ಕರಾವಳಿ

Ayodhya Ram Mandir: ರಾಮ ಮೂರ್ತಿಗೆ ಕಾರ್ಕಳದ ಕೃಷ್ಣ ಶಿಲೆ ಬಳಿಕ ಅಯೋಧ್ಯೆ ತಲುಪಿದ ಕರಾವಳಿಯ ನಾಗಪುಷ್ಪ..!ಮಂದಿರದ ಎದುರು ಅಲಂಕಾರಕ್ಕಾಗಿ ನೆಡಲು ಸಿದ್ಧತೆ,ಇದರ ವಿಶೇಷತೆಗಳೇನು ಗೊತ್ತಾ?

157

ನ್ಯೂಸ್ ನಾಟೌಟ್ : ಈ ಹಿಂದೆ ಅಯೋಧ್ಯೆಯಲ್ಲಿ ಭವ್ಯವಾಗಿ ನಿರ್ಮಾಣವಾಗುತ್ತಿರುವ ಪ್ರಭು ಶ್ರೀರಾಮಚಂದ್ರರ ಮಂದಿರದಲ್ಲಿ ಪ್ರತಿಷ್ಠಾಪನೆಗಾಗಿ ರಾಮ ಮೂರ್ತಿಗೆ ಕರಾವಳಿಯ ಕಾರ್ಕಳದ ಈದು ಗ್ರಾಮದ ಶಿಲೆ ಕಲ್ಲು ಆಯ್ಕೆಯಾಗಿದೆ ಎಂಬ ವಿಚಾರ ಇಡೀ ರಾಜ್ಯದಲ್ಲಿಯೇ ಭಾರಿ ಸುದ್ದಿ ಆಗಿತ್ತು. ಇದೀಗ ಕರಾವಳಿ ಮತ್ತೊಮ್ಮೆ ಸುದ್ದಿಯಲ್ಲಿದೆ. ಇದೇ ಮೊದಲ ಬಾರಿಗೆ ದ.ಕ ಜಿಲ್ಲೆಯಿಂದ ನಾಗಲಿಂಗ ಪುಷ್ಪ ಎನ್ನುವ ಗಿಡವೊಂದು ಅಯೋಧ್ಯೆಯ ಪುಣ್ಯ ಭೂಮಿಯನ್ನು ತಲುಪಿದ್ದು, ಶ್ರೀರಾಮನ ಮಂದಿರದ ಎದುರು ಅಲಂಕಾರಕ್ಕಾಗಿ ನೆಡಲು ರಾಮ ಜನ್ಮಭೂಮಿ ಟ್ರಸ್ಟ್ ಆಡಳಿತ ಸಿದ್ದತೆ ನಡೆಸಿದೆ.

ಹೌದು, ಅಯೋಧ್ಯೆಯಲ್ಲಿ ರಾಮನ ಮಂದಿರ ನಿರ್ಮಾಣ ಕಾರ್ಯ ಬಹುತೇಕ ಅಂತಿಮ ಹಂತ ತಲುಪಿದ್ದು, ದೇಶದ ಹಲವು ಭಾಗಗಳಿಂದ ಅನೇಕ ರೀತಿಯ ವಸ್ತುಗಳು ಅಯೋಧ್ಯೆಯ ಪುಣ್ಯ ಭೂಮಿಯನ್ನ ತಲುಪಿದೆ. ಇದೀಗ ದ.ಕ ಜಿಲ್ಲೆಯ ಮೂಡಬಿದ್ರೆ ತಾಲೂಕಿನ ನಿಡ್ಡೋಡಿ ಗ್ರಾಮದ ವಿನೇಶ್ ಪೂಜಾರಿ ಎಂಬವರು ತಾವು ಬೆಳೆದ ನಾಗಲಿಂಗ ಪುಷ್ಪದ ಗಿಡವನ್ನು ಅಯೋಧ್ಯೆಗೆ ಕಳುಹಿಸಿ ಕೊಟ್ಟಿದ್ದಾರೆ.ಈ ಮೂಲಕ ತುಳುನಾಡಿನಿಂದ ಮತ್ತೊಂದು ವಿಶೇಷ ವಸ್ತುವನ್ನು ಅಲ್ಲಿಗೆ ಕಳುಹಿಸಲಾಗಿದ್ದು,ವಿಶೇಷ ಸ್ಥಾನವನ್ನು ಪಡೆದುಕೊಂಡಿದೆ.

ವಿನೇಶ್ ಪೂಜಾರಿಯವರಿಗೆ ಈ ಮೊದಲೇ ನಾಗಲಿಂಗ ಪುಷ್ಪದ ಗಿಡವನ್ನು ಅಯೋಧ್ಯೆಗೆ ಕಳುಹಿಸುವ ಉದ್ದೇಶವಿತ್ತು. ಅದರಂತೆ ಗೂಗಲ್ ಮೂಲಕ ಅಯೋಧ್ಯೆಯ ನಂಬರ್ ಪಡೆದು ಕರೆ ಮಾಡಿ ವಿಚಾರಿಸಿದ್ದಾರೆ. ಈ ವೇಳೆ ಅಯೋಧ್ಯ ದೇವಸ್ಥಾನ ಆಡಳಿತ ಮಂಡಳಿ ಗಿಡಗಳನ್ನು ಕಳುಹಿಸಿ ಕೊಡುವಂತೆ ಸೂಚಿಸಿದೆ.

