Latest

ಮಡಿಕೇರಿ:ಎಓಎಲ್‌ಇ(ಸುಳ್ಯ) ಅಧ್ಯಕ್ಷ ಡಾ.ಕೆ.ವಿ.ಚಿದಾನಂದರು ಸೇರಿದಂತೆ 6 ಮಂದಿಗೆ ಪ್ರಶಸ್ತಿ ಗರಿ: ಫೆ.೨೮ರಂದು ಪ್ರದಾನ; ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಘೋಷಣೆ

566

ನ್ಯೂಸ್‌ ನಾಟೌಟ್‌: ಅರೆಭಾಷಾ ಸಾಹಿತ್ಯ, ಸಂಸ್ಕೃತಿ ಮತ್ತು ಅದರ ಬೆಳವಣಿಗೆಯಲ್ಲಿ ಗಣನೀಯ ಸಾಧನೆ ಮಾಡಿದ ಆರು ಮಂದಿ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಅರೆಭಾಷಾ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ.

2022ನೇ ಸಾಲಿನ ಗೌರವ ಪ್ರಶಸ್ತಿಯನ್ನು ‘ಸಂಶೋಧನೆ ಮತ್ತು ಅರೆಭಾಷೆ ಸಾಹಿತ್ಯ’ ಕ್ಷೇತ್ರದ ಸಾಧನೆಗಾಗಿ ಕೊಡಗಿನ ಡಾ.ಕಾವೇರಿಮನೆ ಬೋಜಪ್ಪ, ‘ಅರೆಭಾಷೆ ಮತ್ತು ಸಂಸ್ಕೃತಿಯ ಸೇವೆ’ಗಾಗಿ ತುಂತಜೆ ವೆಂಕಟೇಶ್(ಗಣೇಶ್) ಮತ್ತು ‘ಶಿಕ್ಷಣ ಮತ್ತು ವೈದ್ಯಕೀಯ ಸೇವೆ’ಗಾಗಿ ದಕ್ಷಿಣ ಕನ್ನಡ ಜಿಲ್ಲೆಯ ಡಾ.ಕೆ.ವಿ.ಚಿದಾನಂದ ಅವರು ಪಡೆದುಕೊಂಡಿದ್ದಾರೆ ಎಂದರು.2023ನೇ ಸಾಲಿನ ಗೌರವ ಪ್ರಶಸ್ತಿಗೆ ‘ಅರೆಭಾಷೆ ಸಾಹಿತ್ಯ ಮತ್ತು ಶೈಕ್ಷಣಿಕ ಸೇವೆ’ಗಾಗಿ ಕೊಡಗಿನ ಕುಯಿಂತೋಡು ದಾಮೋದರ, ‘ಅರೆಭಾಷಾ ಅಧ್ಯಯನ ಮತ್ತು ಸಂಶೋಧನೆ’ಗಾಗಿ ದಕ್ಷಿಣ ಕನ್ನಡದ ಎ.ಕೆ. ಹಿಮಕರ ಮತ್ತು ‘ಅರೆಭಾಷಾ ಸಾಧನೆ ಮತ್ತು ಕಲಾ ಪೋಷಕ’ರ ನೆಲೆಯಲ್ಲಿ ಕೊಡಗಿನ ಕೂಡಕಂಡ ಕಾವೇರಮ್ಮ ಸೋಮಣ್ಣ ಆಯ್ಕೆಯಾಗಿದ್ದಾರೆಂದು ತಿಳಿಸಿದರು. ಪ್ರಶಸ್ತಿ ಪ್ರದಾನ ಸಮಾರಂಭ ಫೆ.28 ರಂದು ಮಡಿಕೇರಿ ಗೌಡ ಸಮಾಜದ ಸಭಾಂಗಣದಲ್ಲಿ ನಡೆಯಲಿದೆ.

ಇನ್ನು ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ, ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ, ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ, ಸಂಸದ ಯದುವೀರ್ ಪಾಲ್ಗೊಳ್ಳಲಿದ್ದಾರೆಂದು ಮಾಹಿತಿ ನೀಡಿದರು.

