Latest

ಪವಿತ್ರ ಗಂಗಾ ನದಿಗೆ ಶವವಿದ್ದ ಸೂಟ್​ಕೇಸ್​ ಎಸೆಯಲು ಹೋಗಿ ಸಿಕ್ಕಿಬಿದ್ದರು!! ಮಹಿಳೆಯ ಶವವಿಟ್ಟುಕೊಂಡು ಸಾಕುನಾಯಿ ಸತ್ತುಹೋಯಿತೆಂದು ಕಥೆ ಕಟ್ಟಿದ್ದ ಖತರ್ನಾಕ್ ಅಮ್ಮ-ಮಗಳು!

1k

ನ್ಯೂಸ್‌ ನಾಟೌಟ್: ತಾಯಿಯಂತೆ ಮಗಳು ನೂಲಿನಂತೆ ಸೀರೆ, ಇಬ್ಬರಿಗೂ ಒಂದೇ ಮನಃಸ್ಥಿತಿ..ತಾಯಿ ಮತ್ತು ಮಗಳ ಈ ಖತರ್ನಾಕ್ ಕೆಲಸ ನೋಡಿದ್ರೆ ಎಂಥವರಾದ್ರೂ ಒಮ್ಮೆ ಬೆಚ್ಚಿ ಬೀಳಲೇ ಬೇಕು. ಹೌದು, ಶವ ತುಂಬಿದ್ದ ಸೂಟ್​ಕೇಸ್ ನದಿಗೆ​ ಎಸೆಯಲು ಹೋಗಿ ಇಬ್ಬರು ಮಹಿಳೆಯರು ಸ್ಥಳೀಯರ ಕೈಗೆ ಸಿಕ್ಕಿಬಿದ್ದಿರುವ ಘಟನೆ ಕೋಲ್ಕತ್ತಾದಲ್ಲಿ ನಡೆದಿದೆ. ಗಂಗಾನದಿಯಲ್ಲಿ ಸೂಟ್​ಕೇಸ್​ನ್ನು ವಿಲೇವಾರಿ ಮಾಡಲು ಯತ್ನಿಸುತ್ತಿದ್ದ ಅಮ್ಮ-ಮಗಳನ್ನು ಸ್ಥಳೀಯರು ರೆಡ್​ಹ್ಯಾಂಡ್​ ಆಗಿ ಹಿಡಿದಿದ್ದಾರೆ.

ಫಲ್ಗುಣಿ ಘೋಷ್ ಮತ್ತು ಆಕೆಯ ತಾಯಿ ಆರತಿ ಘೋಷ್ ಎಂಬ ಇಬ್ಬರನ್ನು ಇದೀಗ ಬಂಧಿಸಲಾಗಿದೆ. ಮೃತದೇಹವನ್ನು ಫಲ್ಗುಣಿ ಘೋಷ್ ಅವರ ಮಾವನ ಸಹೋದರಿ ಸುಮಿತಾ ಘೋಷ್ (55) ಎಂದು ಗುರುತಿಸಲಾಗಿದೆ. ಉತ್ತರ ಕೋಲ್ಕತ್ತಾದ ಕುಮಾರ್ತುಲಿಯ ಗಂಗಾ ನದಿಯ ದಡದ ಬಳಿ ಬೆಳಗ್ಗೆ 8 ಗಂಟೆ ಸುಮಾರಿಗೆ ಈ ಮಹಿಳೆಯರು ನೀಲಿ ಬಣ್ಣದ ಟ್ರಾಲಿ ಬ್ಯಾಗ್‌ನೊಂದಿಗೆ ಕಾಣಿಸಿಕೊಂಡಿದ್ದರು.ಸ್ಥಳೀಯರು ಅವರ ಅನುಮಾನಾಸ್ಪದ ಚಲನವಲನವನ್ನು ಗಮನಿಸಿ ಅವರ ಬಳಿ ಕೇಳಿಯೇ ಬಿಡಬೇಕು ಎಂದು ನಿರ್ಧರಿಸಿದರು. ಆರಂಭದಲ್ಲಿ ಮಹಿಳೆಯರು ಬ್ಯಾಗ್ ತೆರೆಯಲು ನಿರಾಕರಿಸಿದರು. ಆಮೇಲೆ ಗಟ್ಟಿ ಧ್ವನಿಯಲ್ಲಿ ಕೇಳಿದ ಬಳಿಕ ತಮ್ಮ ಸಾಕು ನಾಯಿ ಸತ್ತು ಹೋಗಿತ್ತು ಅದರ ದೇಹವನ್ನು ನೀರಿನಲ್ಲಿ ಹಾಕಲು ತೆಗೆದುಕೊಂಡು ಹೋಗುತ್ತಿರುವುದಾಗಿ ಹೇಳಿದರು. ಇದು ಮತ್ತಷ್ಟು ಅನುಮಾನಕ್ಕೆ ಕಾರಣವಾಯಿತು, ಏನೇ ಆದರೂ ಬ್ಯಾಗ್​ನ ಜಿಪ್​ ತೆಗೆಯಲು ಸಿದ್ಧರಿರಲಿಲ್ಲ.

