ನ್ಯೂಸ್ ನಾಟೌಟ್: ಕೊಡಗಿನಿಂದ ಪ್ರತಿ ದಿನ ಒಂದೊಂದು ಆತಂಕಕಾರಿ ಸುದ್ದಿ ಬರುತ್ತಿದೆ. ಇದೀಗ ರಾಮಕೊಲ್ಲಿಯ ರಾಮಕೊಲ್ಲಿಯ ಮೇಲ್ಭಾಗದಲ್ಲಿರುವ ಬೆಟ್ಟದ ಬರೋಬ್ಬರಿ 25 ಎಕರೆಯಷ್ಟು ಪ್ರದೇಶ ಬಿರುಕು ಬಿಟ್ಟು ಸುಮಾರು ನಾಲ್ಕು ಅಡಿ ಆಳಕ್ಕೂ ಹೆಚ್ಚು ಕುಸಿದು ನಿಂತಿದೆ. ಈ ಬಿರುಕು ರಾಮಕೊಲ್ಲಿ, ಕಡ್ಯದ ಮನೆ ಸೇರಿದಂತೆ ಸುತ್ತಮುತ್ತಲ ವ್ಯಾಪ್ತಿಯ 100 ಕ್ಕೂ ಹೆಚ್ಚು ಕುಟುಂಬಗಳು ಅಪಾಯದಲ್ಲಿವೆ.
ಬಿರುಕು ಬಿಟ್ಟ ಜಾಗದಲ್ಲಿ ಭಾರಿ ಜಲಸ್ಫೋಟಗಳಾಗುತ್ತಿವೆ. ಸ್ಫೋಟದ ತೀವ್ರತೆಗೆ ನೆಲವೆಲ್ಲ ಕಂಪಿಸುತ್ತಿದೆ. ಭಾರಿ ಪ್ರಮಾಣದಲ್ಲಿ ಕೆಸರು ಮಿಶ್ರಿತ ನೀರು ರಭಸವಾಗಿ ಹರಿಯುತ್ತಿದೆ. ಬುಧವಾರ ಸಂಜೆ ಆರೂವರೆ ಗಂಟೆ ವೇಳೆಗೆ ಭಾರಿ ಶಬ್ಧದೊಂದಿಗೆ ಜಲಸ್ಫೋಟವಾಗಿತ್ತು. ಅದರ ರಭಸಕ್ಕೆ ಕಡ್ಯದ ಮನೆ, ರಾಮಕೊಲ್ಲಿ ಭಾಗಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದ್ದು ಭಯದಿಂದ ಹೊರಗೋಡಿದೆವು ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಸದ್ಯ ಅಲ್ಲಿನ ಜನ ಜೀವದ ಹಂಗನ್ನು ತೊರೆದು ಬದುಕುವಂತಾಗಿದೆ. ಮುಂದೆ ಮಳೆ ಹೆಚ್ಚಾಗಿ ಸುರಿದರೆ ಇಲ್ಲೊಂದು ಭೀಕರ ದುರಂತ ಸಂಭವಿಸುವ ಸಾಧ್ಯತೆಯೇ ಹೆಚ್ಚು. ಹೀಗಾಗಿ ಸರಕಾರ ತಮ್ಮನ್ನು ಇಲ್ಲಿಂದ ಸ್ಥಳಾಂತರ ಮಾಡಬೇಕು ಎಂದು ಜನರು ಒತ್ತಾಯಿಸುತ್ತಿದ್ದಾರೆ.