ನ್ಯೂಸ್ ನಾಟೌಟ್: ಮಂಗಳೂರು ಪೊಲೀಸ್ ಕಮಿಷನರ್ ಕುಲ್ದೀಪ್ ಜೈನ್ ಅವರನ್ನು ವರ್ಗಾವಣೆಗೊಳಿಸಿ ಸರ್ಕಾರ ಆದೇಶಿಸಿದೆ. ನಗರಕ್ಕೆ ನೂತನ ಕಮಿಷನರ್ ಆಗಿ ಹಿರಿಯ ಐಪಿಎಸ್ ಅಧಿಕಾರಿ ಅನುಪಮ್ ಅಗರ್ವಾಲ್ ಅವರನ್ನು ನೇಮಕ ಮಾಡಲಾಗಿದೆ. ರಾಜ್ಯದಲ್ಲಿ ಒಟ್ಟು 35 ಹಿರಿಯ ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಸರಕಾರ ಮಂಗಳವಾರ ಆದೇಶ ಹೊರಡಿಸಿದೆ.
ಕಳೆದ 5 ತಿಂಗಳ ಹಿಂದೆ ಮಂಗಳೂರು ಪೊಲೀಸ್ ಕಮಿಷನರ್ ಬಂದಿದ್ದ ಕುಲ್ದೀಪ್ ಕುಮಾರ್ ಜೈನ್ ಅವರಿಗೆ ವರ್ಗಾವಣೆಯಾಗಿದೆ. ದಕ್ಷ ಅಧಿಕಾರಿಯಾಗಿದ್ದ ಕುಲ್ದೀಪ್ ಕುಮಾರ್ ಜೈನ್ , ಡ್ರಗ್ಸ್ ವಿರುದ್ಧ ಸಮರ ಸಾರಿ ಹಲವಾರು ಜಾಲವನ್ನು ಪತ್ತೆ ಹಚ್ಚಿ ಮಂಗಳೂರನ್ನು ಡ್ರಗ್ಸ್ ಮುಕ್ತ ನಗರವನ್ನಾಗಿ ಮಾಡಬೇಕು ಎಂದು ಪಣತೊಟ್ಟಿದ್ದರು. ಇದೀಗ ಇವರ ಪ್ರಾಮಾಣಿಕ ಸೇವೆಯೆ ಇವರಿಗೆ ಮುಳುವಾಯಿತಾ ಎಂಬ ಚರ್ಚೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ಮಂಗಳೂರು ಪೊಲೀಸ್ ಕಮಿಷನರ್ ಆಗಿ ಅಧಿಕಾರ ವಹಿಸಿದ ಬಳಿಕ ಮಂಗಳೂರಿಗೆ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ ಪೆಡ್ಲರ್ಗಳನ್ನು ಪತ್ತೆಹಚ್ಚಿ ಕಠಿಣ ಕ್ರಮಕೈಗೊಂಡಿದ್ದರು. ಅಲ್ಲದೇ ಮಟ್ಕಾ, ಜೂಜು ಅಡ್ಡೆಗಳ ಮೇಲೆ ನಿರಂತರ ದಾಳಿ ನಡೆಸಿ ಕಾನೂನುಬಾಹಿರ ಕೃತ್ಯಗಳ ವಿರುದ್ಧ ಸಮರ ಸಾರಿದ್ದರು.