ಕೆವಿಜಿ ಕ್ಯಾಂಪಸ್‌ಸುಳ್ಯ

ಸುಳ್ಯದ ಅಮರಶಿಲ್ಪಿ ದಿವಂಗತ ಡಾ.ಕುರುಂಜಿ ವೆಂಕಟ್ರಮಣ ಗೌಡ

157

ನ್ಯೂಸ್ ನಾಟೌಟ್: ಸ್ವಾತಂತ್ರ್ಯಪೂರ್ವ ಮತ್ತು ನಂತರದ ದಿನಗಳಲ್ಲಿ ತೀರಾ ಹಿಂದುಳಿದಿದ ಸುಳ್ಯದಲ್ಲಿ ಜ್ಞಾನದ ಬೆಳಕನ್ನು ಹರಿಸಿ ವಿದ್ಯೆ ಎಂಬ ಜ್ಞಾನಜ್ಯೋತಿಯನ್ನು ಪ್ರತಿ ಮನೆ ಮನದಲ್ಲಿಯೂ ಬೆಳಗಿಸಿರುವುದ್ದಲ್ಲದೇ, ಸುಳ್ಯದಂತ ಗ್ರಾಮೀಣ ಪ್ರದೇಶವನ್ನು ಭಾರತದ ಭೂಪಟದಲ್ಲಿ ಗುರುತಿಸುವಂತೆ ಮಾಡಿದ ಒರ್ವ ಕರ್ಮಯೋಗಿ ದಿವಂಗತ ಡಾ.ಕುರುಂಜಿ ವೆಂಕಟ್ರಮಣ ಗೌಡರು.

ಆಧುನಿಕ ಸುಳ್ಯದ ಸೃಷ್ಟಿಕರ್ತ, ಶಿಕ್ಷಣ ಕ್ರಾಂತಿಯ ಹರಿಕಾರ, ಸಮಾಜಸೇವಕ, ಕೊಡುಗೈ ದಾನಿಯಾದ ಇವರು ಸುಳ್ಯ ಎಂಬ ಕುಗ್ರಾಮವನ್ನು ತನ್ನ ಶ್ರಮದ ಫಲದಿಂದ, ಇಡೀ ದೇಶಕ್ಕೆ ಪರಿಚಯಿಸಿ, ಉನ್ನತ ವ್ಯಾಸಂಗಕ್ಕೆ ಬೇಕಾಗಿರುವ ಎಲ್ಲಾ ಶಿಕ್ಷಣ ಸಂಸ್ಥೆಗಳನ್ನು ಈ ಪುಟ್ಟ ಊರಲ್ಲಿ ಸ್ಥಾಪಿಸಿ ‘ಶಿಕ್ಷಣ ಬ್ರಹ್ಮ’ ಎಂದೇ ಪ್ರಸಿದ್ಧರಾದರು.
ಸುಳ್ಯದಲ್ಲಿ ಹಲವಾರು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ, ಜ್ಞಾನಜ್ಯೋತಿ ಬೆಳಗಿಸಿದ ಕಾಯಕಯೋಗಿ ತನ್ನ 85ರ ಹರೆಯದಲ್ಲಿ ಇಹಲೋಕವನ್ನು ತ್ಯಜಿಸಿದ್ದು ತುಂಬಲಾರದ ನಷ್ಟ.

ದೀನದಲಿತರಿಗೆ, ಬಡವ ಬಲ್ಲಿದ ಎನ್ನದೆ, ಸಮಾಜದ ಎಲ್ಲಾ ವರ್ಗದವರಿಗೂ ಆರೋಗ್ಯ ಸೇವೆ ಕಲ್ಪಿಸಿದವರು, ಸಹಾಯಹಸ್ತ ಬಯಸಿ ಬಂದವರಿಗೆ ಸಹಾಯವಿತ್ತವರು, ಎಲ್ಲರೂ ವಿದ್ಯಾವಂತರಾಗಬೇಕೆಂಬ ಕನಸನ್ನು ನನಸು ಮಾಡಲು ಹತ್ತು ಹಲವು ವಿದ್ಯಾಸಂಸ್ಥೆಗಳನ್ನು ಸ್ಥಾಪಿಸಿ ಕೈಗೆಟಕುವ ದರದಲ್ಲಿ ವಿದ್ಯೆ ನೀಡಿದವರು ಇವರು.

ಪ್ರಗತಿ ಪ್ರಾಬಲ್ಯ ಕಳೆದುಕೊಂಡಿದ್ದ ನಮ್ಮ ಸುಳ್ಯ ತಾಲೂಕನ್ನು ನಗರವಾಗಿ ಬೆಳೆಸಿ ಎಲ್ಲಾ ಕ್ಷೇತ್ರದಲ್ಲಿನ ಪ್ರಗತಿಗೆ ಕಾರಣೀಭೂತರಾದ ಇವರು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಪ್ರತಿಷ್ಠಿತ ಕುರುಂಜಿ ಮನೆತನದ ದಿ. ಮಹಾಲಿಂಗ ಮಾಸ್ತರ್ ಹಾಗೂ ಲಕ್ಷ್ಮಿ ದಂಪತಿಗಳ ಏಳು ಜನ ಮಕ್ಕಳಲ್ಲಿ ಎರಡನೇ ಮಗನಾಗಿ 1928 ಡಿಸೆಂಬರ್ 26 ರಂದು ಜನಿಸಿದರು. ತಮ್ಮ ನಿಸ್ವಾರ್ಥ ಸಾಧನೆಯ ಮೂಲಕ ನಾಡಿಗೆ ನಾಡೇ ತಿರುಗಿ ನೋಡುವಂತೆ ಮಾಡಿದ ಮಹಾನ್ ಮೇಧಾವಿ ಇವರು.

ಬಾಲ್ಯದಿಂದಲೇ ಬಡತನದ ಬೆಗೆಯಲ್ಲಿ ಬೆಂದ ಕುರುಂಜಿ ವೆಂಕಟ್ರಮಣ ಗೌಡರು 1943ರಲ್ಲಿ ತಂದೆಯನ್ನು ಕಳೆದುಕೊಂಡಾಗ ಆರು ಮಂದಿ ಗಂಡು ಮಕ್ಕಳು ಮತ್ತು ಒಬ್ಬಾಕೆ ಮಗಳು ತಬ್ಬಲಿಗಳಾದ ಸಮಯದಲ್ಲಿ ತನ್ನ 15ನೇ ವಯಸ್ಸಿನಲ್ಲಿ ಎಂಟನೇ ತರಗತಿಯ ವಿದ್ಯಾಬ್ಯಾಸಕ್ಕೆ ತೃಪ್ತಿಪಟ್ಟು ಅಣ್ಣ ವಿಶ್ವನಾಥ ಗೌಡ ಕೆ.ಎಂ.ರೊಡನೆ ಕುಟುಂಬದ ಆಸರೆಗೆ ಹೆಗಲು ಕೊಟ್ಟರು. ಈ ಮೂಲಕ ‘ಪಿತೃ ಸಮಾನ ಭಾತೃ’ ಎಂಬ ಪರಂಪರೆಯಂತೆ ಜವಾಬ್ದಾರಿಯ ಭಾರವನ್ನು ಸಮಾನವಾಗಿ ಹೊರುವುದರ ಮೂಲಕ ಸೋದರತ್ವವನ್ನು ಮೆರೆದವರು.
ಇದ್ದ ಅಲ್ಪಸ್ವಲ್ಪ ಕೃಷಿಯಲ್ಲಿ ಬದುಕು ಸಾಗಿಸುತ್ತಾ 1955ರಲ್ಲಿ ಅತೀ ಚಿಕ್ಕ ವಯಸ್ಸಿನಲ್ಲಿ ಕೃಷಿಭೂಮಿ ಖರೀದಿಸಿ 800 ಕ್ಕಿಂತಲೂ ಅಧಿಕ ತೆಂಗಿನ ಸಸಿಗಳನ್ನು ಸ್ವತ: ತಾವೇ ನೆಟ್ಟು ಬೆಳೆಸಿದರು. ತದನಂತರ ಹಂತಹಂತವಾಗಿ ಅಡಿಕೆ ಸಸಿ, ಕಾಳುಮೆಣಸು, ತೆಂಗು, ಕೊಕ್ಕೊ ಮುಂತಾದ ಬೆಳೆಗಳನ್ನು ಬೆಳೆದರು. ಅದರಿಂದ ಬಂದ ಆದಾಯವನ್ನು ತನ್ನ ಸ್ವಂತಕ್ಕೆ ಉಪಯೋಗಿಸದೇ, ಶಿಕ್ಷಣ ಸಂಸ್ಥೆಗಳಿಗೆ ವಿನಿಯೋಗಿಸುತ್ತಾ ಬಂದರು. ಜೊತೆಗೆ ಕುಟುಂಬ ನಿರ್ವಹಣೆಗಾಗಿ ಚಿಕ್ಕ ಗೂಡಂಗಡಿ ಒಂದನ್ನು ತೆರೆದು ವ್ಯಾಪಾರವನ್ನೂ ಆರಂಭಿಸಿ ಯಶಸ್ವಿಯಾದರು.

