಭಯೋತ್ಪಾದನೆಗೆ ಪ್ರೋತ್ಸಾಹ ನೀಡುತ್ತಿರುವ ಪಾಕಿಸ್ತಾನದ ಮೇಲೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಲ ಯುದ್ಧ ಮಾಡುವುದಕ್ಕೆ ಮುಂದಾಗಿದೆ. ಪಾಕ್ ಗೆ ಹರಿಯುತ್ತಿರುವ ಸಿಂಧೂ ನದಿಯ ನೀರನ್ನು ನಿಲ್ಲಿಸುವ ನಿರ್ಧಾರ ಮಾಡಿದೆ. ಅಲ್ಲದೆ ಪಾಕ್ ಜೊತೆಗಿನ ಎಲ್ಲ ವ್ಯವಹಾರವನ್ನು ನಿಲ್ಲಿಸುವ ಕ್ರಮಕ್ಕೆ ಮುಂದಾಗಿದೆ. ಈ ಬೆನ್ನಲ್ಲೇ ಪಾಕ್ ನಿಗಿನಿಗಿ ಕೆಂಡವಾಗಿ ಬಿಟ್ಟಿದೆ. ಸಿಂಧೂ ನದಿಯ ನೀರನ್ನು ನಿಲ್ಲಿಸಿದರೆ ಸಂಪೂರ್ಣ ಶಕ್ತಿಯನ್ನು ಪ್ರಯೋಗಿಸಿ ಭಾರತದ ಮೇಲೆ ಯುದ್ಧ ಮಾಡುವ ವಾರ್ನಿಂಗ್ ಅನ್ನು ಪಾಕ್ ನೀಡಿದೆ. ಈ ಬಗ್ಗೆ ಪಾಕಿಸ್ತಾನದ ಪ್ರಧಾನ ಮಂತ್ರಿ ಶೆಹಬ್ಬಾಸ್ ಶರೀಫ್ ಕಚೇರಿಯ ಪ್ರಕಟಣೆಯಲ್ಲಿ ಈ ವಿಚಾರವನ್ನು ತಿಳಿಸಲಾಗಿದೆ.
ಪ್ರಕಟಣೆಯಲ್ಲಿ ಹೇಳಿದ್ದೇನು..?
ಸಿಂಧೂ ನದಿ ನೀರಿನ ಹರಿವನ್ನು ನಿರ್ಬಂಧಿಸಲು ಅಥವಾ ತಿರುಗಿಸಲು ಭಾರತ ಕೈಗೊಳ್ಳುವ ಯಾವುದೇ ಕ್ರಮವನ್ನು ‘ಯುದ್ಧದ ಕೃತ್ಯ’ ಎಂದು ಪರಿಗಣಿಸಲಾಗುತ್ತದೆ. ಇದಕ್ಕೆ ಪಾಕಿಸ್ತಾನ ಸೂಕ್ತ ಪ್ರತ್ಯುತ್ತರವನ್ನು ನೀಡಲಿದೆ. ಸಂಪೂರ್ಣ ರಾಷ್ಟ್ರೀಯ ಶಕ್ತಿಯನ್ನು ಬಳಸಿಕೊಂಡು ಪೂರ್ಣ ಬಲದಿಂದ ಪ್ರತಿಕ್ರಿಯಿಸಲಾಗುತ್ತದೆ ಎನ್ನುವ ಎಚ್ಚರಿಕೆಯನ್ನು ಪಾಕ್ ನೀಡಿದೆ. ಮಾತ್ರವಲ್ಲ ಪಾಕ್ ವಾಯು ಮಾರ್ಗದಲ್ಲಿ ಭಾರತದ ಯಾವುದೇ ವಿಮಾನವನ್ನು ಹಾರಾಟ ಮಾಡಲು ಅನುಮತಿ ನೀಡುವುದಿಲ್ಲ, ಭಾರತದೊಂದಿಗಿನ ಎಲ್ಲ ವ್ಯಾಪಾರ ವಹಿವಾಟು ಕಡಿತ ಮಾಡುವುದಾಗಿಯೂ ವಾರ್ನಿಂಗ್ ಮಾಡಿದೆ.
ಸದ್ಯ ಮೋದಿ ನೇತೃತ್ವದ ಸರ್ಕಾರ ಪಾಕ್ ಗೆ ನೀರು ನಿಲ್ಲಿಸಿ ಬುದ್ಧಿ ಕಲಿಸೋಕೆ ಮುಂದಾಗಿದೆ. ನೀರು ನಿಂತರೆ ಪಾಕ್ ಬಹುತೇಕ ಭೀಕರ ಬರಗಾಲವನ್ನೇ ಎದುರಿಸಬೇಕಾಗುತ್ತದೆ. ಕೃಷಿ, ಕೈಗಾರಿಕೆ ಎಲ್ಲವೂ ನೆಲಕಚ್ಚುತ್ತದೆ. ಮೊದಲೇ ಹೊಟ್ಟೆಗೆ ಹಿಟ್ಟಿಲ್ಲದೆ ಸಂಕಷ್ಟದಲ್ಲಿರುವ ಪಾಕ್ ಭಾರತದ ನಡೆಯಿಂದ ತೀವ್ರ ಇಕ್ಕಟ್ಟಿಗೆ ಸಿಲುಕಿಕೊಂಡಿದೆ. ಈಗ ನೀರು ನಿಲ್ಲಿಸಿದರೆ ಯುದ್ಧ ಮಾಡಿಯೇ ತಿರುವ ಬೆದರಿಕೆಯನ್ನು ಹಾಕುತ್ತಿದೆ. 1960ರಲ್ಲಿ ವಿಶ್ದ ಬ್ಯಾಂಕ್ ಮಧ್ಯಸ್ಥಿಕೆಯಲ್ಲಿ ಸಿಂಧೂ ನದಿಯ ನೀರು ಹಂಚಿಕೆ ಒಪ್ಪಂದ ನಡೆದಿತ್ತು. ಭಾರತದಿಂದ ಹರಿಯುವ ಸಿಂಧೂ ನದಿಯ ನೀರನ್ನೇ ಪಾಕಿಸ್ತಾನದ ಕೃಷಿ ಆರ್ಥಿಕತೆ ಅವಲಂಭಿಸಿದೆ.