ನ್ಯೂಸ್ ನಾಟೌಟ್: ಅಪ್ರಾಪ್ತನಿಗೆ ಸ್ಕೂಟಿ ಚಾಲನೆ ಮಾಡಲು ನೀಡಿದಕ್ಕಾಗಿ ವಾಹನ ಮಾಲೀಕನಿಗೆ ನ್ಯಾಯಾಲಯ 25 ಸಾವಿರ ದಂಡ ವಿಧಿಸಿದೆ.ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ಜೆ ಎಂ ಎಫ್ ಸಿ ನ್ಯಾಯಾಲಯ ಸ್ಕೂಟಿ ಮಾಲೀಕರಿಗೆ 25 ಸಾವಿರ ದಂಡ ವಿಧಿಸಿ ಆದೇಶ ಹೊರಡಿಸಿದೆ.
ಏನಿದು ಘಟನೆ?
ಏಪ್ರಿಲ್ ನಾಲ್ಕರಂದು ಮೂಡಿಗೆರೆ ಪೊಲೀಸ್ ಠಾಣಾಧಿಕಾರಿ ಶ್ರೀನಾಥ್ ರೆಡ್ಡಿಯವರ ಸಮ್ಮುಖದಲ್ಲಿ ಬಾಲಕನೋರ್ವ ಸ್ಕೂಟಿ ಚಾಲನೆ ಮಾಡಿಕೊಂಡು ಬಂದಿದ್ದಾನೆ. ಪೊಲೀಸ್ ಠಾಣಾಧಿಕಾರಿ ವಾಹನ ತಪಾಸಣೆ ಮಾಡುತ್ತಿದ್ದಾಗ ಈ ಬಾಲಕ ಸಿಕ್ಕಿ ಬಿದ್ದಿದ್ದಾನೆ. ಈ ವೇಳೆ ಪೊಲೀಸರು ಅಪ್ರಾಪ್ತ ಬಾಲಕನನ್ನು ತಡೆದು ದಾಖಲೆಗಳನ್ನು ಪರಿಶೀಲನೆ ನಡೆಸಿದಾಗ ಸ್ಕೂಟಿಯು ಬಾಪುನಗರ ನಿವಾಸಿ ಮಹಮ್ಮದ್ ಸಿರಾಜ್ ಎಂಬುವವರಿಗೆ ಸೇರಿದ್ದು ಎಂದು ತಿಳಿದುಬಂದಿದೆ.
ಅಪ್ರಾಪ್ತನಿಗೆ ವಾಹನ ಚಾಲನೆ ಮಾಡಲು ನೀಡಿದ ಆರೋಪದ ಮೇಲೆ ಪೊಲೀಸರು ವಾಹನ ಮಾಲೀಕ ಮಹಮ್ಮದ್ ಸಿರಾಜ್ ವಿರುದ್ಧ ಕೇಸು ದಾಖಲಿಸಿದ್ದರು. ಅದರಂತೆ ಏಪ್ರಿಲ್ 15 ರಂದು ಪ್ರಕರಣದ ವಿಚಾರಣೆ ನಡೆಸಿದ ಮೂಡಿಗೆರೆ ಜೆ ಎಂ ಎಫ್ ಸಿ ನ್ಯಾಯಾಲದ ನ್ಯಾಯಾಧೀಶರು ವಾಹನ ಮಾಲೀಕ ಮಹಮ್ಮದ್ ಸಿರಾಜ್ ಅವರಿಗೆ 25 ಸಾವಿರ ದಂಡ ಹಾಕಿದ್ದಾರೆ.ಇತ್ತೀಚೆಗೆ ಅಪ್ರಾಪ್ತರು ವಾಹನ ಚಾಲನೆ ಮಾಡಿಕೊಂಡು ಹೋಗುವ ಉದಾಹರಣೆಗಳು ಹೆಚ್ಚುತ್ತಿದ್ದು, ಅದರಲ್ಲೂ ದ್ವಿಚಕ್ರ ವಾಹನ ಚಾಲನೆ ಮಾಡುವವರ ಸಂಖ್ಯೆ ಹೆಚ್ಚಾಗಿದೆ.ಇದರಿಂದಾಗಿ ಅಪಘಾತಗಳು ಜಾಸ್ತಿಯಾಗುತ್ತಿದ್ದು,ಇದೀಗ ಮೂಡಿಗೆರೆ ನ್ಯಾಯಾಲಯ ನೀಡಿರುವ ತೀರ್ಪು ವಾಹನ ಮಾಲೀಕರಿಗೆ ಎಚ್ಚರಿಕೆ ಗಂಟೆಯಾಗಿದೆ.