See also  ಸುಳ್ಯ: ಕುಸಲ್ದರಸೆ ನವೀನ್ ಡಿ. ಪಡೀಲ್‌ರಿಗೆ 'ಮೂಗಜ್ಜನ ಕೋಳಿ' ಚಿತ್ರಕ್ಕೆ 'ಅತ್ಯುತ್ತಮ ನಟ' ಪ್ರಶಸ್ತಿ ,ಸುಳ್ಯದ ಒಕ್ಕಲಿಗರು ಆಡುವ ಭಾಷೆ ಅರೆ ಭಾಷೆಯ ಮೊದಲ ಸಿನಿಮಾದಲ್ಲಿ ಅಭಿನಯಿಸಿದ್ದ ತುಳು ಹಾಸ್ಯನಟ..!

ಮುಂದೆ ಸುಳ್ಯದಲ್ಲಿ ಬೃಹತ್ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ದೇಶವೇ ತಿರುಗಿ ನೋಡುವಂತೆ ಮಾಡಿದ ಮಹಾನ್ ಸಾಧಕ ಇವರು. ಸುಳ್ಯ ತಾಲೂಕು 60ರ ದಶಕದಲ್ಲಿ ಬಹಳ ಹಿಂದುಳಿದುದು ಮಾತ್ರವಲ್ಲದೆ ಮೂಲಭೂತ ಸೌಕರ್ಯಗಳಿಂದ ಕೂಡ ವಂಚಿತವಾಗಿತ್ತು. ಪರಿಸ್ಥಿತಿಯನ್ನರಿತ ಡಾ.ಕುರುಂಜಿಯವರು ಸುಳ್ಯ ನಗರವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸಬೇಕೆಂದು 1950ರಲ್ಲಿ ಸುಳ್ಯದಲ್ಲಿ ಬೋರ್ಡ್ ಹೈಸ್ಕೂಲ್ ತೆರೆಯಲು ಶಕ್ತರಾದರು. ಹೈಸ್ಕೂಲ್ ಅಭಿವೃದ್ಧಿಗಾಗಿ ಕುರುಂಜಿಯವರು ಸ್ವತ: ಕಲಾವಿದರಾಗಿ 2 ಸಾಮಾಜಿಕ ನಾಟಕಗಳನ್ನು ಪ್ರದರ್ಶಿಸಿ ಅದ್ದರಿಂದ ಧನ ಸಂಗ್ರಹ ಮಾಡಿದ್ದರು ಎಂಬುದನ್ನು ನಾವು ಕೇಳಿ ತಿಳಿದಿದ್ದೇವೆ. ಸುಳ್ಯಕ್ಕೊಂದು ಪ್ರತ್ಯೇಕ ತಾಲೂಕು ರಚನೆ, ತಾಲೂಕು ಕಛೇರಿ, ನ್ಯಾಯಾಲಯ, ಆಸ್ಪತ್ರೆ ಅಲ್ಲದೇ ವಿದ್ಯುತ್, ದೂರವಾಣಿ ಸಂಪರ್ಕ ಮಾಡುವಲ್ಲಿಯೂ ಇವರ ಕಾರ್ಯ ಸ್ಮರಣೀಯವಾದದು. ಯಾವುದೇ ರೀತಿಯ ಆರ್ಥಿಕ ಸಹಾಯ, ರಾಜಕೀಯ ಬೆಂಬಲಗಳಿಲ್ಲದೆ, ಏಕಾಂಗಿಯಾಗಿ ಸಂಸ್ಥೆಗಳನ್ನು ಕಟ್ಟಿದ ಅವರ ಶ್ರಮ ನಿಜಕ್ಕೂ ಶ್ಲಾಘನೀಯ.

