ನ್ಯೂಸ್ ನಾಟೌಟ್: ಕಾಳಿ ದೇವಿಯನ್ನು ಒಲಿಸಿಕೊಳ್ಳಬೇಕೆಂದು ಅರ್ಚಕನೊಬ್ಬ 24ಗಂಟೆಗಳ ಕಾಲ ನಿರಂತರವಾಗಿ ಪೂಜೆ ಮಾಡಿದ ನಂತರವೂ ದೇವಿ ಪ್ರತ್ಯಕ್ಷವಾಗಲಿಲ್ಲ ಎಂದು ಮನನೊಂದು ತನ್ನ ಕತ್ತನ್ನು ಸೀಳಿಕೊಂಡು ಆ*ತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಉತ್ತರಪ್ರದೇಶದ ವಾರಣಾಸಿಯಲ್ಲಿ ನಡೆದಿದೆ.
ಅರ್ಚಕ ಅಮಿತ್ ಶರ್ಮಾ (40ವರ್ಷ) ಗಾಯ್ ಘಾಟ್ ಪ್ರದೇಶದ ನಿವಾಸಿಯಾಗಿದ್ದು, ತಾನು ವಾಸವಾಗಿದ್ದ ಬಾಡಿಗೆ ಮನೆಯಲ್ಲಿ ಕಾಳಿ ದೇವಿಯನ್ನು ಪೂಜಿಸಿ, ದೇವಿ ಪ್ರತ್ಯಕ್ಷವಾಗಿಲ್ಲ ಎಂದು ಮಾನಸಿಕ ಒತ್ತಡಕ್ಕೆ ಒಳಗಾಗಿ ಕಟ್ಟರ್ ನಿಂದ ಗಂಟಲು ಸೀಳಿಕೊಂಡಿರುವುದಾಗಿ ವರದಿ ತಿಳಿಸಿದೆ.
ಈ ಸಂದರ್ಭದಲ್ಲಿ ಮನೆಯಲ್ಲಿ ಪತ್ನಿ ಜೂಲಿ ಅಡುಗೆ ಕೆಲಸದಲ್ಲಿ ನಿರತಳಾಗಿದ್ದಳು ಎನ್ನಲಾಗಿದೆ. “ಕಾಳಿ ಮಾತೇ ದರ್ಶನ ನೀಡು…ಮಾ ಪ್ರತ್ಯಕ್ಷವಾಗು” ಎಂದು ಚೀರಾಡುತ್ತಿರುವ ಶಬ್ದ ಕೇಳಿಸಿತ್ತು. ತಕ್ಷಣವೇ ಪತ್ನಿ ಕೋಣೆಗೆ ಹೋಗಿ ನೋಡಿದಾಗ…ಪತಿ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡು ಬಂದಿದೆ. ಆಕೆಯು ಚೀರಾಡಲು ಆರಂಭಿಸಿದಾಗ ನೆರೆಹೊರೆಯವರು ಬಂದು ವಿಚಾರಿಸಿದಾಗ ವಿಷಯ ಬೆಳಕಿಗೆ ಬಂದಿದೆ.
ಕೂಡಲೇ ಶರ್ಮಾ ಅವರನ್ನು ಪತ್ನಿ ಹಾಗೂ ನೆರೆಹೊರೆಯವರು ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ ಅರ್ಚಕ ಕೊನೆಯುಸಿರೆಳೆದಿರುವುದಾಗಿ ವೈದ್ಯರು ಘೋಷಿಸಿದ್ದರು.
ಪತಿ ಶರ್ಮಾ ಕೋಣೆಯನ್ನು ಲಾಕ್ ಮಾಡಿಕೊಂಡು ಕಾಳಿ ದೇವಿ ಪ್ರತ್ಯಕ್ಷಳಾಗುತ್ತಾಳೆ ಎಂದು 24ಗಂಟೆಗಳ ಕಾಲ ಕಠಿಣ ಪೂಜೆ ಮಾಡುತ್ತಿದ್ದರು ಎನ್ನಲಾಗಿದೆ.. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Click