ನ್ಯೂಸ್ ನಾಟೌಟ್: ಮನೆಯ ಬಾಗಿಲಿಗೆ ಬಂದ ಮೈಕ್ರೋಫೈನಾನ್ಸ್ ಸಿಬ್ಬಂದಿಯ ಕಿರುಕುಳಕ್ಕೆ ಬೇಸತ್ತು ಮಹಿಳೆ ನೇಣಿಗೆ ಶರಣಾಗಿರುವ ಘಟನೆ ಹಾಸನದ (Hassan) ಆಲೂರು (Alur) ತಾಲೂಕಿನ, ಹಳ್ಳಿಯೂರು ಗ್ರಾಮದಲ್ಲಿ ನಡೆದಿದೆ.
ಕೆಂಚಮ್ಮ(50) ನೇಣಿಗೆ ಶರಣಾದ ಮಹಿಳೆ ಎಂದು ಗುರುತಿಸಲಾಗಿದೆ. ಬಿಎಸ್ಎಸ್, ಇಐಎಫ್ ಹೆಸರಿನ ಫೈನಾನ್ಸ್ ಕಂಪನಿಯಿಂದ ಕೆಂಚಮ್ಮ 2 ಲಕ್ಷ ರೂ. ಸಾಲ ಪಡೆದಿದ್ದರು. ಪ್ರತಿ ತಿಂಗಳು ಸರಿಯಾಗಿ ಕಂತಿನ ಹಣ ಕಟ್ಟುತ್ತಿದ್ದರು. ಈ ತಿಂಗಳು ಹಣ ಇಲ್ಲದ ಕಾರಣ ಕಟ್ಟಿರಲಿಲ್ಲ.
ಇಂದೇ ಹಣ ಕಟ್ಟಬೇಕೆಂದು ಬಿಎಸ್ಎಸ್ ಮೈಕ್ರೋಫೈನಾನ್ಸ್ ಸಿಬ್ಬಂದಿ ಮನೆಯ ಬಳಿಯೇ ಬಂದು ಕುಳಿತಿದ್ದರು. ಇದರಿಂದ ಮನನೊಂದು ಮನೆಯಲ್ಲಿಯೇ ಕೆಂಚಮ್ಮ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೆಂಚಮ್ಮ ಸಾವಿನ ಸುದ್ದಿ ತಿಳಿದು ಮೈಕ್ರೋಫೈನಾನ್ಸ್ ಸಿಬ್ಬಂದಿ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಆಲೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.