ಅಜ್ಞಾನ, ಅನಕ್ಷರತೆ, ಅನಾರೋಗ್ಯ ಹಾಗೂ ದಾರಿದ್ರ್ಯದ ವಿರುದ್ಧ ಸಮರ ಸಾರಿದ ಇವರು ಕಠಿಣ ದುಡಿಮೆ, ಸಮಗ್ರತೆ, ಪ್ರಾಮಾಣಿಕತೆ, ಸಮಯಪಾಲನೆ, ತ್ಯಾಗ ಮನೋಭಾವಗಳೆಂಬ ಪಂಚ ಸೂತ್ರಗಳನ್ನು ಪಾಲಿಸುತ್ತಿದ್ದವರು. ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ, ಆಲಸ್ಯ ಇವರ ಸಪ್ತ ಶತ್ರುಗಳಾಗಿದ್ದವು. ʼನಾನು ಬರುವಾಗ ಏನನ್ನೂ ತಂದಿಲ್ಲ, ಹೋಗುವಾಗ ಏನನ್ನೂ ಕೊಂಡೊಯ್ಯುವುದಿಲ್ಲ, ಇಲ್ಲಿ ಗಳಿಸಿದ್ದನ್ನು ಇಲ್ಲಿಯೇ ವ್ಯಯಿಸಿದ್ದೇನೆʼ ಎನ್ನುತ್ತಿದ್ದರು. ರಕ್ತ ಸಂಬಂಧಕ್ಕಿಂತ ಭಾವನಾತ್ಮಕ ಸಂಬಂಧ ದೊಡ್ಡದು, ಹತ್ತು ಜನ ನೆನಪಿಟ್ಟುಕೊಳ್ಳುವಂತಹ ಕೆಲಸ ಮಾಡದವರ ಜೀವನ ವ್ಯರ್ಥ ಎನ್ನುತ್ತಿದ್ದರು. ಕುರುಂಜಿ ಅವರ ವ್ಯಕ್ತಿತ್ವ ಮಾತಿಗೆ ನಿಲುಕದ್ದು. ಜೀವನದಲ್ಲಿ ಪರನಿಂದನೆ, ಅಮಲು ಪದಾರ್ಥ ಸೇವನೆ, ಧೂಮಪಾನ, ಜುಗಾರಿ, ಕಳ್ಳತನ, ದರೋಡೆ, ಮುಂತಾದ ದುಶ್ಚಟಗಳಿಂದ ದೂರವಿರಲು ಕಿವಿಮಾತು ಹೇಳುತ್ತಿದ್ದರು.

ಕಠಿಣ ಪರಿಶ್ರಮದಿಂದ ಕೆವಿಜಿಯವರು 1967ರಲ್ಲಿ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ.) ಸುಳ್ಯ, ಎಂಬ ಸಂಸ್ಥೆಯನ್ನು ಸ್ಥಾಪಿಸಿ ಅವರು ಸ್ಥಾಪಕಾಧ್ಯಕ್ಷರಾಗಿ ಜೊತೆಗೆ ಪದಾಧಿಕಾರಿಗಳನ್ನು ನೇಮಿಸಿ ಅದರ ಅಡಿಯಲ್ಲಿ ವಿದ್ಯಾಸಂಸ್ಥೆಗಳನ್ನು ಸ್ಥಾಪಿಸಿ ಯಶಸ್ವಿಯಾಗಿ ಮುನ್ನಡೆಸಿದರು.

