ನ್ಯೂಸ್ ನಾಟೌಟ್: ಯುಟ್ಯೂಬರ್ ಎಂಡಿ ಸಮೀರ್ ವಿರುದ್ಧ 10 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಲಾಗಿದೆ.ವಿದ್ಯಾರ್ಥಿನಿ ಸೌಜನ್ಯಾ ಕೊಲೆ ಪ್ರಕರಣ ಸಂಬಂಧ ಧರ್ಮಸ್ಥಳವನ್ನು ಗುರಿಯಾಗಿಟ್ಟುಕೊಂಡು ಮಾಡಿದ್ದ ವಿಡಿಯೋವನ್ನು ತೆಗೆದು ಹಾಕುವಂತೆ ನೀಡಿದ್ದ ಆದೇಶ ಉಲ್ಲಂಘಿಸಿದ್ದಕ್ಕೆ10 ಕೋಟಿ ರೂ. ಪರಿಹಾರ ಕೋರಿ ಈ ಮಾನನಷ್ಟ ದಾವೆ ದಾಖಲಿಸಲಾಗಿದೆ.
ಧರ್ಮಸ್ಥಳ ಪರ ಡಿ. ಹರ್ಷೇಂದ್ರ ಕುಮಾರ್ ಮತ್ತು ನಿಶ್ಚಲ್ ಡಿ. ಹೂಡಿದ್ದ ಮಾನನಷ್ಟ ಮೊಕದ್ದಮೆ ಅರ್ಜಿ ಪರಿಶೀಲಿಸಿದ ಬಳಿಕ ಬೆಂಗಳೂರಿನ ಸಿಟಿ ಸಿವಿಲ್ ನ್ಯಾಯಾಧೀಶರಾದ ಎಸ್. ನಟರಾಜ್ ಅವರು ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿದ್ದಾರೆ.
ವಾದ ಆಲಿಸಿದ ಬಳಿಕ ನ್ಯಾಯಾಲಯ, ಯೂಟ್ಯೂಬರ್ ಗೆ ನೋಟಿಸ್ ಜಾರಿ ಮಾಡಿ, ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದೆ. ಅಲ್ಲದೆ, ನ್ಯಾಯಾಲಯದ ಆದೇಶ ಉಲ್ಲಂಘಿಸಿ ಹರಿಬಿಟ್ಟಿದ್ದ ವಿಡಿಯೋವನ್ನು ತಕ್ಷಣ ಡಿಲೀಟ್ ಮಾಡಲು ನ್ಯಾಯಾಲಯ ಆದೇಶಿಸಿದೆ.ಅರ್ಜಿದಾರರ ಪರ ರಾಜಶೇಖರ ಹಿಲ್ಯಾರ್ ವಾದ ಮಂಡಿಸಿ, ‘ಯುಟ್ಯೂಬರ್ ಸಮೀರ್ ಎಂ.ಡಿ. ಎಂಬಾತ ಹರಿಬಿಟ್ಟ ವಿಡಿಯೋದ ವಿರುದ್ಧ ನ್ಯಾಯಾಲಯವಿಡಿಯೋ ತೆಗೆದು ಹಾಕುವಂತೆ ಮತ್ತು ಈ ಕುರಿತು ಮತ್ತೆ ವಿಡಿಯೋ ಮಾಡದಂತೆ ತಡೆಯಾಜ್ಞೆ ನೀಡಿತ್ತು. ಆದರೆ, ನ್ಯಾಯಾಲಯದ ತಡೆಯಾಜ್ಞೆ ಅದೇಶವನ್ನು ಉಲ್ಲಂಘಿಸಿ, ಎರಡನೇ ವಿಡಿಯೋ ಬಿಟ್ಟಿದ್ದ ಸಮೀರ್ ಎಂ.ಡಿ. ಹಾಗೂ ಯೂಟ್ಯೂಬ್ ಚಾನಲ್ ‘ದೂತ’ ಮೇಲೆ ಮಾನನಷ್ಟ ಮೊಕದ್ದಮೆ ಕಾಯಿದೆಯಡಿ ಕ್ರಮ ಮುಂದುವರಿಸಬೇಕು,’ ಎಂದು ಕೋರಿದ್ದರು.