ನ್ಯೂಸ್ ನಾಟೌಟ್: ಗುಜರಾತಿನ ಪೋರ್ ಬಂದರ್ ನಿಂದ ಇರಾನ್ ನ “ಬಂದರ್ ಅಬ್ಬಾಸ್” ಎಂಬ ಬಂದರಿನತ್ತ ಸಾಗುತ್ತಿದ್ದ ವಾಣಿಜ್ಯ ಹಡಗು ಮುಳುಗಿ ಅಪಾಯಕ್ಕೆ ಸಿಲುಕಿದ್ದ 12 ಭಾರತೀಯ ಸಿಬ್ಬಂದಿಯನ್ನು ಪಾಕ್ ನೆರವಿನೊಂದಿಗೆ ಭಾರತೀಯ ಕರಾವಳಿ ಪಡೆ (ಐಸಿಜಿ) ರಕ್ಷಿಸಿದೆ ಎಂದು ಅಧಿಕಾರಿಗಳು ಇಂದು (ಡಿ.5) ತಿಳಿಸಿದ್ದಾರೆ.
ಉತ್ತರ ಅರಬ್ಬಿ ಸಮುದ್ರದಲ್ಲಿ ಭಾರತದ ಸಾಗರ ವ್ಯಾಪ್ತಿಯ ಹೊರಗೆ ಪಾಕಿಸ್ತಾನದ ಸಾಗರ ವಲಯದಲ್ಲಿ ‘ಎಂಎಸ್ವಿ ಅಲ್ ಪಿರನ್ಪಿರ್’ ಎಂಬ ಹಡಗು ಮುಳುಗಡೆಯಾಗಿತ್ತು.
ಬಳಿಕ ಪಾಕಿಸ್ತಾನದ ಸಾಗರ ಭದ್ರತಾ ಪಡೆ(ಪಿಎಂಎಸ್ಎ) ಸಹಯೋಗದಲ್ಲಿ ಭಾರತೀಯ ಕರಾವಳಿ ಪಡೆ ರಕ್ಷಣಾ ಕಾರ್ಯಾಚರಣೆಯನ್ನು ನಡೆಸಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಡಿಸೆಂಬರ್ 4ರಂದು ಹಡಗು ಮುಳುಗಡೆಗೊಂಡಿತ್ತು. ಭಾರತೀಯ ಕರಾವಳಿ ಪಡೆಯ ‘ಸಾರ್ತಕ್’ ಹಡಗಿನ ನೆರವಿನೊಂದಿಗೆ ರಕ್ಷಣಾ ಕಾರ್ಯಾಚರಣೆ ನಡೆಸಲಾಯಿತು.
ಮಾನವೀಯ ನೆಲೆಯಲ್ಲಿ ಹುಡುಕಾಟ ಮತ್ತು ಕಾರ್ಯಾಚರಣೆಯ ಉದ್ಧಕ್ಕೂ ಎರಡೂ ದೇಶಗಳ ಸಾಗರ ರಕ್ಷಣೆ ಸಮನ್ವಯ ಕೇಂದ್ರ (ಎಂಆರ್ಸಿಸಿ) ನಿಕಟ ಸಮನ್ವಯವನ್ನು ಸಾಧಿಸಿತು ಎಂದು ಭಾರತೀಯ ಕರಾವಳಿ ಪಡೆ ತಿಳಿಸಿದೆ.
ಡಿಸೆಂಬರ್ 2ರಂದು ವಾಣಿಜ್ಯ ಹಡಗು ಸರಕುಗಳೊಂದಿಗೆ ಪೋರ್ ಬಂದರ್ ನಿಂದ ಇರಾನ್ ನತ್ತ ಹೊರಟಿತ್ತು. ಸಾಗರದ ಪ್ರಕ್ಷುಬ್ಧತೆ ಮತ್ತು ಪ್ರವಾಹಕ್ಕೆ ಸಿಲುಕಿ ಹಡಗು ಬುಧವಾರ ಬೆಳಿಗ್ಗೆ ಮುಳುಗಡೆಗೊಂಡಿತು. ಎಲ್ಲ ಸಿಬ್ಬಂದಿ ಆರೋಗ್ಯವಾಗಿದ್ದಾರೆ ಎಂದು ಐಸಿಜಿ ಪ್ರಕಟಣೆ ತಿಳಿಸಿದೆ.
ಕಾರ್ಯಾಚರಣೆಯಲ್ಲಿ ಪಾಕಿಸ್ತಾನದ ಸಾಗರ ಭದ್ರತಾ ಪಡೆಯ ವಿಮಾನ ಹಾಗೂ ಎಂವಿ ಕಾಸ್ಕೊ ಗ್ಲೋರಿ ಎಂಬ ಹಡಗು ನೆರವಾಗಿದೆ.
Click