ನ್ಯೂಸ್ ನಾಟೌಟ್ : ದೇಶದ ಹಲವು ಕಡೆ ಕೃಷ್ಣಾಷ್ಟಮಿಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಬಾಲಕೃಷ್ಣ ಕಥೆಗಳನ್ನು ಹೇಳುವುದು ಮೂರ್ತಿಯನ್ನು ಮನೆಯಲ್ಲಿ ಇಟ್ಟು ಪೂಜಿಸುವುದು , ಸಾಂಸ್ಕೃತಿಕ ಚಟುವಟಿಕೆಗಳು ಹೀಗೆ ವಿವಿಧ ಕಾರ್ಯಕ್ರಮಗಳು ನಡೆಯುತ್ತಿವೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಅಜ್ಜಾವರದ ಮೇನಾಲದಲ್ಲಿ ಬಿಗಿ ಪೊಲೀಸ್ ಭದ್ರತೆ ನಡುವೆ ಕೃಷ್ಣಾಷ್ಟಮಿಯನ್ನು ಆಚರಿಸಲಾಯಿತು.

ಹೌದು, ಎರಡು ಕೋಮುಗಳ ನಡುವೆ ಕಳೆದ ಕೆಲವು ಸಮಯಗಳಿಂದ ಜಾಗದ ವಿಷಯದಲ್ಲಿ ತಕರಾರು ನಡೆದಿತ್ತು. ಈ ವಿಚಾರ ಹಿನ್ನೆಲೆಯಲ್ಲಿ ಮಾತುಕತೆ ಕೂಡ ನಡೆದಿತ್ತು, ಈ ಹಿನ್ನೆಲೆಯಲ್ಲಿ ಕೃಷ್ಣಾಷ್ಟಮಿ ಆಚರಿಸುತ್ತಿರುವ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯಬಾರದು ಅನ್ನುವ ಕಾರಣಕ್ಕೆ ಸುಳ್ಯ ಸರ್ಕಲ್ ಇನ್ಸ್ ಪೆಕ್ಟರ್ ನವೀನ್ ಚಂದ್ರ ಜೋಗಿ ನೇತೃತ್ವದಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ.

ತಾಲೂಕಿನ ವಿವಿಧ ಠಾಣೆಗಳಿಂದ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಅಜ್ಜಾವರ ಗ್ರಾಮದ ವತಿಯಿಂದ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗ ದಳ ಸುಳ್ಯ ಪ್ರಖಂಡ ಆಶ್ರಯದಲ್ಲಿ ಶ್ರೀಕೃಷ್ಣಾ ಭಜನಾ ಮಂದಿರ (ರಿ) ಮೇನಾಲದಲ್ಲಿ ಶ್ರೀ ಕೃಷ್ಣಾ ಜನ್ಮಾಷ್ಟಮಿ ಆಚರಣೆ ನಡೆಯುತ್ತಿದೆ.