ಮೊದಲು 1976ರಲ್ಲಿ ನೆಹರೂ ಸ್ಮಾರಕ ಮಹಾವಿದ್ಯಾಲಯವನ್ನು ಸ್ಥಾಪಿಸುವುದರ ಮೂಲಕ ಶಿಕ್ಷಣದಿಂದ ವಂಚಿತರಾದ ಅದೇಷ್ಟೊ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವುದರೊಂದಿಗೆ ಹಂತ ಹಂತವಾಗಿ
1978ರಲ್ಲಿ ನೆಹರೂ ಸ್ಮಾರಕ ಪದವಿ ಪೂರ್ವ ಕಾಲೇಜನ್ನು, 1984ರಲ್ಲಿ ಕೆವಿಜಿ ಐಟಿಐ ಮತ್ತು ಕೆವಿಜಿ ಪಾಲಿಟೆಕ್ನಿಕ್ ವಿದ್ಯಾಸಂಸ್ಥೆಯನ್ನು, 1986ರಲ್ಲಿ ಕೆವಿಜಿ ತಾಂತ್ರಿಕ ಮಹಾವಿದ್ಯಾಲಯ, ತಾಂತ್ರಿಕ ಶಿಕ್ಷಣ ವಿದ್ಯಾರ್ಥಿಗಳಿಗಾಗಿ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿ ನಿಲಯಗಳನ್ನು ನಿರ್ಮಿಸಿದರು.

1990ರಲ್ಲಿ ಕೆವಿಜಿ ಕಾನೂನು ಕಾಲೇಜು, ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿ ನಿಲಯಗಳು, ಹಾಗೂ ಮೊಬೈಲ್ ಹೆಲ್ತ್ ಯುನಿಟ್, 1991 ರಲ್ಲಿ ಕೆವಿಜಿ ದಂತ ಮಹಾವಿದ್ಯಾಲಯ, 1996ರಲ್ಲಿ ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ, 2000ದಲ್ಲಿ ಹೈ ಟೆನ್ಷನ್ ಪವರ್ ಹೌಸ್, 2001ರಲ್ಲಿ ಆಯುರ್ವೇದ ವಿದ್ಯಾರ್ಥಿಗಳಿಗಾಗಿ ಕೆವಿಜಿ ಆಯುರ್ವೇದ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿ ನಿಲಯಗಳು, 2002ರಲ್ಲಿ ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ, ಮೆಡಿಕಲ್ ವಿದ್ಯಾರ್ಥಿಗಳಿಗಾಗಿ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿ ನಿಲಯಗಳು, 2008ರಲ್ಲಿ ಕೆವಿಜಿ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್, 2010ರಲ್ಲಿ ಕೆವಿಜಿ ಆಯುರ್ ಫಾರ್ಮ ಮತ್ತು ರಿಸರ್ಚ್ ಸೆಂಟರ್, ಒಳಚರಂಡಿ ಸ್ಥಾವರ ಕಟ್ಟಡ, ತ್ಯಾಜ್ಯ ನಿರ್ವಹಣೆ ಘಟಕ, 2018ರಲ್ಲಿ ಕೆವಿಜಿ ಇನ್ಸ್ಪಿಟ್ಯೂಟ್ ಆಫ್ ಎಲೈಡ್ ಹೆಲ್ತ್ ಸೈನ್ಸ್, ಕೆವಿಜಿ ಫಿಜಿಯೋಥೆರಪಿ ಹೀಗೆ ಕೆ.ಜಿಯಿಂದ ಪಿ.ಜಿಯವರೆಗೆ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಸುಳ್ಯವನ್ನು ಶಿಕ್ಷಣಕಾಶಿಯನ್ನಾಗಿ ಪರಿವರ್ತಿಸಿದ ಇವರು, ಶಿಕ್ಷಣದಿಂದ ಮಾತ್ರ ಮಾನವ ಪರಿಪೂರ್ಣತೆ ಹೊಂದಲು ಸಾಧ್ಯ ಎನ್ನುತ್ತಾ, ‘ಜ್ಞಾನಂ ಸರ್ವತ್ರ ಸಾಧನಂ’, ಎಂಬ ತತ್ವದಡಿ ವಿದ್ಯಾಸಂಸ್ಥೆಗಳನ್ನು ಬೆಳೆಸಿಕೊಂಡು ಬಂದರು.

