ನ್ಯೂಸ್ ನಾಟೌಟ್ :ಸಂಘರ್ಷ ಪೀಡಿತ ಮಣಿಪುರದ 5 ಜಿಲ್ಲೆಗಳಲ್ಲಿ ಪೊಲೀಸರ ಆದೇಶದ ಮೇರೆಗೆ 42 ಬಂದೂಕುಗಳನ್ನು ಸಾರ್ವಜನಿಕರು ಒಪ್ಪಿಸಿದ್ದಾರೆ ಎಂದು ಪೊಲೀಸರು ಮಾ.2ರಂದು ತಿಳಿಸಿದ್ದಾರೆ.
ಇಂಫಾಲ ಪಶ್ಚಿಮ ಮತ್ತು ಪೂರ್ವ, ಚುರಚಂದ್ಪುರ , ಬಿಷ್ಣುಪುರ ಮತ್ತು ತಮೆಂಗ್ ಲಾಂಗ್ ಜಿಲ್ಲೆಗಳಲ್ಲಿ ಶನಿವಾರ ಬಂದೂಕುಗಳನ್ನು ಒಪ್ಪಿಸಲಾಗಿದೆ.
ಬಿಷ್ಣುಪುರ ಜಿಲ್ಲೆಯಲ್ಲಿ 6 ಗ್ರೆನೇಡ್ ಗಳು ಮತ್ತು 75ಕ್ಕೂ ಹೆಚ್ಚು ಮದ್ದುಗುಂಡುಗಳು, 5 ಬಂದೂಕುಗಳನ್ನು ಒಪ್ಪಿಸಲಾಗಿದೆ. ಯೈಂಗಂಗ್ ಪೋಕ್ಪಿ, ಪೊರೊಂಪತ್, ಚುರಚಂದ್ಪುರ ಮತ್ತು ಲಾಮ್ಸಾಂಗ್ ಪೊಲೀಸ್ ಠಾಣೆಗಳಲ್ಲಿ ಕನಿಷ್ಠ 10 ಬಂದೂಕುಗಳನ್ನು ಒಪ್ಪಿಸಲಾಗಿದೆ ಎಂದು ಹೇಳಿದ್ದಾರೆ.
ಯೈಂಗಂಗ್ಪೋಕ್ಪಿ ಜಿಲ್ಲೆಯ ಥಿಂಗ್ ಸಾಟ್ ಬೆಟ್ಟ ಶ್ರೇಣಿಯ ಮಾರ್ಕ್ ಬೆಟ್ಟದಲ್ಲಿದ್ದ 2 ಅಕ್ರಮ ಬಂಕರ್ ಹಾಗೂ ಕಾಂಗ್ ಪೋಕ್ಪಿ ಮತ್ತು ಇಂಫಾಲ ಪೂರ್ವ ಜಿಲ್ಲೆಗಳ ಪಕ್ಕದ ಪ್ರದೇಶದ ವಾಕನ್ ಬೆಟ್ಟ ಶ್ರೇಣಿಯಲ್ಲಿದ್ದ 3 ಅಕ್ರಮ ಬಂಕರ್ ಗಳನ್ನು ಭದ್ರತಾ ಪಡೆಗಳು ಶನಿವಾರ ನಾಶಪಡಿಸಿದ್ದಾರೆ.
ಲೂಟಿ ಮಾಡಿದ ಮತ್ತು ಅಕ್ರಮವಾಗಿ ಇಟ್ಟುಕೊಂಡಿರುವ ಶಸ್ತ್ರಾಸ್ತ್ರಗಳನ್ನು ಒಪ್ಪಿಸುವಂತೆ ಮಣಿಪುರ ರಾಜ್ಯಪಾಲ ಅಜಯ್ ಕುಮಾರ್ ಭಲ್ಲಾ ಫೆ. 20 ರಂದು ಸೂಚಿಸಿದ್ದರು. ಫೆ.27ರೊಳಗೆ ಶಸ್ತ್ರಾಸ್ತ್ರಗಳನ್ನು ಸ್ವಯಂಪ್ರೇರಿತವಾಗಿ ಒಪ್ಪಿಸುವಂತೆ ಸ್ವಯಂಸೇವಕರು ಮತ್ತು ಬಂಡುಕೋರರಿಗೆ ತಿಳಿಸಿದ್ದರು.
ಶಸ್ತ್ರಾಸ್ತ್ರಗಳನ್ನು ಒಪ್ಪಿಸಲು ನೀಡಿದ ಗಡುವು ವಿಸ್ತರಿಸುವಂತೆ ಮೈತೇಯಿ ಮತ್ತು ಕುಕಿ ಸಮುದಾಯಗಳನ್ನು ಪ್ರತಿನಿಧಿಸುವ ಹಲವು ಸಂಘಟನೆಗಳು ರಾಜ್ಯಪಾಲರಿಗೆ ಮನವಿ ಮಾಡಿದ್ದವು. ವಿವಿಧ ಸಂಘಟನೆಗಳ ಮನವಿಯನ್ನು ಪರಿಗಣಿಸಿ ರಾಜ್ಯಪಾಲ ಅಜಯ್ ಕುಮಾರ್ ಭಲ್ಲಾ ಮಾರ್ಚ್ 6ರವರೆಗೆ ವಿಸ್ತರಿಸಿ ಅಂತಿಮ ಅವಕಾಶ ನೀಡಿದ್ದಾರೆ.