ಬಳಿಕ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದಾಗ ಪೊಲೀಸರು ಸ್ಥಳಕ್ಕೆ ಬಂದರು. ಪೊಲೀಸರು ಬೆಂಡೆತ್ತಿದ ಬಳಿಕ ಟ್ರಾಲಿ ಬ್ಯಾಗ್ ಅನ್ನು ಬಲವಂತವಾಗಿ ತೆರೆದಾಗ ಒಳಗೆ ಮಹಿಳೆಯ ರಕ್ತಸಿಕ್ತ ಶವ ಪತ್ತೆಯಾಗಿದೆ. ನಂತರ ಇಬ್ಬರನ್ನೂ ಪೊಲೀಸ್ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿ ಬಂಧಿಸಲಾಯಿತು.

ಫಲ್ಗುಣಿ ಹೇಳಿಕೆಯ ಪ್ರಕಾರ, ಮೃತ ಸುಮಿತಾ ತನ್ನ ಮಾವನ ಸಹೋದರಿ. ಅಸ್ಸಾಂನ ಜೋರ್ಹತ್ ಮೂಲದ ಸುಮಿತಾ ತನ್ನ ಪತಿಯಿಂದ ಬೇರ್ಪಟ್ಟಿದ್ದು, ಫೆಬ್ರವರಿ 11 ರಿಂದ ಕೋಲ್ಕತ್ತಾದ ತಮ್ಮ ನಿವಾಸದಲ್ಲಿ ತಾಯಿ-ಮಗಳೊಂದಿಗೆ ವಾಸಿಸುತ್ತಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.ಸೋಮವಾರ ಸಂಜೆ ಫಲ್ಗುಣಿ ಜೊತೆ ನಡೆದ ತೀವ್ರ ವಾಗ್ವಾದದಲ್ಲಿ ಸುಮಿತಾ ಸಾವನ್ನಪ್ಪಿದ್ದಾರೆ ಎಂದು ಕೋಲ್ಕತ್ತಾದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಸಂಜೆ 4 ಗಂಟೆ ಸುಮಾರಿಗೆ ಕ್ಷುಲ್ಲಕ ಕಾರಣಕ್ಕೆ ಜಗಳ ನಡೆದಿತ್ತು. ಫಲ್ಗುಣಿ ಮೃತಳನ್ನು ಗೋಡೆಗೆ ತಳ್ಳಿದ್ದರಿಂದ ಆಕೆ ಪ್ರಜ್ಞೆತಪ್ಪಿ ಬಿದ್ದಿದ್ದಳು. ಪ್ರಜ್ಞೆ ಮರಳಿ ಬಂದಾಗ, ದೊಡ್ಡ ಜಗಳವೇ ನಡೆಯಿತು. ಫಲ್ಗುಣಿ ಅವಳ ಮುಖ ಮತ್ತು ಕುತ್ತಿಗೆಗೆ ಇಟ್ಟಿಗೆಯಿಂದ ಹೊಡೆದ ಕಾರಣ ಆಕೆ ಸಾವನ್ನಪ್ಪಿದ್ದಳು. ನಂತರ ತಾಯಿ-ಮಗಳು ಶವವನ್ನು ಟ್ರಾಲಿ ಬ್ಯಾಗಿನಲ್ಲಿ ಹಾಕಿ ನದಿಗೆ ಎಸೆಯಲು ಪ್ರಯತ್ನಿಸಿದ್ದರು ಎಂಬ ಭಯಾನಕ ಸತ್ಯ ಹೊರಬಿದ್ದಿದೆ.

See also  ಪಂಜಕ್ಕೆ ಬರ್ತಿದ್ದಾರೆ ಅಂತಾರಾಷ್ಟ್ರೀಯ ಖ್ಯಾತಿಯ ಜಾದೂಗಾರ ಜೂನಿಯರ್ ಶಂಕರ್ , ಇಂದು ಮಧ್ಯಾಹ್ನ 1.30ಕ್ಕೆ ಆಗಮನ, ಮಕ್ಕಳಲ್ಲಿ ಗರಿಗೆದರಿದ ಕುತೂಹಲ
  Ad Widget   Ad Widget   Ad Widget   Ad Widget   Ad Widget   Ad Widget   Ad Widget