ನ್ಯೂಸ್ ನಾಟೌಟ್: ದಕ್ಷಿಣ ಕನ್ನಡ ಜೇನು ವ್ಯವಸಾಯಗಾರರ ಸಹಕಾರಿ ಸಂಘದ ಅಧ್ಯಕ್ಷರಾಗಿ ಹತ್ತು ಹಲವು ಯೋಜನೆಗಳ ಮೂಲಕ ಸಂಸ್ಥೆಯನ್ನು ಅಭಿವೃದ್ಧಿ ಪಥದಲ್ಲಿ ಕೈಹಿಡಿದು ಮುನ್ನಡೆಸುತ್ತಿರುವ ಸಹಕಾರಿ ರತ್ನ ಚಂದ್ರ ಕೋಲ್ಚಾರ್ ಅವರು ಜೂ.21ರಂದು ಕೋಲಾರದಲ್ಲಿ ನಡೆದ ಉದ್ಯಮಿ ಒಕ್ಕಲಿಗ ಪ್ರತಿನಿಧಿಗಳ ಮತ್ತು ಹೂಡಿಕೆದಾರರ ಸಮಾವೇಶದಲ್ಲಿ ಪಾಲ್ಗೊಂಡರು. ಕೋಲಾರದ ನಂದಿನಿ ಅರಮನೆ ಸಭಾಂಗಣದಲ್ಲಿ ಈ ಕಾರ್ಯಕ್ರಮ ನಡೆಯಿತು.
ಇದು 2ನೇ ವಾರ್ಷಿಕ ಸಮಾವೇಶವಾಗಿದ್ದು, ಈ ಕಾರ್ಯಕ್ರಮದಲ್ಲಿ 2 ಸಾವಿರ ಮಂದಿಗೆ ಜೇನು ಮಾರಾಟ, ಸಂಸ್ಕರಣೆ, ಮೌಲ್ಯ ವರ್ಧನೆ ಬಗ್ಗೆ ಚಂದ್ರ ಕೋಲ್ಚಾರ್ ಮಾಹಿತಿ ನೀಡಿದರು. ಜೇನು ಮಾರಾಟವಲ್ಲದೆ ಜೇನು ಉತ್ಪನ್ನಗಳ ಮೌಲ್ಯ ವರ್ಧನೆಯನ್ನು ಚಾಕ್ಲೇಟ್ ತಯಾರು ಮಾಡುವ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯ ಜೇನು ಕೃಷಿಕರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವಲ್ಲಿ ಹೊಸ ಇತಿಹಾಸವನ್ನು ಸೃಷ್ಟಿಸಲು ಹೆಜ್ಜೆ ಇಟ್ಟಿದೆ ಎಂದು ವಿವರಿಸಿದರು.
ಪ್ರಾಡೆಕ್ಟ್ ಮಾರ್ಕೆಟಿಂಗ್, ಹೂಡಿಕೆದಾರರು, ಸಾಧಕ ತಯಾರಕರು ಸೇರಿದಂತೆ ಹಲವಾರು ಉದ್ಯಮಿಗಳು ಸಮಾವೇಶದಲ್ಲಿ ಹಾಜರಿದ್ದರು. ಕೋಲಾರ, ಚಿಕ್ಕಬಳ್ಳಾಪುರ, ದೊಡ್ಡ ಬಳ್ಳಾಪುರ, ತುಮಕೂರು ಸೇರಿದಂತೆ ಒಟ್ಟು ನಾಲ್ಕು ಜಿಲ್ಲೆಗಳ ಸಮಾವೇಶ ಇದಾಗಿತ್ತು. ಒಟ್ಟು ಎರಡು ಸಾವಿರ ಮಂದಿ ಸಮಾವೇಶಕ್ಕೆ ಬಂದಿದ್ದರು.