ನ್ಯೂಸ್ ನಾಟೌಟ್: ಮೊಘಲರ ಕಾಲದ ಜಾಮಾ ಮಸೀದಿ ಸರ್ವೇಗೆ ವಿರೋಧಿಸಿ ನಡೆದ ಹಿಂಸಾಚಾರದಲ್ಲಿ ಮೂವರು ಸಾವನ್ನಪ್ಪಿದ್ದು, 20 ಪೊಲೀಸರು ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಸಂಭಾಲ್ ನಲ್ಲಿ ನಡೆದಿದೆ.
ನ್ಯಾಯಾಲಯದ ಆದೇಶದ ಮೇರೆಗೆ ಸರ್ವೇ ತಂಡ ಮಸೀದಿ ಬಳಿ ಆಗಮಿಸಿತ್ತು. ಇದು, ಸ್ಥಳೀಯರು ಮತ್ತು ಪೊಲೀಸರ ನಡುವೆ ಹಿಂಸಾತ್ಮಕ ಘರ್ಷಣೆಗೆ ಕಾರಣವಾಯಿತು.
ಅಡ್ವೋಕೇಟ್ ಕಮಿಷನರ್ ನೇತೃತ್ವದ ಸಮೀಕ್ಷಾ ತಂಡವು ಸರ್ವೇ ಕೆಲಸ ಪ್ರಾರಂಭಿಸುತ್ತಿದ್ದಂತೆ ಮಸೀದಿಯ ಬಳಿ ಗುಂಪು ಜಮಾಯಿಸಿದಾಗ ಹಿಂಸಾಚಾರ ನಡೆಯಿತು. ಪೊಲೀಸರು ಮಸೀದಿಗೆ ಪ್ರವೇಶಿಸದಂತೆ ತಡೆಯಲು ಜನರು ಪ್ರಯತ್ನಿಸಿದರು.
ಗುಂಪಿನಲ್ಲಿದ್ದ ಕೆಲವು ವ್ಯಕ್ತಿಗಳು ಸ್ಥಳದಲ್ಲಿ ಬೀಡುಬಿಟ್ಟಿದ್ದ ಪೊಲೀಸ್ ಸಿಬ್ಬಂದಿ ಮೇಲೆ ಕಲ್ಲು ತೂರಿದ ಘಟನೆ ಬೆಳಿಗ್ಗೆ ನಡೆದಿತ್ತು. ಬಳಿಕ ಗುಂಪು ಹತ್ತಕ್ಕೂ ಹೆಚ್ಚು ವಾಹನಗಳಿಗೆ ಬೆಂಕಿ ಹಚ್ಚಿದೆ. ಗುಂಪು ಚದುರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದರು. ಮಧ್ಯಾಹ್ನದ ನಂತರ ಮತ್ತೆ ಸರ್ವೆಗೆ ಬಂದಾಗ ಹಿಂಸಾಚಾರ ನಡೆದಿದೆ. ಪೊಲೀಸರು ಮತ್ತು ಜನರ ಘರ್ಷಣೆಯಲ್ಲಿ 3 ಮಂದಿ ಸಾವನ್ನಪ್ಪಿದ್ದಾರೆ.
ನಯೀಮ್, ಬಿಲಾಲ್ ಮತ್ತು ನೌಮನ್ ಮೃತರು ಎಂದು ಗುರುತಿಸಲಾಗಿದೆ. ಪೊಲೀಸ್ ವರಿಷ್ಠಾಧಿಕಾರಿ ಗನ್ನರ್ ಸೇರಿದಂತೆ ಹಲವು ಪೊಲೀಸರೂ ಗಾಯಗೊಂಡಿದ್ದಾರೆ.
ಮಸೀದಿಯು ಈಗ ಇರುವ ಸ್ಥಳದಲ್ಲಿ ಒಂದು ಕಾಲದಲ್ಲಿ ದೇವಾಲಯವಿತ್ತು. ಹೀಗಾಗಿ ಮಸೀದಿ ಸರ್ವೇ ನಡೆಸುವಂತೆ ಕೋರ್ಟ್ಗೆ ಮನವಿ ಸಲ್ಲಿಸಲಾಗಿತ್ತು. ವಿಚಾರಣೆ ನಡೆಸಿದ ಕೋರ್ಟ್ ಸರ್ವೇಗೆ ಅನುಮತಿ ನೀಡಿತು. ಸಂಭಾಲ್ ನಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.
Click