ನ್ಯೂಸ್ ನಾಟೌಟ್: ಇತ್ತೀಚೆಗಷ್ಟೇ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ವಿಡಿಯೋದಲ್ಲಿ ಕೊರಗಜ್ಜ ದೈವದ ಜೊತೆ ಕುಣಿದದ್ದು ದೈವಾರಾಧಕರ ಭಾರೀ ಕೆಂಗಣ್ಣಿಗೆ ಗುರಿಯಾಗಿತ್ತು. ಕೊರಗಜ್ಜನ ಅವಹೇಳನ ನಡೆದಿದೆ ಎಂದು ಹಲವಾರು ಮಂದಿ ಟೀಕಿಸಿದ್ದರು. ಮಾತ್ರವಲ್ಲ ಆ ದೈವ ಕಟ್ಟಿದ ನಲಿಕೆ ಸಮುದಾಯದ ಜಯರಾಮ ಬೊಳಿಯಮಜಲ ವಿರುದ್ಧ ಆಕ್ರೋಶ ತಿರುಗಿತ್ತು. ನಿರಂತರವಾಗಿ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ನಿಂದಿಸಲಾಗಿತ್ತು. ಈ ನೋವಿನ ನಡುವೆ ಇದೀಗ ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಜಯರಾಮ ಬೊಳಿಯಮಜಲು
ಅವರು ಪತ್ರಿಕಾಗೋಷ್ಟಿ ಕರೆದು ಸ್ಪಷ್ಟನೆ ನೀಡಿದ್ದಾರೆ. ನಿಜವಾಗಿಯೂ ಅಲ್ಲಿ ನಡೆದಿದ್ದೇನು..? ಅನ್ನುವುದರ ಬಗೆಗಿನ ಡಿಟೇಲ್ಸ್ ಕೊಟ್ಟಿದ್ದಾರೆ.
ಜಯರಾಮ ಬೊಳಿಯಮಜಲು ಹೇಳಿದ್ದಿಷ್ಟು..
‘ಕಳೆದ ಕೆಲವು ತಿಂಗಳ ಹಿಂದೆ ಮಡಿಕೇರಿಯಲ್ಲಿ ನಡೆದ ಒಂದು ಕೊರಗಜ್ಜ ದೈವದ ನೇಮೋತ್ಸವ ಹಾಗೂ ಆ ನಂತರ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆದ ವಿಷಯದ ಬಗ್ಗೆ. ನನ್ನ ಹೆಸರು ಜಯರಾಮ ಬೊಳಿಯಮಜಲು ಆಗಿದ್ದು ನಾನು ನಲಿಕೆ ಸಮುದಾಯದಿಂದ ಬಂದಿರುತ್ತೇನೆ. ನಾನು ತುಂಬಾ ವರ್ಷಗಳಿಂದ ಭೂತ ಕಟ್ಟುವ ಕಾಯಕ ಮಾಡುತ್ತಿದ್ದು ಇದು ಹಿಂದಿನ ಸಂಪ್ರದಾಯದಿಂದ ನಡೆದು ಬಂದುದಾಗಿದೆ. ತಿಂಗಳುಗಳ ಹಿಂದೆ ಮಡಿಕೇರಿಯಲ್ಲಿ ನಾನು ಒಂದು ಕೊರಗಜ್ಜ ಸಾನಿಧ್ಯದಲ್ಲಿ ಕೊರಗಜ್ಜ ನೇಮ ಕಟ್ಟಿದ್ದು ಎಲ್ಲಾ ಕ್ರಮ ಕಟ್ಟಳೆಗಳನ್ನು ಪಾಲಿಸಿಯೇ ನೇಮ ನಡೆದಿತ್ತು. ಆದರೆ ದೈವದ ವಿರಾಮದ ನಲಿಕೆಯಲ್ಲಿ ಅಲ್ಲಿನ ಕೆಲವು ದೈವ ಭಕ್ತ ಮಕ್ಕಳು ನನ್ನೊಂದಿಗೆ ಹೆಜ್ಜೆ ಹಾಕಿದ್ದರು. ಕಟ್ಟು ಕಟ್ಟಳೆ ಪ್ರಕಾರ ಈ ಬೆಳವಣಿಗೆ ತಪ್ಪಾಗಿದ್ದರೂ, ಅವರ ನಡೆ ನನಗೆ ಸರಿ ಬರದಿದ್ದರೂ, ಅಲ್ಲಿನ ಮುಖ್ಯಸ್ಥರು, ಮಧ್ಯಸ್ಥರು ಈ ಬಗ್ಗೆ ಯಾವುದೇ ತಡೆ ಮಾಡದ ಕಾರಣ ನಾನೂ ಮಕ್ಕಳ ಎಳೆ ಮನಸ್ಸಿಗೆ ನೋವು ಮಾಡುವುದು ಸರಿಯಲ್ಲ ಎಂದು ಅವರು ನನ್ನೊಂದಿಗೆ ಹೆಜ್ಜೆ ಹಾಕುವಾಗ ಸುಮ್ಮನಾಗಿದ್ದೆ. ಆ ದಿನದ ಪರಿಸ್ಥಿತಿಯಲ್ಲಿ ಕೊರಗಜ್ಜನನ್ನು ಆವಾಹನೆ ಮಾಡಿಕೊಂಡಿದ್ದ ನನಗೆ ಮೊಮ್ಮಕ್ಕಳ ಪ್ರಾಯದ ಮಕ್ಕಳು ನನ್ನೊಂದಿಗೆ ಹೆಜ್ಜೆ ಹಾಕುವಾಗ ಇದು ತಪ್ಪು ನಡೆ ಅನ್ನಲು ದೈವಿಚ್ಚೆಯೋ ಎಂಬಂತೆ ಹೇಳಳಾಗಲಿಲ್ಲ. ಆದರೆ ಈ ಒಂದು ಅಚಾತುರ್ಯ ನಡೆದ ನಂತರ ಸಾಮಾಜಿಕ ಜಾಲ ತಾಣಗಳಲ್ಲಿ ನಿರಂತರ ನನ್ನ ತೇಜೋವಧೆ ಮಾಡಲಾಗಿದೆ. ನನ್ನ ಖಾಸಗೀ ಬದುಕು, ವೃತ್ತಿ ಬದುಕನ್ನು ಟಾರ್ಗೆಟ್ ಮಾಡಿ ಜಾಲ ತಾಣಗಳಲ್ಲಿ ವೈರಲ್ ಮಾಡಲಾಗಿದೆ. ನನ್ನ ಸಮುದಾಯದ ಜನರು, ದೈವ ಸೇವೆ ಮಾಡುವ ಇತರ ಸಮುದಾಯದ ಜನರು, ದೈವಭಕ್ತರು ನನ್ನ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಇದರಿಂದ ನನಗೆ ವೃತ್ತಿ ಜೀವನವೇ ಬೇಡ ಎಂದೆನಿಸಿದೆ. ಒಂದು ಕಡೆ ಕಟ್ಟು ಕಟ್ಟಳೆ, ಇನ್ನೊಂದು ಕಡೆ ದೈವ ಭಕ್ತ ಸಮಾಜ ಮತ್ತೊಂದು ಕಡೆ ಮುಗ್ಧ ಮಕ್ಕಳು. ಯಾರನ್ನೂ ಸರಿದೂಗಿಸಲು ಆಗದೆ ಜರ್ಜರಿತನಾಗಿದ್ದೇನೆ. ಈ ಬಗ್ಗೆ ನನ್ನ ಆತ್ಮೀಯರಲ್ಲಿ, ಹಿತೈಷಿಗಳಲ್ಲಿ ನಾನು ಚರ್ಚಿಸಿದ್ದು ಮಾಧ್ಯಮಗಳ ಮುಖಾಂತರ ಸಮಾಜದ, ಸಮುದಾಯದ ಕ್ಷಮೆ ಕೇಳಿ ಮನಸ್ಸಿನ ಭಾರ ತಗ್ಗಿಸಿಕೊಳ್ಳಲು ಸಲಹೆ ಬಂದಿದೆ. ನನ್ನ ಇಷ್ಟು ವರ್ಷಗಳ ವೃತ್ತಿ ಜೀವನದಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದಿದ್ದು ಮೊನ್ನೆಯ ಘಟನೆಯಿಂದ ದೈವಗಳ ಕಟ್ಟುಕಟ್ಟಳೆಗೆ, ದೈವ ಸ್ಥಾನಗಳ ಗಾಂಭೀರ್ಯತೆಗೆ, ದೈವಭೀಮಾನಿಗಳ ಗೌರವಕ್ಕೆ ಧಕ್ಕೆ ಬಂದಿದ್ದರೆ ಅದಕ್ಕೆ ನಾನು ಬೇಷರತ್ತಾಗಿ ಸಮಾಜದ, ಸಮುದಾಯದ ಕ್ಷಮೆ ಕೇಳುತ್ತಿದ್ದೇನೆ. ಇನ್ನು ಮುಂದೆ ಸಂಪ್ರದಾಯಗಳಿಗೆ ಧಕ್ಕೆ ಬರದಂತೆ, ದೈವಗಳ ಘನತೆ ಗೌರವಗಳನ್ನು ಊರ್ಜಿತದಲ್ಲಿಡಲು ಜೀವನ ಪೂರ್ತಿ ಶ್ರಮಿಸುತ್ತೇನೆ. ಮತ್ತೊಮ್ಮೆ ಮೊನ್ನೆಯ ಘಟನೆಗೆ ಸಮಾಜದ, ಸಮುದಾಯಗಳ ಕ್ಷಮೆ ಕೇಳುತ್ತಿದ್ದೇನೆ’ ಎಂದು ತಿಳಿಸಿದರು.