ನ್ಯೂಸ್ ನಾಟೌಟ್: ಶಿರಸಿ ಕುಮಟಾ ಸಂಪರ್ಕ ರಸ್ತೆಯ ದೇವಿಮನೆ ಘಟ್ಟ ಪ್ರದೇಶದಲ್ಲಿ ಭಾನುವಾರ(ಜೂ.15) ಬೆಳಿಗ್ಗೆ ಭೂಕುಸಿತ ಉಂಟಾಗಿ ವಾಹನ ಸಂಚಾರ ಕಡಿತವಾಗಿದೆ. ಕಳೆದೆರಡು ದಿನಗಳ ಅವಧಿಯಲ್ಲಿ ನಡೆದ ಎರಡನೇ ಭೂಕುಸಿತ ಪ್ರಕರಣ ಇದಾಗಿದೆ.
ಶನಿವಾರ ರಾತ್ರಿಯಿಂದ ಹೆಚ್ಚಿರುವ ಮಳೆಯ ಕಾರಣದಿಂದ ಭೂಕುಸಿತ ಸಂಭವಿಸಿದೆ. ಪ್ರಸ್ತುತ ರಸ್ತೆ ನಿರ್ಮಾಣ ಕಂಪನಿಯಿಂದ ತೆರವು ಕಾರ್ಯ ಆರಂಭವಾಗಿದೆ’ ಎಂದು ತಾಲೂಕು ಆಡಳಿತ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಶಿರಸಿ ಹಾಗೂ ಕುಮಟಾ ರಸ್ತೆ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದ್ದು, ಗುಡ್ಡಗಳನ್ನು ಅವೈಜ್ಞಾನಿಕವಾಗಿ ಕತ್ತರಿಸಲಾಗಿದೆ. ಈ ಕಾರಣ ಕಳೆದ ಮಳೆಗಾಲದ ಸಂದರ್ಭದಲ್ಲಿಯೂ ಭೂಕುಸಿತ ಉಂಟಾಗಿತ್ತು. ಈ ಬಾರಿ ಮಳೆಗಾಲದ ಆರಂಭದಲ್ಲೇ ಎರಡು ಬಾರಿ ಘಟನೆ ಜರುಗಿದೆ. ಜೋರು ಮಳೆಯಾದರೆ ಇನ್ನಷ್ಟು ಕಡೆ ಅಪಾಯವಾಗುವ ಸಾಧ್ಯತೆಯಿದೆ. ಈ ರಸ್ತೆಯಲ್ಲಿ ಸಂಚರಿಸುವುದು ಎಂದರೆ ಭಯದಲ್ಲೇ ಸಾಗುವಂತಾಗಿದೆ’ ಎಂದು ಸ್ಥಳೀಯರು ಹೇಳಿದ್ದಾರೆ.