ನ್ಯೂಸ್ ನಾಟೌಟ್: ಭಾರತ-ಪಾಕಿಸ್ತಾನ ಕದನ ವಿರಾಮ ಘೋಷಣೆಯಾದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಇಂದು(ಮೇ.13) ಬೆಳಗ್ಗೆ ಪಂಜಾಬ್ ನ ಅದಂಪುರ ವಾಯುನೆಲೆಗೆ ಭೇಟಿ ನೀಡಿದ್ದು, ವಾಯುಪಡೆಯ ಸಿಬ್ಬಂದಿಯ ಬಳಿ ಮಾಹಿತಿ ಪಡೆದಿದ್ದಾರೆ. ಹಾಗೇ, ಸೈನಿಕರೊಂದಿಗೆ ಸಂವಾದ ನಡೆಸಿದ್ದಾರೆ.
ಸೈನಿಕರು ಸಂತೋಷದಿಂದ ಪ್ರಧಾನಿ ಮೋದಿಯವರನ್ನು ಸುತ್ತುವರೆದು ಮಾತುಕತೆ ನಡೆಸುತ್ತಿರುವ ಫೋಟೋಗಳನ್ನು ಪ್ರಧಾನಮಂತ್ರಿ ಕಚೇರಿ ಹಂಚಿಕೊಂಡಿದೆ.
ಭಾರತದ “ಆಪರೇಷನ್ ಸಿಂಧೂರ್” ನಂತರ, ಮೇ 9 ಮತ್ತು 10ರ ಮಧ್ಯರಾತ್ರಿ ಪಾಕಿಸ್ತಾನ ದಾಳಿ ಮಾಡಲು ಪ್ರಯತ್ನಿಸಿದ ವಾಯುಪಡೆಯ ಕೇಂದ್ರಗಳಲ್ಲಿ ಅದಮ್ ಪುರವೂ ಒಂದು. ಭಾರತ ಮತ್ತು ಪಾಕಿಸ್ತಾನ ಕದನ ವಿರಾಮಕ್ಕೆ ಒಪ್ಪಿಕೊಂಡ ಕೆಲವು ದಿನಗಳ ನಂತರ, ಪ್ರಧಾನಿ ನರೇಂದ್ರ ಮೋದಿ ಇಂದು ಪಂಜಾಬ್ ನ ಅದಮ್ ಪುರ ವಾಯುನೆಲೆಗೆ ಭೇಟಿ ನೀಡಿ ಸೈನಿಕರೊಂದಿಗೆ ಸಂವಾದ ನಡೆಸಿದರು.
ಪಾಕಿಸ್ತಾನವು ಜೆಎಫ್ -17 ಯುದ್ಧ ವಿಮಾನಗಳಿಂದ ಹಾರಿಸಲಾದ ಹೈಪರ್ಸಾನಿಕ್ ಕ್ಷಿಪಣಿಗಳು ಭಾರತದ ಎಸ್ -400 ವಾಯು ರಕ್ಷಣಾ ವ್ಯವಸ್ಥೆಯನ್ನು ಅದಂಪುರದಲ್ಲಿ ನಾಶಪಡಿಸಿವೆ ಎಂದು ಹೇಳಿಕೊಂಡಿತ್ತು. ಆದರೆ ಭಾರತೀಯ ಅಧಿಕಾರಿಗಳು ಈ ಆರೋಪವನ್ನು ತಿರಸ್ಕರಿಸಿದ್ದಾರೆ.
ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, ಯೋಧರೊಂದಿಗೆ ನಡೆಸಿದ ಸಂವಾದದ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇದನ್ನು “ಬಹಳ ವಿಶೇಷ ಅನುಭವ” ಎಂದು ಕರೆದಿದ್ದಾರೆ.
“ಇಂದು ಬೆಳಿಗ್ಗೆ, ನಾನು ಎಎಫ್ಎಸ್ ಆದಂಪುರಕ್ಕೆ ಹೋಗಿ ನಮ್ಮ ಧೈರ್ಯಶಾಲಿ ವಾಯು ಯೋಧರು ಮತ್ತು ಸೈನಿಕರನ್ನು ಭೇಟಿಯಾದೆ. ಧೈರ್ಯ, ದೃಢನಿಶ್ಚಯ ಮತ್ತು ನಿರ್ಭಯತೆಯನ್ನು ಸಾರುವ ಸೈನಿಕರೊಂದಿಗೆ ಇರುವುದು ಬಹಳ ವಿಶೇಷ ಅನುಭವವಾಗಿತ್ತು. ನಮ್ಮ ರಾಷ್ಟ್ರಕ್ಕಾಗಿ ನಮ್ಮ ಸಶಸ್ತ್ರ ಪಡೆಗಳು ಮಾಡುವ ಎಲ್ಲ ಸೇವೆ ಮತ್ತು ತ್ಯಾಗಕ್ಕೂ ಭಾರತವು ಅವರಿಗೆ ಶಾಶ್ವತವಾಗಿ ಕೃತಜ್ಞವಾಗಿದೆ” ಎಂದು ಪ್ರಧಾನಿ ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಅರಣ್ಯದಲ್ಲಿ ಭಾರತೀಯ ಸೇನಾ ಕಾರ್ಯಾಚರಣೆ..! ಒಬ್ಬ ಉಗ್ರನ ಹತ್ಯೆ, ಇಬ್ಬರು ವಶಕ್ಕೆ..!