ನ್ಯೂಸ್ ನಾಟೌಟ್ :ಖ್ಯಾತ ಯಕ್ಷಗಾನ ಕಲಾವಿದ,ಹಿಮ್ಮೇಳ ವಾದಕ,ಕೃಷಿಕರೂ ಆದ ನಾರಾಯಣ ನಾಯಕ್ ಅವರು ಆತ್ಮಹತ್ಯೆಗೆ ಶರಣಾಗಿದ್ದ ಸುದ್ದಿ ಬೆಚ್ಚಿ ಬೀಳಿಸುವಂತೆ ಮಾಡಿತ್ತು.ಇದೀಗ ಇವರು ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಗೃಹಪ್ರವೇಶ ಸೀರಿಯಲ್ ನಟಿ ದಿವ್ಯಶ್ರೀ ನಾಯಕ್ ಸುಳ್ಯ ಇವರ ತಂದೆಯೆಂದು ತಿಳಿದು ಬಂದಿದೆ.
ಕರಾವಳಿ ಭಾಗದ ಹಾಗೂ ಮಲೆನಾಡಿನ ರೈತರ ಜೀವನಾಡಿಯಾದ ಅಡಿಕೆ ಬೆಳೆ ಇದೀಗ ಹಳದಿ ರೋಗ ಉಲ್ಬಣಗೊಂಡು ರೈತರ ಜೀವವವನ್ನೇ ಹಿಂಡುತ್ತಿದೆ.ಒಂದು ಕಾಲದಲ್ಲಿ ಸಂತೋಷದಿಂದ ಜೀವನ ಸಾಗಿಸುತ್ತಿದ್ದ ರೈತರು ಅಡಿಕೆ ಗಿಡಗಳಿಗೆ ಬಾಧಿಸಿದ ಈ ಹಳದಿ ರೋಗ ಹಾಗೂ ಎಲೆ ಚುಕ್ಕಿ ರೋಗಕ್ಕೆ ಬಳಲಿ ಬೇಸತ್ತು ಹೋಗಿದ್ದಾರೆ.ಇದಕ್ಕಾಗಿ ಎಷ್ಟೇ ಔಷಧಿ ಕಂಡು ಹಿಡಿದರೂ , ಸಿಂಪಡಣೆ ಮಾಡಿದರೂ ರೋಗ ನಿಯಂತ್ರಣಕ್ಕೆ ಬಾರದೇ ರೈತರು ಕಂಗಾಲಾಗಿದ್ದಾರೆ. ಈ ಹಿನ್ನೆಲೆಯಲ್ಲಿ ನಾರಾಯಣ ನಾಯಕ್ ಅವರು ಆತ್ಮಹತ್ಯೆಗೆ ಶರಣಾಗಿದ್ದರು ಎಂದು ತಿಳಿದು ಬಂದಿದೆ.
ನಾರಾಯಣ ನಾಯಕ್ ಅವರು ಯಕ್ಷಗಾನದ ಹಿಮ್ಮೇಳದಲ್ಲಿ ಚೆಂಡೆ ಮದ್ದಳೆ ವಾದಕರಾಗಿದ್ದರು. ಇವರಿಗೆ ಇಬ್ಬರು ಪುತ್ರಿಯರಿದ್ದು,ಇಬ್ಬರಿಗೂ ಮದುವೆಯಾಗಿದೆ.ನಾರಾಯಣ ಅವರ ಪತ್ನಿ ಮಗಳ ಮನೆಗೆ ಹೋಗಿದ್ದ ವೇಳೆ ಮಧ್ಯಾಹ್ನವಾದರೂ ಮನೆ ಬಾಗಿಲು ತೆರೆಯದ ಕಾರಣ ಪಕ್ಕದ ಮನೆಯವರು ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಉತ್ತಮ ಕೃಷಿಕರಾಗಿದ್ದ ನಾರಾಯಣ ನಾಯಕ್ ಅವರ ಅಡಿಕೆ ತೋಟಕ್ಕೆ ಹಳದಿ ರೋಗ ಬಾಧಿಸಿ ಸರ್ವನಾಶವಾಗಿದೆ. ಮತ್ತೊಂದೆಡೆ ಇವರ ರಬ್ಬರ್ ತೋಟದ ಇಳುವರಿ ಕುಂಠಿತವಾಗಿ ಜೀವನ ನಿರ್ವಹಣೆ ಕಷ್ಟವಾಗಿತ್ತು ಎನ್ನಲಾಗುತ್ತಿದೆ. ಇದೇ ಕಾರಣದಿಂದ ನಾರಾಯಣ ಅವರು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಡೆತ್ ನೋಟ್ ಬರೆದಿಟ್ಟಿದ್ದಾರೆ.
