ನ್ಯೂಸ್ ನಾಟೌಟ್: ರೈಟ್ ಟು ಲಿವ್ ಕೋಟೆ ಫೌಂಡೇಶನ್ ವತಿಯಿಂದ ರೈಟ್ ಟು ಲಿವ್ ಯೋಜನೆಯಡಿ ಸುಳ್ಯದ ವಿಶೇಷ ಚೇತನ ಮಕ್ಕಳ ಸಾಂದೀಪ್ ಶಾಲೆಗೆ ಜು.25ರಂದು ವ್ಯಾನ್ ಹಸ್ತಾಂತರ ಕಾರ್ಯಕ್ರಮ ನಡೆಯಿತು.
ವಿಶೇಷ ಚೇತನ ಮಕ್ಕಳ ಸಾಂದೀಪ್ ಶಾಲೆಯನ್ನು ಎಂ.ಬಿ. ಫೌಂಡೇಷನ್ ವತಿಯಿಂದ ಹಲವಾರು ವರ್ಷಗಳಿಂದ ನಡೆಸಿಕೊಂಡು ಬರಲಾಗುತ್ತಿದೆ. ಈ ಶಾಲೆಗೆ ವ್ಯಾನ್ ಹಸ್ತಾಂತರಿಸಿದ ಬಳಿಕ ಮಾತನಾಡಿದ ರೈಟು ಟು ಲಿವ್ ಕೋಟೆ ಫೌಂಡೇಶನ್ ನ ಸಂಸ್ಥಾಪಕ ಕೋಟೆ ವಸಂತ ಕುಮಾರ್ ರವರ ಪುತ್ರ ಬೆಂಗಳೂರಿನಲ್ಲಿ ಉದ್ಯಮಿಯಾಗಿರುವ ರಘುರಾಮ ಕೋಟೆಯವರು, ‘ನನ್ನ ತಂದೆಯವರ ಆದರ್ಶವನ್ನು ನಾನು ಪಾಲಿಸಿಕೊಂಡು ಬಂದಿದ್ದೇನೆ. ಈ ಕಾರಣದಿಂದ ಸಮಾಜದಲ್ಲಿ ನನ್ನಿಂದಾದ ಸಹಾಯವನ್ನು ಜನರಿಗೆ ಮಾಡಲು ಮುಂದಾಗಿದ್ದೇನೆಂದು’ ತಿಳಿಸಿದರು. ಇದೇ ವೇಳೆ ಎಂ.ಬಿ. ಫೌಂಡೇಷನ್ ಎಂ.ಬಿ ಸದಾಶಿವ, ರಘುರಾಮ ಕೋಟೆಯವರ ಪತ್ನಿ ಅರ್ಚನಾ ಕೋಟೆ, ಪುತ್ರಿ ಆಧ್ಯಾ ಕೋಟೆ, ಗಣಪಯ್ಯ ಪೆರುವಾಜೆ ವನಶ್ರೀ, ಶಶಿಕಲಾ ಗಣಪಯ್ಯ, ಕೋಟೆ ಫೌಂಡೇಶನ್ ನ ಸಾಯಿರಂಜನ್ ಕಲ್ಚಾರ್, ಆಪರೇಶನ್ ಮ್ಯಾನೇಜರ್ ವೀರೇಶ್, ಕೋ ಆರ್ಡಿನೇಟರ್ ಪ್ರದೀಪ್ ಉಬರಡ್ಕ, ಪ್ರೆಸ್ ಕ್ಲಬ್ ಗೌರವಾಧ್ಯಕ್ಷ ಹರೀಶ್ ಬಂಟ್ವಾಳ್ ಅತಿಥಿಗಳಾಗಿ ಉಪಸ್ಥಿತರಿದ್ದರು. ಶಾಲೆಯ ಮುಖ್ಯ ಶಿಕ್ಷಕಿ ಹರಿಣಿ ಸದಾಶಿವ ಮತ್ತು ಶಾಲಾ ಕೋಶಾಧಿಕಾರಿ ಪುಷ್ಪಾ ರಾಧಾಕೃಷ್ಣ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಫೌಂಡೇಶನ್ ಟ್ರಸ್ಟಿ ಶರೀಫ್ ಜಟ್ಟಿಪಳ್ಳ ಕಾರ್ಯಕ್ರಮ ನಿರೂಪಿಸಿದರು. ಕೋಟೆ ಫೌಂಡೇಶನ್ ನ ಸಂಸ್ಥಾಪಕ ರಘುರಾಮ ಕೋಟೆಯವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ಯೋಗ ಶಿಕ್ಷಕರೂ ಆಗಿರುವ ಗಣಪಯ್ಯ ಪೆರುವಾಜೆಯವರು ಸಾಂದೀಪ್ ಶಾಲೆಯ ವಿಶೇಷ ಚೇತನ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕಿಯರಿಗೆ ಪ್ರಾಣಾಯಾಮ ತರಬೇತಿಯನ್ನು ಉಚಿತವಾಗಿ ನೀಡಲು ಸಿದ್ಧ ಎಂದರು. ಮುಖ್ಯಶಿಕ್ಷಕಿ ಹರಿಣಿ ಸದಾಶಿವ ಸನ್ಮಾನಪತ್ರ ವಾಚಿಸಿದರು. ವಿಶೇಷ ಚೇತನ ಮಕ್ಕಳು ಪ್ರಾರ್ಥನೆ ಹಾಡಿದರು.