ಸಂಶೋಧನಾ ಪ್ರಬಂಧಗಳ ಬಿಡುಗಡೆ:

ಸಮಾರಂಭದಲ್ಲಿ ಅರೆಭಾಷಾ ಅಕಾಡೆಮಿಯ ಫೆಲೋಶಿಪ್‍ನಡಿ ಅರೆಭಾಷೆಗೆ ಸಂಬಂಧಿಸಿದ ವಿವಿಧ ವಿಷಯಗಳಡಿ ಸಂಶೋಧನೆಗಳನ್ನು ನಡೆಸಲಾಗಿತ್ತು. ಅದರಂತೆ ಡಾ. ಪುರುಷೋತ್ತಮ ಕೆ.ವಿ., ಬೇಕಲ್ ಲೀಲಾವತಿ, ಲೋಕೇಶ್ ಪೆರ್ಲಂಪಾಡಿ, ಕೆ.ಆರ್.ತೇಜಕುಮಾರ್, ಡಿ.ಸಿ.ನಂಜುಂಡ ಮತ್ತು ಸೀತಾರಾಮ ಕೇವಳ ಅವರ ಸಂಶೋಧನಾ ಪುಸ್ತಕಗಳನ್ನು ಬಿಡುಗಡೆಮಾಡಲಾಗುವುದು ಎಂದು ತಿಳಿಸಿದರು.

ವಿವಿಧ ಪುಸ್ತಕಗಳ ಅನಾವರಣ:

ಪುಸ್ತಕ ಪ್ರಕಟಣೆಗಾಗಿ ಅಕಾಡೆಮಿ ನೀಡಿದ್ದ ಆಹ್ವಾನದಂತೆ ವಿವಿಧ ಲೇಖಕರು ಸಲ್ಲಿಸಿದ್ದ ಪುಸ್ತಕಗಳಲ್ಲಿ ಆಯ್ದ ಪುಸ್ತಕಗಳ ಲೋಕಾರ್ಪಣೆ ಕಾರ್ಯ ಇದೇ ಸಂದರ್ಭ ನಡೆಸಲು ಉದ್ದೇಶಿಸಲಾಗಿದೆ. ವಿಮಲಾ ಅರುಣ ಅವರ ‘ಸೂಂತ್ರಿ’, ಕುಕ್ಕನೂರು ರೇಷ್ಮ ಅವರ ‘ಕಥಾ ಸಂಕಲನ’, ಲೀಲಾ ದಾಮೋದರ ಅವರು ರಚಿಸಿರುವ ‘ಸಾಲು ದೀಪ’ ಪುಸ್ತಕ ಬಿಡುಗಡೆಯಾಗಲಿದೆ.

ವಾದ್ಯ ಪರಿಕರಗಳ ವಿತರಣೆ:

ಸಮಾರಂಭದಲ್ಲಿ ಅಕಾಡೆಮಿ ವತಿಯಿಂದ ಅರೆಭಾಷೆ ಮಾತನಾಡುವ ಪರಿಶಿಷ್ಟ ಜಾತಿ ಮತ್ತು ಪಂಗಡದ ಕಲಾವಿದರಿಗೆ ವಾದ್ಯ ಪರಿಕರಗಳನ್ನು ವಿತರಿಸಲಾಗುವುದು ಎಂದು ಸದಾನಂದ ಮಾವಜಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಅಕಾಡೆಮಿ ಸದಸ್ಯರಾದ ಪೂಲಕಂಡ ಸಂದೀಪ್ ಹಾಗೂ ಪೊನ್ನಚ್ಚನ ಮೋಹನ್ ಉಪಸ್ಥಿತರಿದ್ದರು.

See also  ಹೆದ್ದಾರಿ ಬದಿಯ ಅನಧಿಕೃತ ವ್ಯಾಪಾರಿಗಳಿಗೆ ಶಾಕ್!! ಕುಶಾಲನಗರದಿಂದ ಸಂಪಾಜೆವರೆಗಿನ ಅನಧಿಕೃತ ಶೆಡ್ ಅಂಗಡಿಗಳ ತೆರವಿಗೆ ಸೂಚನೆ!
  Ad Widget   Ad Widget   Ad Widget   Ad Widget   Ad Widget   Ad Widget   Ad Widget