See also  ಸುಳ್ಯ: ಎನ್‌ಎಂಸಿ ಕಾಲೇಜಿನ ಡಾ. ಟಿ. ಸುಧಾಕರನ್ ಅವರ ವೃತ್ತಿ ಜೀವನಕ್ಕೆ ವಿದಾಯ

ಇದರ ಜೊತೆಗೆ 600ಕ್ಕಿಂತ ಹೆಚ್ಚು ಹಾಸಿಗೆಯುಳ್ಳ ವೈದ್ಯಕೀಯ ಆಸ್ಪತ್ರೆ ಹಾಗೂ ಕಾಲೇಜಿನಲ್ಲಿ ಗ್ರಾಮೀಣ ಪ್ರದೇಶದ ಅನೇಕ ರೋಗಿಗಳಿಗೆ ಉಚಿತ ಹಾಗೂ ರಿಯಾಯಿತಿ ದರದ ವೈದ್ಯಕೀಯ ಸೌಲಭ್ಯಗಳನ್ನು ನೀಡುತ್ತಾ ಇಂದಿನ ಜನಾಂಗಕ್ಕೆ ದಾರಿದೀಪವಾಗಿದ್ದಾರೆ. ಸುಳ್ಯದಲ್ಲಿ ಮಾತ್ರವಲ್ಲದೇ ಅರಂತೋಡು, ಕೊಲ್ಲಮೊಗ್ರ, ಪೆರಾಜೆ, ಪುತ್ತೂರು, ಭಾಗಮಂಡಲವಷ್ಟೇ ಅಲ್ಲದೇ ದೂರದ ಬೆಂಗಳೂರಿನಲ್ಲೂ ಶಿಕ್ಷಣ ಸಂಸ್ಥೆಗಳನ್ನು ಹುಟ್ಟುಹಾಕಿದ ಕೀರ್ತಿ ಅವರದ್ದು. ಶಿಕ್ಷಣ ಕ್ಷೇತ್ರದಲ್ಲಿ ಸುವರ್ಣ ಅಧ್ಯಾಯವನ್ನು ಸೃಷ್ಟಿಸಿದ ಇವರು ದಿನವೊಂದಕ್ಕೆ ಸುಮಾರು 18ಗಂಟೆಗಳ ಕಾಲ ನಿರಂತರ ದುಡಿಯುತ್ತಿದ್ದರು ಎಂಬುದನ್ನು ಕೇಳಿ ತಿಳಿದಿದ್ದೇವೆ.

ಗ್ರಹಸ್ಥಾಶ್ರಮದ ಹೊಸ್ತಿಲಲ್ಲಿ ನಿಂತ ಕುರುಂಜಿಯವರ ಬಾಳಹಾದಿಯಲ್ಲಿ ಜೊತೆಯಾದವರು 1954ರಲ್ಲಿ ಮರಗೋಡಿನ ಪರ್ಚನ ಮನೆಯ ಜಾನಕಿ ಅಮ್ಮನವರು. ಕುರುಂಜಿಯವರ ಪರಿಶ್ರಮದ ಹಿಂದೆ ತನನ್ನು ಪೂರ್ತಿಯಾಗಿ ತೊಡಗಿಸಿಕೊಳ್ಳುತ್ತಾ ಪತಿಯ ಕೆಲಸಕಾರ್ಯಗಳಲ್ಲಿ ಜೊತೆಯಾಗಿ ನಿಂತ ಮಹಾತಾಯಿ ಅವರು. ಇವರು ಇಬ್ಬರು ಗಂಡುಮಕ್ಕಳು ಹಾಗೂ ಒಬ್ಬಾಕೆ ಹೆಣ್ಣುಮಗಳನ್ನು ಪಡೆದರು. ಕುರುಂಜಿಯವರು ಕಟ್ಟಿ ಬೆಳೆಸಿದ ಶಿಕ್ಷಣ ಸಂಸ್ಥೆಗಳನ್ನು ಇಂದು ಇವರುಗಳೇ ಮುನ್ನಡೆಸುತ್ತಾ ಸಮಾಜಕ್ಕೆ ಮಾದರಿಯಾಗಿದ್ದಾರೆ.

