ನ್ಯೂಸ್ ನಾಟೌಟ್ : ಜಗಳದಲ್ಲಿ ವ್ಯಕ್ತಿಯೋರ್ವ ತನ್ನ ಸ್ನೇಹಿತನ ಕಿವಿಯ ಒಂದು ಭಾಗವನ್ನು ಕಚ್ಚಿ ನುಂಗಿದ ಘಟನೆ ಮಹಾರಾಷ್ಟ್ರದ ಥಾಣೆಯ ಪಟ್ಲಿಪಾಡ ಪ್ರದೇಶದಲ್ಲಿ ನಡೆದಿದೆ. ದೂರು ಬಂದ ಬೆನ್ನಲ್ಲೇ ಪೊಲೀಸರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಈ ಘಟನೆ ಪಾರ್ಟಿಯ ಸಮಯದಲ್ಲಿ ನಡೆದಿದೆ. ಪಾರ್ಟಿಗಾಗಿ 37 ವರ್ಷದ ಶ್ರವಣ್ ಲೇಖಾ ಮತ್ತು 32 ವರ್ಷದ ವಿಕಾಸ್ ಮೆನನ್ ಮತ್ತು ಅವರ ಇತರ ಸ್ನೇಹಿತರು ಸೇರಿದ್ದರು. ಮೊದಲಿಗೆ ಎಲ್ಲವೂ ಚೆನ್ನಾಗಿ ನಡೆಯುತ್ತಿತ್ತು. ಆದರೆ ಇದ್ದಕ್ಕಿದ್ದಂತೆ ಇಬ್ಬರ ನಡುವೆ ಯಾವುದೋ ವಿಷಯದ ಬಗ್ಗೆ ಚರ್ಚೆ ಶುರುವಾಗಿದೆ. ವಾದ ವಿಕೋಪಕ್ಕೆ ತಿರುಗಿದ್ದು ವಿಕಾಸ್ ಮೆನನ್ ವಿಚಿತ್ರವಾಗಿ ವರ್ತಿಸುತ್ತಾ… ಕೋಪದಲ್ಲಿ ಶ್ರವಣ್ ಲಿಖಾನ ಎಂಬಾತನ ಕಿವಿಯ ಒಂದು ಭಾಗವನ್ನು ಬಾಯಿಯಿಂದ ಕಚ್ಚಿದ್ದಾನೆ. ಜಗಳ ಇಲ್ಲಿಗೆ ಮುಗಿಯಲಿಲ್ಲ. ಕೋಪದಿಂದ ನಿಯಂತ್ರಣ ತಪ್ಪಿದ ವಿಕಾಸ್ ಮೆನನ್, ಕತ್ತರಿಸಿದ ಕಿವಿಯ ತುಂಡನ್ನು ನುಂಗಿದ್ದಾನೆ. ಈ ಅನಿರೀಕ್ಷಿತ ದಾಳಿಯಿಂದ ಪಾರ್ಟಿಯಲ್ಲಿದ್ದ ಇತರ ಜನರು ಕೂಡ ಆಘಾತಕ್ಕೊಳಗಾದರು. ಗಾಯಗೊಂಡ ಶ್ರವಣ್ ಲೇಖಾ ಅವರನ್ನು ತಕ್ಷಣ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಲಾಯಿತು.
ಈ ಘಟನೆಯ ಬಗ್ಗೆ ಮಾಹಿತಿ ಪಡೆದ ನಂತರ, ಕಾರ್ಯಪ್ರವೃತ್ತರಾದ ಕಾಸರ್ವಾಡವಲಿ ಠಾಣೆ ಪೊಲೀಸರು ವಿಕಾಸ್ ಮೆನನ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಸ್ವಯಂಪ್ರೇರಣೆಯಿಂದ ಗಂಭೀರ ಗಾಯಗೊಳಿಸಿದ್ದಕ್ಕಾಗಿ ಭಾರತೀಯ ದಂಡ ಸಂಹಿತೆಯ (ಬಿಎನ್ಎಸ್) ಸೆಕ್ಷನ್ 117(2)ರ ಅಡಿಯಲ್ಲಿ ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಸ್ತುತ, ಪೊಲೀಸರು ಇಡೀ ವಿಷಯವನ್ನು ಆಳವಾಗಿ ತನಿಖೆ ನಡೆಸುತ್ತಿದ್ದಾರೆ ಮತ್ತು ಜಗಳದ ಹಿಂದಿನ ನಿಜವಾದ ಕಾರಣ ಏನೆಂದು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ.