ನ್ಯೂಸ್ ನಾಟೌಟ್: ಉತ್ತರ ಪ್ರದೇಶದಲ್ಲಿ ಇತ್ತೀಚೆಗೆ ನಡೆದ, ಪತ್ನಿಯನ್ನು ಆಕೆಯ ಪತಿಯೇ ಪ್ರಿಯಕರನ ಜೊತೆ ಮದುವೆ ಮಾಡಿಕೊಟ್ಟ ಪ್ರಕರಣ ದೇಶಾದ್ಯಂತ ಭಾರಿ ಸದ್ದು ಮಾಡಿತ್ತು. ಇದೀಗ ಪತಿಯ ಔದಾರ್ಯಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದ್ದು, ಪ್ರಿಯಕರನ ಜೊತೆ ಮದುವೆಯಾಗಿದ್ದ ಮಹಿಳೆಯು ಮರಳಿ ಮೊದಲ ಗಂಡನ ಮನೆ ಸೇರುವಂತಾಗಿದೆ.
ಉತ್ತರ ಪ್ರದೇಶದ ಸಂತ ಕಬೀರ್ ನಗರ ಜಿಲ್ಲೆಯ ಬಬ್ಲೂ ಎಂಬವರು ಮಾರ್ಚ್ 25ರಂದು ತನ್ನ ಪತ್ನಿ ರಾಧಿಕಾಳನ್ನು ಆಕೆಯ ಪ್ರೇಮಿ ವಿಕಾಸ್ ಜೊತೆ ಮದುವೆ ಮಾಡಿಸಿದ್ದರು. ಅಲ್ಲದೆ, ತನ್ನ ಇಬ್ಬರು ಮಕ್ಕಳನ್ನು ತಾನೇ ಬೆಳೆಸುವ ಜವಾಬ್ದಾರಿ ವಹಿಸಿಕೊಂಡಿದ್ದರು.
ಆದರೆ, ಮದುವೆಯಾಗಿ ತನ್ನ ಎರಡನೇ ಗಂಡನ ಮನೆಗೆ ತೆರಳಿದ ಮಹಿಳೆಯನ್ನು ಅವಳ ಅತ್ತೆ (ಗಂಡನ ತಾಯಿ) ಒಪ್ಪಿಕೊಂಡಿಲ್ಲ. ಈ ಮದುವೆಯಿಂದಾಗಿ ಬಬ್ಲೂ ಹಾಗೂ ಆತನ ಮಕ್ಕಳು ಅನುಭವಿಸುತ್ತಿರುವ ನೋವನ್ನು ಸಹಿಸಲಾಗುತ್ತಿಲ್ಲ ಎಂದು ಯೋಚಿಸಿ, ಸೊಸೆಯನ್ನು ಆಕೆಯ ಮೊದಲ ಗಂಡನ ಬಳಿಗೆ ಮರಳಿ ಕಳುಹಿಸಿದ್ದಾರೆ. ಇದರೊಂದಿಗೆ, ಗಂಡನ ತ್ಯಾಗಕ್ಕೆ ಅತ್ತೆಯ ಔದಾರ್ಯತೆಯಿಂದ ತಿರುವು ಪಡೆದಿದ್ದು, ಈ ವಿಚಾರವು ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗುತ್ತಿದೆ.
ಈ ಘಟನೆಗೂ ಕೆಲ ದಿನಗಳ ಹಿಂದೆ ಉತ್ತರ ಪ್ರದೇಶದ ಮೀರತ್ನಲ್ಲಿ ಪತ್ನಿಯೇ ತನ್ನ ಪ್ರಿಯಕರನೊಂದಿಗೆ ಸೇರಿಕೊಂಡು ಪತಿಯ ಹತ್ಯೆ ಮಾಡಿ, ಪ್ಲಾಸ್ಟಿಕ್ ಡ್ರಮ್ನಲ್ಲಿ ತುಂಬಿಟ್ಟ ಭಯಾನಕ ಘಟನೆ ನಡೆದಿತ್ತು. ಸೌರಭ್ ರಜಪೂತ್ ಎಂಬಾತ ಪತ್ನಿ ಮುಸ್ಕಾನ್ ಮತ್ತು ಪ್ರೇಮಿ ಸಾಹಿಲ್ನಿಂದ ಕೊಲೆಗೀಡಾಗಿದ್ದ. ಈ ಘಟನೆಯು ಅರಿವಿಗೆ ಬಂದು ಭಯಭೀತರಾದ ಬಬ್ಲೂ, ತನ್ನ ಪತ್ನಿ ರಾಧಿಕಾಳನ್ನು ಆಕೆಯ ಪ್ರೇಮಿ ವಿಕಾಸ್ ಜೊತೆ ಮದುವೆ ಮಾಡಲು ನಿರ್ಧರಿಸಿದ್ದ.
ಮಹಿಳೆಯನ್ನು ಮದುವೆಯಾಗಿದ್ದ ಮಗ ವಿಕಾಸ್ಗೆ ಆತನ ತಾಯಿಯು ಬಬ್ಲೂವಿನ ಮುಂದಿನ ಜೀವನದ ಬಗ್ಗೆ ಮನವರಿಕೆ ಮಾಡಿದ್ದಾರೆ. ಬಬ್ಲೂ ತನ್ನ ಪತ್ನಿಯಿಂದ ಬೇರ್ಪಟ್ಟು, ಇಬ್ಬರು ಮಕ್ಕಳನ್ನು ಒಬ್ಬಂಟಿಯಾಗಿ ನೋಡಿಕೊಳ್ಳುತ್ತಾ, ಆತ ಅನುಭವಿಸುವ ನೋವಿನ ಬಗ್ಗೆ ಮಗನಿಗೆ ವಿವರಿಸಿದ್ದಾರೆ. ಅಲ್ಲದೆ, ಪತ್ನಿ ರಾಧಿಕಾಳನ್ನು ಬಬ್ಲೂ ಮನೆಗೆ ವಾಪಸ್ ಬಿಡುವಂತೆ ಮಗನ ಮನವೊಲಿಸಿದ್ದಾರೆ.