ಕುರುಂಜಿಯವರ ಸಾಧನೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಪ್ರಶಸ್ತಿ – ಪುರಸ್ಕಾರಗಳು ಇವರನ್ನು ಅರಸಿಕೊಂಡು ಬಂದಿವೆ. ಅಮೇರಿಕದ ಪ್ಲೋರಿಡಾ ವಿಶ್ವವಿದ್ಯಾಲಯವು ಶ್ರೀಯುತರಿಗೆ ಗೌರವ ಡಾಕ್ಟರೇಟ್ ಅನ್ನು, ರಾಜೀವ್ ಗಾಂಧಿ ಏಕತಾ ಪ್ರಶಸ್ತಿ, ಗ್ಲೋರಿ ಆಫ್ ಇಂಡಿಯಾ ಪ್ರಶಸ್ತಿ, ಪರಿಸರರತ್ನ ಪ್ರಶಸ್ತಿ, ವಿಕಾಸಜ್ಯೋತಿ ಪ್ರಶಸ್ತಿ, ಇಂದಿರಾ ಗಾಂಧಿ ಸದ್ಭಾವನಾ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಉಡುಪಿ ಮನುಕುಲ ಭೂಷಣ ಪ್ರಶಸ್ತಿ, ಅಂತಾರಾಷ್ಟ್ರೀಯ ಗೋಲ್ಡ್ ಸ್ಟಾರ್ ಮಿಲೇನಿಯಮ್ ಪ್ರಶಸ್ತಿ, ಮದರ್ ಎಕ್ಸಲೆನ್ಸ್ ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ. ಅಮೇರಿಕನ್ ಮೆಡಲ್ ಆಫ್ ಆನರ್, ನೇಪಾಳ ಸ್ನೇಹ ಪ್ರಶಸ್ತಿ, ರಾಷ್ಟ್ರೀಯ ರತನ್ ಪ್ರಶಸ್ತಿ ಮತ್ತು ಇತರ ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.

ಶ್ರೀಯುತರ ಅಹಂಕಾರ ರಹಿತ ಸರಳ ಸಜ್ಜನಿಕೆ, ಅನನ್ಯ ಮಾನವ ಮೌಲ್ಯಗಳೇ ಅವರನ್ನು ಇಂದು ನೆನಪಿಸಿಕೊಳ್ಳುವಂತೆ ಮಾಡಿವೆ. “ಆಡು ಮುಟ್ಟದ ಸೊಪ್ಪಿಲ” ಎಂಬಂತೆ ಕುರುಂಜಿಯವರು ಕೈ ಆಡಿಸದ ಕ್ಷೇತ್ರವಿಲ್ಲ.
ಧಾರ್ಮಿಕ ಕ್ಷೇತ್ರಗಳನ್ನು ಉದ್ದಾರಿಸಿದ್ದಾರೆ. ಸಾಹಿತ್ಯ ಮತ್ತು ಲಲಿತಾ ಕಲಾ ಸೇವೆಯಲ್ಲಿ ತೊಡಗಿಸಿಕೊಂಡ ಶ್ರೀಯುತರು ಯಕ್ಷಗಾನ ಬಳಗದ ಒಕ್ಕೂಟಗಳ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.
ತೀರಾ ಹಿಂದುಳಿದ ಪ್ರದೇಶವಾಗಿದ್ದ ಸುಳ್ಯವನ್ನು ಶಿಕ್ಷಣದ ನಂದನವನವನ್ನಾಗಿಸಿ ವಿದ್ಯೆ ಎಂಬ ಜ್ಯೋತಿಯನ್ನು ಬಡವನ ಹೃದಯದಲ್ಲಿಯೂ ಬೆಳಗಿಸಿದ ಸುಳ್ಯದ ಅಮರಶಿಲ್ಪಿ ಕುರುಂಜಿಯವರಿಂದ ಸುಳ್ಯದಲ್ಲಾದ ಪ್ರಗತಿ ನಿಜಕ್ಕೂ ಒಂದು ಕ್ರಾಂತಿಯೇ ಸರಿ. ಸಮಾಜಕಾರ್ಯದ ಸಂಕಲ್ಪದೊಂದಿಗೆ ಕುರುಂಜಿ ವೆಂಕಟರಮಣ ಗೌಡ ಅವರು ಸಮಾಜಕ್ಕೆ ನೀಡಿದ ಕೊಡುಗೆ ಅನನ್ಯ. ಬದುಕಿನಲ್ಲಿ ಸವಾಲು ಸ್ವೀಕರಿಸಿ ಸಾಧಿಸಬಹುದು ಎನ್ನುವುದಕ್ಕೆ ಅವರು ಉತ್ತಮ ಉದಾಹರಣೆ.

