ನ್ಯೂಸ್ ನಾಟೌಟ್: ತಮಿಳು ನಟ, ಡ್ಯಾನ್ಸರ್ ಪ್ರಭುದೇವ ಕೊನೆಗೂ ತಾಯಿ ಆಸೆಯಂತೆ ಹುಟ್ಟೂರಿನಲ್ಲಿ ದೇವಸ್ಥಾನ ಜೀರ್ಣೋದ್ಧಾರ ಕಾರ್ಯ ಮಾಡಿಸಿದ್ದಾರೆ. 25 ಲಕ್ಷ ರೂ. ವೆಚ್ಚದಲ್ಲಿ ಮಲೆ ಮಹದೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಮಾಡಿಸಿದ್ದಾರೆ.
ಭಾರತದ ಮೈಕೆಲ್ ಜಾಕ್ಸನ್ ಎಂದೇ ಪ್ರಸಿದ್ಧಿ ಪಡೆದಿರುವ ಡ್ಯಾನ್ಸ್ ಮಾಸ್ಟರ್ ಪ್ರಭುದೇವ ಮೂಲತಃ ಮೈಸೂರು ಜಿಲ್ಲೆಯ ದೂರ ಗ್ರಾಮದವರು. ನಂಜನಗೂಡು ತಾಲೂಕಿನ ಕೆಂಬಾಳು ಗ್ರಾಮದಲ್ಲಿ ಪ್ರಭುದೇವ ಅವರ ತಾಯಿ ಮಹದೇವಮ್ಮ ಅವರು ಜಮೀನು ಖರೀದಿ ಮಾಡಿದ್ದರು. ಈ ಜಮೀನಿನ ಪಕ್ಕದಲ್ಲೇ ಇದ್ದ ಮಲೆ ಮಹದೇಶ್ವರ ದೇವಸ್ಥಾನ ಶಿಥಿಲಾವಸ್ಥೆಯಲ್ಲಿತ್ತು.
ಚೋಳರ ಕಾಲದ ದೇವಸ್ಥಾನ ಅತ್ಯಂತ ಪ್ರಖ್ಯಾತಿ ಪಡೆದಿತ್ತು. ಹಾಗಾಗಿ ಗ್ರಾಮಸ್ಥರು ಶಿಥಿಲಾವಸ್ಥೆಯಲ್ಲಿದ್ದ ಅದೇ ದೇವಾಲದಲ್ಲಿ ಪೂಜಾ ಕೈಂಕರ್ಯ ನೆರವೇರಿಸುತ್ತಿದ್ದರು. ಸದ್ಯ ತನ್ನ ತಾಯಿ ಆಸೆಯಂತೆ, ಗ್ರಾಮಸ್ಥರ ಬಯಕೆಯಂತೆ ನಟ ದೇವಸ್ಥಾನದ ಜೀರ್ಣೋದ್ಧಾರ ಮಾಡಿಸಿದ್ದಾರೆ.
ಕಳೆದ ಎರಡು ದಿನಗಳಿಂದ ದೇವಸ್ಥಾನದಲ್ಲೇ ಉಳಿದುಕೊಂಡಿರುವ ನಟ, ಪತ್ನಿ ಹಿಮಾನಿ ಪ್ರಭುದೇವ ಜೊತೆಗೂಡಿ ಪೂಜಾ ಕಾರ್ಯಗಳನ್ನು ನೆರವೇರಿಸುತ್ತಿದ್ದಾರೆ. ಕಳಶ ಪೂಜೆ, ಹೋಮ, ಹವನ, ನವಗ್ರಹ ಪೂಜೆಗಳನ್ನು ನೆರವೇರಿಸುತ್ತಿದ್ದಾರೆ.
ಅಲ್ಲದೇ ಜೀರ್ಣೋದ್ಧಾರ ಕಾರ್ಯನಿಮಿತ್ತ ಇಡೀ ಗ್ರಾಮಸ್ಥರಿಗೆ ಊಟದ ವ್ಯವಸ್ಥೆಯನ್ನೂ ಸಹ ನಟ ಮಾಡಿದ್ದಾರೆ.