ಕ್ರೈಂಬೆಂಗಳೂರುವೈರಲ್ ನ್ಯೂಸ್

ಮಂತ್ರಿ ಮಾಲ್‌ಗೆ ಬೀಗ ಜಡಿದದ್ದೇಕೆ ಅಧಿಕಾರಿಗಳು..? ಬೀಗ ತೆರೆಯದಂತೆ ಮಾರ್ಷಲ್‌ ಗಳ ಭದ್ರತೆ ಒದಗಿಸಿದ್ಯಾರು..? ಇಲ್ಲಿದೆ ಸಂಪೂರ್ಣ ಮಾಹಿತಿ

ನ್ಯೂಸ್ ನಾಟೌಟ್: ಬುಧವಾರ(ಡಿ.27) ರಂದು ಹಾಕಿದ್ದ ಬೀಗವನ್ನು ಗುರುವಾರವೂ ತೆಗೆಯದ ಕಾರಣ ಹಲವು ಗ್ರಾಹಕರು ಮಾಹಿತಿ ಇಲ್ಲದೆ ಬಂದು ಹಿಂತಿರುಗಿದ್ದಾರೆ ಎನ್ನಲಾಗಿದೆ.

2019 – 20ರಿಂದ 50.63 ಕೋಟಿ ರೂ. ತೆರಿಗೆ ಪಾವತಿಸದ ಬೆಂಗಳೂರಿನ ಸಂಪಿಗೆ ರಸ್ತೆಯಲ್ಲಿರುವ ಪ್ರತಿಷ್ಠಿತ ಮಂತ್ರಿ ಮಾಲ್‌ಗೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯ ಕಂದಾಯ ವಿಭಾಗದ ಅಧಿಕಾರಿಗಳು ಬುಧವಾರ ಬೀಗಮುದ್ರೆ ಹಾಕಿದ್ದಾರೆ.

ಮಂತ್ರಿ ಮಾಲ್‌ ಆಡಳಿತ ಮಂಡಳಿಯ ಅಭಿಷೇಕ್‌ ಪ್ರೊಪ್‌ಬಿಲ್ಡ್‌ ಪ್ರೈವೇಟ್‌ ಲಿಮಿಟೆಡ್‌ ಕಂಪನಿ ಹಾಗೂ ಹಮಾರಾ ಶೆಲ್ಟರ್ಸ್‌ ಪ್ರೈ. ಲಿ. ಕಂಪನಿಗೆ ಹಲವು ಸಲ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ನೋಟಿಸ್‌ ನೀಡಿದರೂ ತೆರಿಗೆ ಪಾವತಿಸಿಲ್ಲ. ಹೀಗಾಗಿ, ಪಾಲಿಕೆಯ ಪಶ್ಚಿಮ ವಲಯದ ಜಂಟಿ ಆಯುಕ್ತರ ನೇತೃತ್ವದಲ್ಲಿ ಕಂದಾಯ ಅಧಿಕಾರಿಗಳು ಬುಧವಾರ(ಡಿ.27) ಮಧ್ಯಾಹ್ನ ಮಾಲ್‌ನ ಮುಖ್ಯ ಪ್ರವೇಶ ದ್ವಾರಕ್ಕೆ ಬೀಗ ಜಡಿದರು. ಆನಂತರ ಮಂತ್ರಿ ಮಾಲ್‌ನ ಒಳಗಿದ್ದ ಎಲ್ಲ ಗ್ರಾಹಕರನ್ನು ಹೊರಗೆ ಕಳುಹಿಸಿ, ಮಳಿಗೆಗಳನ್ನು ಮುಚ್ಚಿಸಿ ಬೀಗ ಮುದ್ರೆ ಹಾಕಿದ್ದಾರೆ ಎನ್ನಲಾಗಿದೆ.

ಮಾಲ್‌ ತೆರೆಯದಂತೆ ಹಾಗೂ ಮಾಲ್‌ ಮುಂದೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಬೆಳಗ್ಗೆಯಿಂದ ಮಾರ್ಷಲ್‌ಗಳನ್ನು ಬೆಂಗಳೂರು ಮಹಾನಗರ ಪಾಲಿಗೆ ಭದ್ರತೆಗೆ ನಿಯೋಜಿಸಿದೆ.

ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ಮಂತ್ರಿ ಮಾಲ್‌ಗೆ ಬೀಗ ಹಾಕುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ತೆರಿಗೆ ಪಾವತಿಸದ ಕಾರಣಕ್ಕೆ ಮೂರ್ನಾಲ್ಕು ಬಾರಿ ಮಾಲ್‌ನ ಬಾಗಿಲು ಮುಚ್ಚಿಸಿದ್ದರು. ಮಂತ್ರಿ ಮಾಲ್‌ನ ಆಡಳಿತ ಮಂಡಳಿಯು ತೆರಿಗೆ ಪಾವತಿಗೆ ಸಂಬಂಧಿಸಿದಂತೆ ನೀಡಿದ್ದ ಚೆಕ್‌ ಕೂಡ ಬೌನ್ಸ್‌ ಆಗಿತ್ತು ಎನ್ನಲಾಗಿದೆ.

ಆಸ್ತಿ ತೆರಿಗೆ ಪಾವತಿಸುವಂತೆ ನೋಟಿಸ್‌ಗಳನ್ನು ನೀಡಿದ್ದರೂ ಅದನ್ನು ಕಡೆಗಣಿಸಿದ್ದ ಮಂತ್ರಿ ಮಾಲ್‌ಗೆ 2021ರ ಸೆಪ್ಟೆಂಬರ್‌ 30ರಂದು ಬಿಬಿಎಂಪಿ ಅಧಿಕಾರಿಗಳು ಬೀಗ ಜಡಿದಿದ್ದರು. ಈ ಮೂಲಕ 2018ರಿಂದಲೂ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದ್ದ ಮಂತ್ರಿ ಮಾಲ್ ಮಾಲೀಕರ ಮೇಲೆ ಬಿಬಿಎಂಪಿಯ ಕಠಿಣ ಕ್ರಮ ತೆಗೆದುಕೊಂಡಿತ್ತು. ಈ ವೇಳೆ ಎಚ್ಚೆತ್ತುಕೊಂಡಿದ್ದ ಮಾಲೀಕರು ಆ ಸಂದರ್ಭದಲ್ಲಿ ಬಾಕಿ ಉಳಿಸಿಕೊಂಡಿದ್ದ 39.49 ಕೋಟಿ ರೂ.ಗಳಲ್ಲಿ 5 ಕೋಟಿ ರೂಪಾಯಿ ಪಾವತಿಸಿದ್ದರು. ಆ ನಂತರ ಪುನಃ ಡಿಸೆಂಬರ್‌ನಲ್ಲಿ ಬಿಬಿಎಂಪಿ ಅಧಿಕಾರಿಗಳು ಮಾಲ್‌ಗೆ ಬೀಗ ಹಾಕಿದ್ದರು. ಈ ವೇಳೆ ಹಣ ಪಾವತಿಗೆ ಆದೇಶ ನೀಡಿ ಕರ್ನಾಟಕ ಹೈಕೋರ್ಟ್‌ ಬೀಗ ತೆಗೆಯಲು ಆದೇಶಿಸಿತ್ತು.

Related posts

ಹೆದ್ದಾರಿ ಗುಂಡಿಗೆ ಅಮಾಯಕ ಬಲಿ, ನೋಡನೋಡುತ್ತಿದ್ದಂತೆ ಬೈಕ್ ಸವಾರನ ಮೇಲೆ ಹರಿದ ಲಾರಿ..!

ಪುತ್ತೂರು: ಊಟ ಮಾಡಿ ಮಲಗಿದ್ದ ದಂಪತಿ ತಡ ರಾತ್ರಿಯಲ್ಲಿ ನೇಣಿಗೆ ಶರಣು

ಸಹಪಾಠಿಗಳೊಂದಿಗೆ ವಾಗ್ವಾದ ನಡೆಸಿದ್ದ 7ನೇ ತರಗತಿ ವಿದ್ಯಾರ್ಥಿಯನ್ನು ಇರಿದು ಹತ್ಯೆ..! 7 ಮಂದಿಯನ್ನು ವಶಕ್ಕೆ ಪಡೆದ ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿಗಳು..!