ನ್ಯೂಸ್ ನಾಟೌಟ್: ಹಿರಿಯ ಪತ್ರಕರ್ತ ಧರ್ಮಸ್ಥಳ ಗ್ರಾಮದ ಪುದುವೆಟ್ಟು ನಿವಾಸಿ ಭುವನೇಂದ್ರ ಪುದುವೆಟ್ಟು (42) ಅನಾರೋಗ್ಯದಿಂದ ಮಂಗಳವಾರ (ನ.19ರಂದು) ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.
ಕಳೆದು ಎರಡು ದಿನಗಳ ಹಿಂದೆ ತೀವ್ರ ಹೊಟ್ಟೆನೋವು ಮತ್ತು ವಾಂತಿ ಕಾಣಿಸಿಕೊಂಡಿದ್ದರಿಂದ ಅವರನ್ನು ಮೂಡುಬಿದಿರೆಯ ಆಳ್ವಾಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರೋಗ್ಯ ತಪಾಸಣೆ ವೇಳೆ ಪಿತ್ತಕೋಶದಲ್ಲಿ ಕಲ್ಲು ಇರುವುದರಿಂದ ಅಕ್ಯುಟ್ ಪ್ರಾಂಕಿಯಾಸಿಸ್ ಸಮಸ್ಯೆ ಇರುವುದು ಗೊತ್ತಾಗಿತ್ತು. ತಕ್ಷಣ ಅವರನ್ನು ಮಂಗಳೂರು ಅತ್ತಾವರದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಮಂಗಳವಾರ ಕೊನೆಯುಸಿರೆಳೆದಿದ್ದಾರೆ.
ಕರಾವಳಿ ಅಲೆ, ವೆಬ್ದುನಿಯಾ, ಈಟಿವಿ, ಕಸ್ತೂರಿ ಚಾನೆಲ್ ನಲ್ಲಿ ಪತ್ರಕರ್ತರಾಗಿದ್ದ ಅವರು, ಮಂಗಳೂರು ವಿಜಯವಾಣಿ ಪತ್ರಿಕೆಯ ಮುಖ್ಯ ಉಪಸಂಪಾದಕರಾಗಿದ್ದರು. ಬಳಿಕ ಬೆಳ್ತಂಗಡಿ ಸುದ್ದಿ ಬಿಡುಗಡೆ ಪತ್ರಿಕೆಯ ಮುಖ್ಯ ವರದಿಗಾರರಾಗಿದ್ದರು. ಮೃತರು ತಂದೆ ನಾರಾಯಣ ಪೂಜಾರಿ, ತಾಯಿ ಮೋಹಿನಿ, ಪತ್ನಿ ಸುಜಾತ, ಈರ್ವರು ಮಕ್ಕಳು ಮತ್ತು ಸಹೋದರ ಯತೀಂದ್ರ ಮತ್ತು ಸಹೋದರಿಯನ್ನು ಅಗಲಿದ್ದಾರೆ.