ನ್ಯೂಸ್ ನಾಟೌಟ್: ಪತ್ನಿಯ ತಂದೆಯ ವಾಟ್ಸಪ್ ನಲ್ಲಿ ತಲಾಖ್ ಸಂದೇಶ ನೀಡಿದ ಪ್ರಕರಣದಲ್ಲಿ ಆರೋಪಿಯಾದ ಬದಿಯಡ್ಕ ನೆಕ್ರಾಜೆ ನೆಲ್ಲಿಕಟ್ಟೆ ನಿವಾಸಿಯನ್ನು ಕೊಲ್ಲಿಯಿಂದ ಊರಿಗೆ ಕರೆತರಲು ಪೊಲೀಸರು ಯತ್ನಿಸುತ್ತಿದ್ದಾರೆ.ಪೊಲೀಸರ ಆಗ್ರಹದಂತೆ ಊರಿಗೆ ಬರದಿದ್ದಲ್ಲಿ ಇಂಟರ್ ಪೋಲ್ ನೆರವಿನೊಂದಿಗೆ ಆರೋಪಿಯನ್ನು ಬಂಧಿಸಲು ಕ್ರಮ ಆರಂಭಿಸಲಾಗುವುದೆಂದು ಪೊಲೀಸ್ ಮೂಲಗಳು ಹೇಳಿವೆ.
ನೆಲ್ಲಿಕಟ್ಟೆ ನಿವಾಸಿ ಹಾಗೂ ಕೊಲ್ಲಿ ಉದ್ಯೋಗಿ ಅಬ್ದುಲ್ ರಝಾಕ್ ಹಾಗೂ ಕಾಂಞಂಗಾಡ್ ಕಲ್ಲೂರಾವಿ ನಿವಾಸಿಯಾದ ಯುವತಿ ವಿವಾಹ 2022 ಆ.11 ರಂದು ಧಾರ್ಮಿಕ ವಿಧಿಯಂತೆ ನಡೆದಿತ್ತು. 2023 ರ ಆ.23 ರ ಬಳಿಕ ಪತಿ ಹಾಗು ಮನೆ ಮಂದಿ ವರದಕ್ಷಿಣೆಯಾಗಿ ನೀಡಿದ ಚಿನ್ನಾಭರಣ ಕಡಿಮೆಯಾಗಿದೆಯೆಂದು ಆರೋಪಿಸಿ ಮಾನಸಿಕ ಹಾಗು ದೈಹಿಕ ಹಿಂಸೆ ನೀಡಿದ್ದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಈ ಮಧ್ಯೆ 2023 ಫೆಬ್ರವರಿ 21 ರಂದು ಪತ್ನಿಯ ತಂದೆಯ ವಾಟ್ಸಪ್ ಗೆ “ನಿಮ್ಮ ಮಗಳು ನನಗೆ ಬೇಡ. ನಾನು ಮೂರು ಬಾರಿ ತಲಾಖ್ ಹೇಳಿದ್ದೇನೆ’ ಎಂಬ ಸಂದೇಶ ಕಳುಹಿಸಿದ ಹಿನ್ನೆಲೆಯಲ್ಲಿ ಈತನ ವಿರುದ್ಧ ದೂರು ನೀಡಲಾಗಿತ್ತು. ಇದರಂತೆ ಪತಿ ಅಬ್ದುಲ್ ರಜಾಖ್, ಪತಿ ಮನೆಯ ರುಖೀಯಾ(35), ಫೌಸಿಯಾ(25), ನಫೀಸ(50) ವಿರುದ್ದ ಪೊಲೀಸರು ಕೇಸು ದಾಖಲಿಸಿದ್ದಾರೆ.