ನ್ಯೂಸ್ ನಾಟೌಟ್: ಜನಸಾಮಾನ್ಯರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಆದರೆ ಇವುಗಳಲ್ಲಿ ಹೆಚ್ಚಿನ ಯೋಜನೆಗಳು ಬಡವರ್ಗದ ಜನರ ಉದ್ಧಾರಕ್ಕಾಗಿ ಕೈಗೊಳ್ಳಲಾಗಿರುತ್ತದೆ. ಜಡ ಜನತೆಗೆ ಜೀವನ ಸಾಗಿಸಲು ನೆರವಾಗುವ ನಿಟ್ಟಿನಲ್ಲಿ ಜಾರಿಗೆ ತಂದಿರುವ ಆರೋಗ್ಯ ಯೋಜನೆಯನ್ನು ಕಿಡಿಗೇಡಿಗಳು ಬಡವರ ಹೆಸರಿನಲ್ಲಿ, ಅವರ ಅರಿವಿಗೆ ಬಾರದಂತೆ ದುರುಪಯೋಗಪಡಿಸಿ ತಮ್ಮ ಜೇಬು ತುಂಬಿಸುವ ಪ್ರಕರಣವೊಂದು ತಡವಾಗಿದೆ ಬೆಳಕಿಗೆ ಬಂದಿದೆ.
ಅಂದ ಹಾಗೆ ಈ ಘಟನೆ ನಡೆದಿರುವುದು ಉತ್ತರಪ್ರದೇಶದ ಆಗ್ರಾ ಜಿಲ್ಲೆಯಲ್ಲಿ. ಇಲ್ಲಿನ ಮಹಿಳೆಯೊಬ್ಬರು 2021ರಿಂದ 2023 ವರ್ಷದ ಅವಧಿಯಲ್ಲಿ (30 ತಿಂಗಳಲ್ಲಿ ) 25 ಬಾರಿ ಹೆರಿಗೆ ಮಾಡಿಸಿಕೊಂಡಿದ್ದು, ಐದು ಬಾರಿ ಸಂತಾನಹರಣ ಶಸ್ತ್ರಚಿಕಿತ್ಸೆಗೆ ಒಳಗಾಗಿರುವುದು ತಡವಾಗಿ ಬೆಳಕಿಗೆ ಬಂದಿದೆ. ಒಬ್ಬ ಬಡ ಹೆಣ್ಣು ಮಗಳು ಇಷ್ಟು ಬಾರಿ ಹೆರಿಗೆ ಮಾಡಿಸಿಕೊಳ್ಳಲು ಹೇಗೆ ಸಾಧ್ಯ? ಎಂದು ಅನುಮಾನಗೊಂಡ ಆರೋಗ್ಯ ಇಲಾಖೆ, ದಾಖಲೆಗಳ ಬುಡಕ್ಕೆ ಕೈಹಾಕಿದಾಗ ಅಸಲಿ ಕಥೆ ಬಯಲಾಗಿದೆ. 45,000 ರೂ. ಸರ್ಕಾರಿ ಯೋಜನೆ ಪರಿಹಾರ ಹಣವನ್ನು ಪಡೆದಿರುವ ಹೆಣ್ಣು ಮಗಳು, ಒಂದಲ್ಲ, ಎರಡಲ್ಲ ಹಲವು ಬಾರಿ ಹೆರಿಗೆ ಮಾಡಿಸಿಕೊಂಡಿರುವುದಕ್ಕೆ ಉತ್ತರ ಪ್ರದೇಶದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ದಾಖಲೆಗಳಿವೆ ಎಂದು ವರದಿ ಬಹಿರಂಗಪಡಿಸಿವೆ.
ಸರ್ಕಾರದ ರಾಷ್ಟ್ರೀಯ ಆರೋಗ್ಯ ಮಿಷನ್ ನಡೆಸುವ ಯೋಜನೆಗಳ ಅಡಿಯಲ್ಲಿ ವಂಚನೆಯ ಹಕ್ಕುಗಳು ಪರಿಶೀಲಿಸಿದಾಗ ಇದು ಮೋಸದ ಜಾಲ ಎಂಬುದು ದೃಢವಾಗಿದೆ. ಇಲ್ಲಿ ನಮೂದಿಸಲಾದ ಮಹಿಳೆಯ ಹೆಸರು ಅಸಲಿ ಮಹಿಳೆಯದ್ದು. ಆದರೆ, ಹೆರಿಗೆ ಮಾಡಿಸಿಕೊಂಡಿರುವುದು, ಸಂತಾನಹರಣ ಶಸ್ತ್ರಚಿಕಿತ್ಸೆಗೆ ಒಳಗಾಗಿರುವುದು ಅಕ್ಷರಶಃ ಸುಳ್ಳು ಎನ್ನಲಾಗಿದೆ. ಸಮುದಾಯ ಆರೋಗ್ಯ ಇಲಾಖೆ ಕೇಂದ್ರದ ಸಿಬ್ಬಂದಿಯೇ ಮಹಿಳೆಯ ಹೆಸರಿನಲ್ಲಿ ನಕಲು ಮಾಡಿ, ಸರ್ಕಾರಿ ಯೋಜನೆಯ ಹಣಕ್ಕಾಗಿ ಇಂತಹ ಕಿಡಿಗೇಡಿ ಕೆಲಸಕ್ಕೆ ಕೈಹಾಕಿರುವುದು ತನಿಖೆಯಿಂದ ಗೊತ್ತಾಗಿದೆ.
ಯೋಜನೆಯ ಹೆಸರಿನಲ್ಲಿ ಹಣ ಪಡೆಯುವುದರ ಹಾಗೂ ಪಡೆದಿರುವ ಬಗ್ಗೆ ಯಾವುದೇ ಅರಿವಿಲ್ಲದ ಮಹಿಳೆಯನ್ನು ಕೃಷ್ಣ ಕುಮಾರಿ (35) ಎಂದು ಗುರುತಿಸಲಾಗಿದೆ. ಈಕೆಯ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಬ್ಯಾಂಕ್ ಖಾತೆ ತೆರೆದು, ಅದಕ್ಕೆ ಸರ್ಕಾರ ಕೊಟ್ಟ ಹಣವನ್ನು ವರ್ಗಾಯಿಸಲಾಗಿದೆ. ಹಗರಣಕ್ಕಾಗಿ ಬಡ ಮಹಿಳೆಯ ಗುರುತನ್ನು ಇಲ್ಲಿ ದುರುಪಯೋಗಪಡಿಸಿಕೊಳ್ಳಲಾಗಿದೆ. ಸಿಬ್ಬಂದಿಯ ಜಾಲ ಪತ್ತೆಯಾದ ಬೆನ್ನಲ್ಲೇ ನಾಲ್ವರು ಆರೋಗ್ಯ ಸಿಬ್ಬಂದಿ ಸೇರಿದಂತೆ ಐವರ ವಿರುದ್ಧ ದೂರು ದಾಖಲಾಗಿದೆ. ಪ್ರಸ್ತುತ ಮೂವರನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.