Latestಕರಾವಳಿರಾಜ್ಯ

ಸುಳ್ಯ:ಎಂ.ಬಿ.ಫೌಂಡೇಶನ್ ವತಿಯಿಂದ ವಿಶೇಷ ಚೇತನ ಮಕ್ಕಳ ಪ್ರತಿಭಾ ಪುರಸ್ಕಾರ ಪ್ರಶಸ್ತಿ ಪ್ರದಾನ ಹಾಗೂ ಇಬ್ಬರು ಶಿಕ್ಷಕಿಯರಿಗೆ ಎಂ.ಬಿ.ದೇವಕಿ ಬಾಲಕೃಷ್ಣ ಎಕ್ಸಲೆನ್ಸ್ ಪ್ರಶಸ್ತಿ ಪ್ರದಾನ ಸಮಾರಂಭ . ಸ್ಪೀಕರ್ ಯು.ಟಿ ಖಾದರ್ , ದ.ಕ. ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಹಲವು ಗಣ್ಯರು ಭಾಗಿ

395

ನ್ಯೂಸ್‌ ನಾಟೌಟ್: ವಿಶೇಷ ಅಗತ್ಯವುಳ್ಳ ಮಕ್ಕಳೂ ಸಹ ಇತರೆ ಮಕ್ಕಳಂತೆ ಬೆಳೆಯಲು, ವಿಕಾಸ ಹೊಂದಲು ಸಹಾಯಕವಾಗಲು ಕನಿಷ್ಠ ಪರಿಸರವನ್ನು ಒದಗಿಸುವುದು ಅವಶ್ಯಕ. ಈ ನಿಟ್ಟಿನಲ್ಲಿ ಅವರಿಗೆ ಶಿಕ್ಷಣ ನೀಡುವುದು ಮಾತ್ರವಲ್ಲದೇ ಅವರ ಪ್ರತಿಭೆಗಳನ್ನು ಗುರುತಿಸಿ ಬೆನ್ನು ತಟ್ಟಿ ಪ್ರೋತ್ಸಾಹಿಸುವ ಕೆಲಸವನ್ನು ಸಾಂದೀಪ್ ವಿಶೇಷ ಶಾಲೆಯಲ್ಲಿ ಮಾಡಲಾಗುತ್ತಿದೆ.ಈ ಕೆಲಸವನ್ನು ಮಾಡೋದಕ್ಕೆ ಎಲ್ಲರಿಂದಲೂ ಸಾಧ್ಯವಿಲ್ಲ. ಯಾರಿಗೆ ಮಾನವೀಯತೆ,ಕರುಣೆ,ತ್ಯಾಗದ ಗುಣಗಳಿರುತ್ತವೆಯೋ ಅಂತವರಿಗೆ ಮಾತ್ರ ಈ ರೀತಿಯ ಕೆಲಸ ನಿರ್ವಹಿಸಲು ಸಾಧ್ಯವಿದೆ ಎಂದು ರಾಜ್ಯ ವಿಧಾನ ಸಭಾಧ್ಯಕ್ಷರಾದ ಯು.ಟಿ.ಖಾದರ್ ಹೇಳಿದರು. ಅವರು ಸುಳ್ಯದ ಎಂ.ಬಿ.ಫೌಂಡೇಶನ್ ವತಿಯಿಂದ ಜೂನಿಯರ್ ಕಾಲೇಜು ರಸ್ತೆ ಬಳಿ ಇರುವ ಸಾಂದೀಪ್ ವಿಶೇಷ ಶಾಲೆಯ ಸಭಾಂಗಣದಲ್ಲಿ ನಡೆದ ವಿಶೇಷ ಚೇತನ ಮಕ್ಕಳ ಪ್ರತಿಭಾ ಪುರಸ್ಕಾರ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಉತ್ತಮ ಶಿಕ್ಷಕರಿಗೆ ನೀಡಲಾಗುವ ಎಂ. ಬಿ.ದೇವಕಿ ಬಾಲಕೃಷ್ಣ ಎಕ್ಸಲೆನ್ಸ್ ಅವಾರ್ಡ್ ಪ್ರದಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಮನುಷ್ಯ ಯಾವಾಗ ಕಠಿಣ ಪರಿಶ್ರಮ ಪಡುತ್ತಾನೋ ಅದಕ್ಕೆ ಫಲ ಸಿಕ್ಕಿಯೇ ಸಿಗುತ್ತದೆ. ಇಂತಹ ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕೆನ್ನುವ ಇವರ ಪ್ರಯತ್ನ ನಿಜಕ್ಕೂ ಶ್ಲಾಘನಾರ್ಹ. ಈ ನಿಟ್ಟಿನಲ್ಲಿ ಪೋಷಕರು, ಶಾಲೆಯ ಶಿಕ್ಷಕರು ಸೇರಿದಂತೆ ಆಡಳಿತ ಮಂಡಳಿ ನಡೆಸುವ ಕೆಲಸ ನಿಜಕ್ಕೂ ಸಮಾಜಕ್ಕೆ ಮಾದರಿಯಾದುದು. ಈ ಸೇವೆಯ ಮೂಲಕ ಸಮಾಜಕ್ಕೆ ನೀಡುವ ಇವರ ಕೊಡುಗೆ ನಿಜವಾದ ದೇಶ ಸೇವೆ , ಈ ಕೆಲಸಕ್ಕೆ ಬೆಲೆ ಕಟ್ಟಲಸಾಧ್ಯ, ಆ ಭಗವಂತನೇ ಮೆಚ್ಚುವ ಕೆಲಸವಿದು ಎಂದು ಶ್ಲಾಘಿಸಿದರು.

ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು ಸಭಾಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನಳೀನ್ ಕುಮಾರ್ ಕಟೀಲ್, ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗೌರವ ಅತಿಥಿಗಳಾಗಿ ಸುಳ್ಯ ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನೀರಬಿದರೆ, ಸುಳ್ಯ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಂ.ಮುಸ್ತಫ, ನ.ಪಂ.ಸದಸ್ಯೆ ಕಿಶೋರಿ ಶೇಟ್, ತಹಶೀಲ್ದಾರ್ ಮಂಜುಳಾ ಎಂ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಕೃಷ್ಣಪ್ಪ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶೈಲಜಾ ದಿನೇಶ್, ಸೈಂಟ್ ಜೋಸೆಫ್‌ ಶಾಲೆಯ ಸಂಚಾಲಕ ಫಾ.ವಿಕ್ಟರ್ ಡಿಸೋಜ, ಇಂದಿರಾ ದೇವಿಪ್ರಸಾದ್, ಸುಳ್ಯ ರೋಟರಿ ಕ್ಲಬ್ ಅಧ್ಯಕ್ಷೆ ಯೋಗಿತಾ ಗೋಪಿನಾಥ್ ಹಾಜರಿದ್ದರು.ಶಿಕ್ಷಕಿ ಮಮತಾ ಎಸ್.ಕೆ. ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ಶೀತಲ್ ಯು.ಕೆ. ಅಭಿನಂದನಾ ಭಾಷಣ ಮಾಡಿದರು.

ಬಳಿಕ ಕೊಲ್ಚಾರು ಸ.ಹಿ.ಪ್ರಾ ಶಾಲೆ ಶಿಕ್ಷಕಿ ಜಲಜಾಕ್ಷಿ ಹಾಗೂ ಸಂತ ಬ್ರಿಜಿಡ್ಸ್ ಸ.ಹಿ.ಪ್ರಾ ಶಾಲೆ ಶಿಕ್ಷಕಿ ವಲ್ಸ ಅವರಿಗೆ ಎಂ.ಬಿ. ದೇವಕಿ ಬಾಲಕೃಷ್ಣ ಎಕ್ಸಲೆನ್ಸ್ ಪ್ರಶಸ್ತಿ ಪ್ರದಾನ ಮಾಡಲಾಯಿತು.ಸ್ಪೀಕರ್ ಯು.ಟಿ.ಖಾದರ್ ಅವರು ಇಬ್ಬರು ಶಿಕ್ಷಕಿಯರಿಗೆ ಪ್ರಶಸ್ತಿ ನೀಡಿ ಅಭಿನಂದಿಸಿದರು.ಸಾಮಾಜಿಕ ಮುಖಂಡ ಲತೀಫ್ ಹರ್ಲಡ್ಕ, ನಾಟ್ಯಪ್ರವೀಣೆ ಮಂಜುಶ್ರೀ ರಾಘವ, ನಿವೃತ್ತ ದೈಹಿಕ ಶಿಕ್ಷಕ ನಟರಾಜ್, ಪ್ರತಿಭಾವಂತ ವಿದ್ಯಾರ್ಥಿನಿ ಯಶ್ವಿನಿ ಪಿ.ಭಟ್ ಅವರನ್ನು ಕೂಡ ಗೌರವಿಸಲಾಯಿತು.ಸಾಂದೀಪ್ ವಿಶೇಷ ಶಾಲೆಯ ಮಕ್ಕಳ ಹಾಡು ಹಾಗೂ ನೃತ್ಯವು ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ತುಂಬಿತು.

See also  ಸಂಪಾಜೆಯ ನೆಲ್ಲಿಕುಮೇರಿ ಬಳಿಯ ಮುತ್ತು ಮಾರಿಯಮ್ಮ ದೇವಸ್ಥಾನಕ್ಕೆ ಆನೆ ದಾಳಿ, ಅಪಾರ ನಷ್ಟ

ಎಂ.ಬಿ.ಫೌಂಡೇಷನ್ ಅಧ್ಯಕ್ಷ ಎಂ.ಬಿ.ಸದಾಶಿವ ಪ್ರಾಸ್ತಾವಿಕವಾಗಿ ಮಾತನಾಡಿದರು. ಟ್ರಸ್ಟಿ ಶರೀಫ್ ಜಟ್ಟಿಪಳ್ಳ ಸ್ವಾಗತ ಭಾಷಣ ಮಾಡಿದರು. ಸಾಂದೀಪ್ ವಿಶೇಷ ಶಾಲೆಯ ಮುಖ್ಯೋಪಾಧ್ಯಾಯಿನಿ ಹರಿಣಿ ಸದಾಶಿವ ಶಾಲಾ ವರದಿಯನ್ನು ವಾಚಿಸಿದರು. ಎಂ.ಬಿ.ಫೌಂಡೇಶನ್‌ನ ಕಾರ್ಯದರ್ಶಿ ಡಾ.ಸವಿತಾ ಲಕ್ಷ್ಮಿ, ಕೋಶಾಧಿಕಾರಿ ಪುಷ್ಪಾ ರಾಧಾಕೃಷ್ಣ, ಟ್ರಸ್ಟಿಗಳಾದ ಸೂರಯ್ಯ ಎಸ್.ಆರ್, ನೇತ್ರಾವತಿ ಪಡ್ಡಂಬೈಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಿಕ್ಷಣ ಸಂಯೋಜಕಿ ಮಮತಾ ಕೆ ಹಾಗೂ ಶಿಕ್ಷಕಿ ಮಮತಾ ಎಸ್.ಕೆ.ಕಾರ್ಯಕ್ರಮ ನಿರೂಪಿಸಿದರು.

 

  Ad Widget   Ad Widget   Ad Widget       Ad Widget     Ad Widget   Ad Widget   Ad Widget   Ad Widget   Ad Widget   Ad Widget