ನಾನು ಯಶಸ್ವಿ ಕೃಷಿಕನಾಗಬೇಕು ಎಂದು ಸಾಮಾನ್ಯ ಜಮೀನಿನಲ್ಲಿಯೂ ಅಡಿಕೆ ನಾಟಿ ಮಾಡಿ ಕುಳಿತುಕೊಂಡಿರುವವರು ಸಾಕಷ್ಟಿದ್ದಾರೆ. ಆದರೆ, ಹಲವು ವರ್ಷಗಳಿಂದ ಅಡಿಕೆ ಬೆಳೆ ಬೆಳೆಯುತ್ತಿರುವ ಕೃಷಿಕರೇ ಈಗ ಅಡಿಕೆಗೆ ಬಾಧಿಸುತ್ತಿರುವ ಹಳದಿ ರೋಗದಿಂದ ಬೇಸತ್ತು ಹೋಗಿದ್ದಾರೆ. ಹೀಗೆ, ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಮರ್ಕಂಜ ಗ್ರಾಮದಲ್ಲಿ ಅಡಿಕೆ ತೋಟಕ್ಕೆ ಬಾಧಿಸಿದ ಹಳದಿ ರೋಗ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಯಕ್ಷಗಾನ ಹಿಮ್ಮೇಳ ಕಲಾವಿದನೂ ಆಗಿದ್ದ ಕೃಷಿಕ ನಾರಾಯಣ್ ನಾಯಕ್ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಕಲಾವಿದರ ಕುಟುಂಬವಾದ ನಾರಾಯಣ ನಾಯಕ್ ಅವರ ಕುಟುಂಬದಲ್ಲಿ ತಮ್ಮ ಇಬ್ಬರು ಪುತ್ರಿಯರನ್ನು ಉತ್ತಮವಾಗಿ ಬೆಳೆಸಿದ್ದರು. ಮಕ್ಕಳಿಗೂ ತಮಗೆ ಸಿದ್ಧಿಸಿದ್ದ ಚೆಂಡೆ ವಾದ್ಯವನ್ನು ಕಲಿಸಿದ್ದರು. ತಂದೆಯಂತೇ ಅವರ ಪುತ್ರಿ ದಿವ್ಯಶ್ರೀ ನಾಯಕ್ ಕೂಡ ಯಕ್ಷಗಾನದ ಮಹಿಳಾ ಚೆಂಡೆ ವಾದಕಿಯಾಗಿದ್ದರು. ಉತ್ತಮ ವಾಗ್ಮಿ ಹಾಗೂ ಸೌಂದರ್ಯವತಿಯಾಗಿರುವ ಅವರ ಪುತ್ರಿ ಕನ್ನಡ ಕಿರುತೆರೆಯನ್ನೂ ಪ್ರವೇಶ ಮಾಡಿದ್ದರು. ಕಲರ್ಸ್ ಕನ್ನಡ ವಾಹಿನಿಯ ಗೃಹ ಪ್ರವೇಶ ಧಾರಾವಾಹಿಯಲ್ಲಿ ವಿಲನ್ ರೋಲ್ನಲ್ಲಿ ನಟಿ ದಿವ್ಯಶ್ರೀ ನಾಯಕ್ ಕಾಣಿಸಿಕೊಂಡಿದ್ದರು.