ಸೆ. 5 ರಂದು 5 ಗಿಡಗಳನ್ನು ಕೊರಿಯರ್‌ ಮೂಲಕ ಕಳುಹಿಸಿದ್ದಾರಂತೆ. ಇದಾಗಿ ಕೆಲವು ದಿನಗಳ ಬಳಿಕ ಅಲ್ಲಿನ ಅಧಿಕಾರಿಗಳಿಂದ ದೂರವಾಣಿ ಕರೆ ಬಂದಿದ್ದು, ಗಿಡ ಸಿಕ್ಕಿದ್ದು ಗಿಡವನ್ನು ಆಯೋಧ್ಯೆಯ ರಾಮ ಮಂದಿರದ ಬದಿಯಲ್ಲಿ ನೆಡುವುದಾಗಿ ಹಾಗೂ ಬಳಿಕ ಚಿತ್ರವನ್ನು ಕಳುಹಿಸುವುದಾಗಿ ತಿಳಿಸಿದ್ದಾರೆ. ಇದು ಅವರಿಗೆ ತುಂಬಾ ಆನಂದವನ್ನುಂಟು ಮಾಡಿದೆ.ಜತೆಗೆ ರಾಮಮಂದಿರದಂತಹ ಪುಣ್ಯ ಭೂಮಿಯಲ್ಲಿ ತಾನು ಬೆಳೆದ ಗಿಡಗಳು ಸ್ಥಾನ ಪಡೆದುಕೊಳ್ಳುತ್ತವೆ ಅನ್ನುವಂತಹ ಹೆಮ್ಮೆಯೂ ಅವರಲ್ಲಿ ವ್ಯಕ್ತವಾಗಿದೆ.

ಇದು ನಾಗಲಿಂಗಾಕಾರದ ಹೂ ಬಿಡುವ ವಿಶಿಷ್ಟ ವೃಕ್ಷ. ಇದು ದೊಡ್ಡ ಮರವಾಗಿ ಬೆಳೆಯುತ್ತಿದ್ದು, ಶಿವಪೂಜೆಗೆ ಪವಿತ್ರ ಎಂದು ನಂಬಲ್ಪಟ್ಟಿದೆ.ಇದು ಮಲ್ಲಿಕಾರ್ಜುನ ಪುಷ್ಪ ದಕ್ಷಿಣ ಅಮೇರಿಕ ಹಾಗೂ ಕೆರೆಬಿಯನ್ ಪ್ರದೇಶದ ಮರ. ಭಾರತದಲ್ಲಿ ಅಲಂಕಾರಕ್ಕಾಗಿ ತಂದು ಬೆಳೆಸಿರುತ್ತಾರೆ. ಭಾರತದಲ್ಲಿ ಹಲವಾರು ಶಿವ ದೇವಾಲಯಗಳ ಬಳಿ ನೆಟ್ಟು ಬೆಳೆಸಿದ್ದಾರೆ.

ಇದರಲ್ಲಿ ಕೇವಲ ಹೂವುಗಳು ಮಾತ್ರ ಬಿಡೋದಿಲ್ಲ.ಬದಲಾಗಿ ಕಾಯಿಯನ್ನು ಕೂಡ ಪಶು ಆಹಾರವಾಗಿ ಕೆಲವು ಕಡೆಗಳಲ್ಲಿ ಉಪಯೋಗಿಸುವ ಬಗ್ಗೆ ಉಲ್ಲೇಖವಿದೆ. ದೊಡ್ಡ ಮರವಾಗಿ ಬೆಳೆಯುವ ಈ ವೃಕ್ಷ ಅತ್ಯಂತ ಗಟ್ಟಿಯಾಗಿರುವ ಕಾರಣ, ಕ್ರಿಕೆಟ್ ಬ್ಯಾಟ್ ತಯಾರಿಯಲ್ಲೂ ಮುಂಚೂಣಿಯಲ್ಲಿದೆ. ಇದರ ಬೀಜ ಫಿರಂಗಿಯ ಗುಂಡನ್ನು ಹೋಲುತ್ತದೆ. ನಾಗರ ಹೆಡೆಯಲ್ಲಿ ಲಿಂಗ ಇರುವ ರೀತಿಯ ಹೂ ಬೀಡುವ ಮರವಿದು. ನೆಟ್ಟ ಬಳಿಕ 4 ವರ್ಷಗಳ ನಂತರ ಹೂ ಬಿಡುತ್ತದೆ. ಈ ಗಿಡ ಔಷಧೀಯ ಗುಣವನ್ನೂ ಹೊಂದಿದ್ದು, ಚರ್ಮರೋಗ ಮತ್ತಿತರ ಕಾಯಿಲೆಗಳಿಗೆ ಕಷಾಯವಾಗಿ ಬಳಕೆಯಾಗುತ್ತದೆ ಎಂದು ಹೇಳಲಾಗಿದೆ.

See also  Shakthi Yojane:ಮಹಿಳೆಯರೇ ,ಸ್ಮಾರ್ಟ್ ಕಾರ್ಡ್ ಇಲ್ಲಾಂದ್ರೆ ಫ್ರೀಯಾಗಿ ಓಡಾಡಕ್ಕಾಗಲ್ಲ;ಇದನ್ನು ಪಡೆಯುವುದು ಹೇಗೆ?ಎಲ್ಲಿ ಸಿಗಲಿದೆ?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget