ವೈರಲ್ ನ್ಯೂಸ್

ಕೇರಳದ ಈ ಪುರಾತನ ದೇವಸ್ಥಾನದಲ್ಲಿ ಮನುಷ್ಯರಂತೆಯೇ ಮಂಗಗಳಿಗೂ ನಡೆಯುತ್ತೆ ಭೋಜನ ಕೂಟ! ಏನಿದರ ವಿಶೇಷ? ಏನಿದು ಮಂಗಗಳಿಗೇ ಪ್ರತ್ಯೇಕ ಭೋಜನಶಾಲೆ?

178

ನ್ಯೂಸ್‌ ನಾಟೌಟ್‌: ಕೇರಳದ ಪುರಾತನ ಐದು ಶಾಸ್ತಾ ದೇವಾಲಯಗಳ ಪೈಕಿ ಒಂದಾದ ಶಾಸ್ತಾಂಕೋಟ್ಟ ಶ್ರೀ ಧರ್ಮಶಾಸ್ತಾ ದೇವಸ್ಥಾನದಲ್ಲಿ ಓಣಂ ಹಬ್ಬದ ಸಂದರ್ಭದಲ್ಲಿ ವಾನರ ಭೋಜನ ಸೇವೆ ನಡೆಯುವುದು ವಿಶೇಷವಾಗಿದೆ. ಈ ಬಾರಿಯೂ ಈ ಭೋಜನ ಕೂಟ ನಡೆದಿದ್ದು ಎಲ್ಲೆಡೆ ಸುದ್ದಿಯಾಗಿದೆ.

ಕೇರಳದಲ್ಲಿ ಓಣಂ ಹಬ್ಬ ನಾಡಹಬ್ಬವಾಗಿ ಆಚರಿಸಲ್ಪಡುತ್ತದೆ. ನಿನ್ನೆ (ಆ. 29) ತಿರುಓಣಂ ಹಬ್ಬ ಆಚರಿಸಲಾಗಿದ್ದು, ಶಾಸ್ತಾಂಕೋಟ್ಟ ದೇವಸ್ಥಾನದಲ್ಲಿ ಮಂಗಗಳ ಭೋಜನ ಕೂಟ ನಡೆಯಿತು. ಮನುಷ್ಯರಿಗೆ ಊಟ ಬಡಿಸುವಂತೆಯೇ ಬಾಳೆ ಎಲೆ ಹರಡಿ ಊಟ ಬಡಿಸುವುದು ಸಂಪ್ರದಾಯ ನಡೆದುಕೊಂಡು ಬಂದಿದೆ.

ಈ ಭೋಜನದಲ್ಲಿ ಉಪ್ಪಿನಕಾಯಿಯಿಂದ ಹಿಡಿದು ಹಪ್ಪಳ, ಪಾಯಸ, ಹಣ್ಣು ಹಂಪಲು ತನಕ ಎಲ್ಲ ರೀತಿಯ ಭಕ್ಷ್ಯಗಳನ್ನೂ ಮಾಡಿ ಮಂಗಗಳಿಗೆ ಬಡಿಸಲಾಗುತ್ತದೆ.
ಶ್ರೀ ಶಾಸ್ತಾಂಕೋಟ್ಟ ಧರ್ಮಶಾಸ್ತಾ ದೇವಸ್ಥಾನದಲ್ಲಿ ವಾನರ ಭೋಜನಶಾಲೆ ಎಂದೆ ಪ್ರತ್ಯೇಕ ಅಡುಗೆ ಶಾಲೆ ಇದ್ದು, ಅಲ್ಲೇ ಮಂಗಗಳಿಗೆ ಊಟ ಬಡಿಸಲಾಗುತ್ತದೆ. ದೇವಾಲಯದ ಸಿಬ್ಬಂದಿ ಬಾಳೆ ಎಲೆ ಹರಡಿ ಊಟ ಬಡಿಸುವುದು ವಾಡಿಕೆ. ತಿರು ಓಣಂ ದಿನದ ಈ ಆಚರಣೆ ದಶಕಗಳಿಂದ ನಡೆದು ಬಂದಿದೆ ಎನ್ನಲಾಗಿದೆ.

ಇದೇ ರೀತಿ ಪತ್ತನಂತಿಟ್ಟ ಜಿಲ್ಲೆಯ ಕೊನ್ನಿಯಲ್ಲಿರುವ ಶ್ರೀ ಕಲ್ಲೇಲಿ ಊರಲಿ ಅಪ್ಪೂಪ್ಪನ್‌ ಕಾವು ಎಂಬಲ್ಲಿ, ಕಾಸರಗೋಡು ಜಿಲ್ಲೆ ಎಡೆಯಿಲಕ್ಕಾಡು ಎಂಬಲ್ಲಿ ಕೂಡ ವಾನರ ಭೋಜನ ಸೇವೆ ಇದೆ.

ಇದಕ್ಕೊಂದು ಪುರಾಣ ಕಥೆಯೂ ಇದೆ. ರಾವಣ ಅಪಹರಿಸಿಕೊಂಡು ಹೋದ ಸೀತಾದೇವಿಯನ್ನು ಹುಡುಕುತ್ತ ಶ್ರೀರಾಮನು ತನ್ನ ವಾನರ ಸೇನೆಯೊಂದಿಗೆ ಈ ದೇವಸ್ಥಾನದ ಬಳಿ ತಲುಪಿದಾಗ, ಎಲ್ಲರಿಗೂ ಹಸಿವಾಗಿತ್ತು. ದೇವಸ್ಥಾನದಲ್ಲೇ ಅಡುಗೆ ಮಾಡಿ ಅವರಿಗೆ ಉಣಬಡಿಸಲಾಗಿತ್ತು ಎಂಬುದು ಐತಿಹ್ಯ. ಅದರ ನೆನಪಿಗಾಗಿ ಈಗ ವಾನರ ಭೋಜನ ಏರ್ಪಡಿಸಲಾಗುತ್ತದೆ ಎಂದು ದೇವಸ್ಥಾನದ ಮೂಲಗಳು ತಿಳಿಸಿವೆ.

See also  269 ಚಿತ್ರಗಳಲ್ಲಿ ನಟಿಸಿದ್ದ ಕನ್ನಡದ ಹಿರಿಯ ನಟ ನಿಧನ..! ಚಿಕಿತ್ಸೆಗೆ ಸ್ಪಂದಿಸದೆ ನಟ ಸರಿಗಮ ವಿಜಿ ಸಾವು..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget