ನ್ಯೂಸ್ ನಾಟೌಟ್: ಪ್ರೀತಿ, ಪ್ರೇಮದ ನಶೆಯಲ್ಲಿ ಕುಟುಂಬದವರನ್ನೇ ಬಲಿ ತೆಗೆದುಕೊಂಡ ಘಟನೆಯೊಂದು ತೆಲಂಗಾಣದ ಮೆಹಬೂಬಬಾದ್ ಜಿಲ್ಲೆಯಲ್ಲಿ ನಡೆದಿದೆ.
ಪ್ರೀತಿಗೆ ಅಡ್ಡ ಬಂದರು ಎಂದು ಆರೋಪಿಸಿ ತನ್ನ ಪ್ರಿಯಕರ ಮತ್ತು ಕುಟುಂಬಸ್ಥರ ನೆರವಿನಿಂದ ಹೆತ್ತ ತಂದೆಯ ಮೇಲೆ ಮಗಳು ಮಾರಣಾಂತಿಕ ಹಲ್ಲೆ ಮಾಡಿದ್ದಾಳೆ. ತೀವ್ರ ಗಾಯಗೊಂಡ ವ್ಯಕ್ತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಾಗ ಸಾವನ್ನಪ್ಪಿದ್ದಾರೆ. ವ್ಯಕ್ತಿಯ ತಾಯಿ (ಆಕೆಯ ಅಜ್ಜಿ) ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.
ಮೆಹಬೂಬಬಾದ್ ಜಿಲ್ಲೆಯ ಮಾರಿಪೆಡಾ ಮಂಡಲದ ಡಿಎಸ್ ಆರ್ ಜೆಂದಾಲ್ ತಾಂಡಾದಲ್ಲಿ ಈ ಘಟನೆ ನಡೆದಿದೆ. ಧಾರಾವತ್ ಕಿಶನ್ ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ಇವರಿಗೆ ಪತ್ನಿ ಮತ್ತು ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಕಿರಿಯ ಮಗಳು ಅದೇ ತಾಂಡಾದ ಸುರೇಶ್ ಎಂಬಾತನನ್ನು ಪ್ರೀತಿಸುತ್ತಿದ್ದಳು.
ಜೂ.18ರ ರಾತ್ರಿ ಮಗಳು ತನ್ನ ಪ್ರಿಯಕರನ ಜೊತೆ ಫೋನ್ ನಲ್ಲಿ ಮಾತನಾಡುವುದನ್ನು ಆಕೆಯ ತಂದೆ ಕಂಡಿದ್ದಾರೆ. ಕೋಪಗೊಂಡ ಆತ ಮಗಳಿಗೆ ಬೈದು ಬುದ್ಧಿವಾದ ಹೇಳಿದ್ದಾನೆ. ಇನ್ನು ಮುಂದೆ ಆತನ ಜೊತೆ ಯಾವುದೇ ಸಂಪರ್ಕ ಇಟ್ಟುಕೊಳ್ಳದಂತೆ ಎಚ್ಚರಿಕೆ ನೀಡಿದ್ದಾನೆ.
ಇಷ್ಟಕ್ಕೆ ಕೋಪಗೊಂಡ ಪುತ್ರಿ, ಅದೇ ದಿನ ರಾತ್ರಿ ಪ್ರಿಯಕರನನ್ನು ಮನೆಗೆ ಕರೆಸಿಕೊಂಡು ತಾಯಿ, ಅಕ್ಕ ಮತ್ತಿಬ್ಬರ ನೆರವು ಪಡೆದು ತಂದೆಯ ಕೈ- ಕಾಲುಗಳನ್ನು ಹಗ್ಗದಿಂದ ಕಟ್ಟಿ ಹಾಕಿದ್ದಾರೆ. ಬಳಿಕ ಮನಸೋ ಇಚ್ಚೆ ಎಲ್ಲರೂ ಹಲ್ಲೆ ಮಾಡಿದ್ದಾರೆ. ಇದರಿಂದ ವ್ಯಕ್ತಿ ತೀವ್ರ ಗಾಯಗೊಂಡಿದ್ದಾರೆ.
ದಾಳಿಯಿಂದಾಗಿ ವ್ಯಕ್ತಿಯು ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಇದೇ ವೇಳೆ ಮನೆಯಲ್ಲಿದ್ದ ಆತನ ತಾಯಿ ಇದನ್ನು ಕಂಡಿದ್ದಾರೆ. ತಕ್ಷಣವೇ ಕೆಲವರ ಸಹಾಯದಿಂದ ಆತನನ್ನು ಮಹಬೂಬಾಬಾದ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಪರಿಸ್ಥಿತಿ ಗಂಭೀರವಾಗಿದ್ದರಿಂದ ಗಾಯಾಳುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಖಮ್ಮಮ್ ಆಸ್ಪತ್ರೆಗೆ ಸ್ಥಳಾಂತರಿಸುವಾಗ ಸಾವನ್ನಪ್ಪಿದ್ದಾರೆ.
ಘಟನೆಗೆ ಕಾರಣವಾದ ಮೊಮ್ಮಗಳು ಮತ್ತು ಕುಟುಂಬಸ್ಥರ ವಿರುದ್ಧ ಅಜ್ಜಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಮೃತರ ಕಿರಿಯ ಮಗಳು, ಆಕೆಯ ಗೆಳೆಯ, ಹಿರಿಯ ಮಗಳು, ಪತ್ನಿ ಮತ್ತು ಅವರಿಗೆ ಸಹಾಯ ಮಾಡಿದ ಇತರ ಇಬ್ಬರು ಸೇರಿ ಒಟ್ಟು ಆರು ಜನರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.