ಕುರುಂಜಿ ವೆಂಕಟರಮಣ ಗೌಡ ಅವರಂತಹ ಆದರ್ಶ ವ್ಯಕ್ತಿಗಳು ಇನ್ನಷ್ಟು ಮಂದಿ ಸಮಾಜಕ್ಕೆ ಸಿಗುವಂತಾಗಲಿ. ಸಾವಿರಾರು ವಿದ್ಯಾರ್ಥಿಗಳು ಕೆವಿಜಿ ವಿದ್ಯಾಸಂಸ್ಥೆಯಿಂದಾಗಿ ಬೆಳೆದಿದ್ದಾರೆ. ನವದೆಹಲಿ ಹಾಗೂ ಬೆಂಗಳೂರು ಸೇರಿದಂತೆ ಹಲವು ವಿದ್ಯಾಸಂಸ್ಥೆಗಳನ್ನು ಸ್ಥಾಪಿಸಿದ ಹೆಗ್ಗಳಿಕೆಗೆ ಇವರದು. ಅಲ್ಲದೆ ಅನೇಕ ಕಡೆಗಳಲ್ಲಿ ಪ್ರತಿಭಾವಂತರನ್ನು ಗುರುತಿಸಿ ಉದ್ಯೋಗ ಒದಗಿಸಿದ್ದಾರೆ.

See also  ಸುಳ್ಯದ ಜಟ್ಟಿಪಳ್ಳ ತಿರುವಿನ ಬಳಿ ಬೈಕ್ ಮತ್ತು ಸ್ಕೂಟಿ ನಡುವೆ ಅಪಘಾತ..! ವಾಹನಗಳು ಜಖಂ..!

ಇಂತಹ ಮಹಾನ್ ಚೇತನ ಇಂದು ನಮ್ಮೊಂದಿಗಿಲ್ಲ. ಏಕಾಂಗಿ ವೀರನಾಗಿ ತನ್ನ ದೂರದರ್ಶಿತ್ವದಿಂದ ಇಡೀ ಸುಳ್ಯವನ್ನು ಊಹಿಸುವುದಕ್ಕೂ ಅಸಾಧ್ಯವೆಂಬಂತೆ ಮೇಲ್ದರ್ಜೆಗೇರಿಸಿದ ಇವರ ಸಾಧನೆ ನಮ್ಮೆಲ್ಲರಿಗೂ ದಾರಿ ದೀಪವಾಗಲಿ. ಅವರು ಹಾಕಿಕೊಟ್ಟ ದಾರಿಯಲ್ಲಿ ನಾವೆಲ್ಲರೂ ಹೆಜ್ಜೆ ಇರಿಸೋಣ.

  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget