ನ್ಯೂಸ್ ನಾಟೌಟ್: ಹಾಲು, ಬ್ರೆಡ್ ಮಾರಾಟ, ತರಕಾರಿ ಮಾರಾಟ, ಬೇಕರಿ, ಕಾಂಡಿಮೆಂಟ್ಸ್, ಟೀ ಅಂಗಡಿಯವರಿಗೆ ಲಕ್ಷ ಲಕ್ಷ ತೆರಿಗೆ ಬಾಕಿ ನೋಟಿಸ್ ನೀಡಿದ ಬಗ್ಗೆ ರಾಜ್ಯದಲ್ಲಿ ಭಾರಿ ಸುದ್ದಿಯಾಗಿದೆ. ತಮ್ಮಷ್ಟಕ್ಕೆ ವ್ಯಾಪಾರ-ವಹಿವಾಟು ಮಾಡುತ್ತಿದ್ದ ಸಣ್ಣ ಪುಟ್ಟ ಅಂಗಡಿ ಮಾಲೀಕರಿಗೆ ವಾಣಿಜ್ಯ ತೆರಿಗೆಯ ತೆರಿಗೆ ನೋಟಿಸ್ ನಿಂದ ತೀವ್ರ ಇಕ್ಕಟ್ಟಿಗೆ ಸಿಲುಕಿಸುವಂತಾಗಿದೆ.
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ವಾಣಿಜ್ಯ ತೆರಿಗೆ (Commercial Tax) ಹೆಚ್ಚುವರಿ ಆಯುಕ್ತ ಚಂದ್ರಶೇಖರ್ ನಾಯಕ್, 40 ಲಕ್ಷ ರೂ. ವಹಿವಾಟು ನಡೆಸಿದ 6 ಸಾವಿರ ರೂ. ಮಂದಿಗೆ ನೋಟಿಸ್ ನೀಡಿದ್ದೇವೆ. ಹಾಲು, ಬ್ರೆಡ್ ಮಾರಾಟ, ತರಕಾರಿ ಮಾರಾಟದ ಬಗ್ಗೆ ದಾಖಲೆ ನೀಡಿದರೆ ಖಂಡಿತ ಬಡ್ಡಿಯನ್ನು ಮನ್ನಾ ಮಾಡಲಾಗುತ್ತದೆ. ಉಳಿದಂತೆ 40 ಲಕ್ಷ ರೂ. ವಹಿವಾಟು ಹೆಚ್ಚಾದರೆ ವಾರ್ಷಿಕವಾಗಿ ಜಿಎಸ್ಟಿ ನೋಂದಣಿ ಮಾಡಿಕೊಳ್ಳಬೇಕು. ಕಂಪೋಸಿಷನ್ ಟ್ಯಾಕ್ಸ್ ಅಡಿ 1% ಕೂಡ ಕಟ್ಟುವ ಅವಕಾಶ ಇದೆ ಎಂದು ತಿಳಿಸಿದರು.
ಕಳೆದ 2021 ರಿಂದ 2024 ವರೆಗೆ ಪ್ರತಿ ವರ್ಷ 40 ಲಕ್ಷ ರೂ.ಗಿಂತ ಹೆಚ್ಚಿನ ವ್ಯಾಪಾರ ವಹಿವಾಟು ನಡೆಸಿದವರಿಗೆ ಮಾತ್ರ ನೋಟಿಸ್ ನೀಡಲಾಗಿದೆ. ಬ್ಯಾಂಕ್ ದಾಖಲೆಗಳ ಆಧಾರದಲ್ಲಿ ನೋಟಿಸ್ ನೀಡಲಾಗಿದೆ ಎಂದು ಹೇಳಿದರು. ಹೂ, ಹಣ್ಣು, ಹಾಲು ಸೇರಿ ಮೊದಲಾದವು ಜಿಎಸ್ಟಿಯಿಂದ ಹೊರಗಡೆ ಇದೆ. ಇವರಿಗೆ ನೋಟಿಸ್ ಬಂದಿದ್ದರೆ ಆ ವ್ಯಾಪಾರಿಗಳು ಸ್ಪಷ್ಟೀಕರಣ ನೀಡಬಹುದು. ಸರಕು ಖರೀದಿ ವೇಳೆ ಜಿಎಸ್ಟಿ ಪಾವತಿ ಮಾಡಿದ್ದರೆ ಮಾರಾಟದಲ್ಲಿ ಜಿಎಸ್ಟಿ ಪಾವತಿಸಬೇಕಾದ ಅವಶ್ಯಕತೆ ಇರುವುದಿಲ್ಲ. ಅದಕ್ಕೆ ಪೂರಕ ದಾಖಲೆಗಳನ್ನು ವಾಣಿಜ್ಯ ತೆರಿಗೆ ಇಲಾಖೆಗೆ ಸಲ್ಲಿಸಬೇಕಾಗುತ್ತದೆ ಎಂದರು.