ನ್ಯೂಸ್ ನಾಟೌಟ್: ಕಡಬ ತಾಲೂಕು ಮಟ್ಟದ ಲೋಕಾಯುಕ್ತ ಜನಸಂಪರ್ಕ ಸಭೆ ಮಂಗಳೂರು ಲೋಕಾಯುಕ್ತ ವಿಭಾಗದ ಎಸ್ಪಿ ಕುಮಾರ್ ಚಂದ್ರ ನೇತೃತ್ವದಲ್ಲಿ ಗುರುವಾರ(ಮಾ.20) ನಡೆದಿದ್ದು, 46 ಗ್ರಾಮಗಳಿಂದ ಕೇವಲ 7 ದೂರು ಅರ್ಜಿಗಳು ಮಾತ್ರ ಸಲ್ಲಿಕೆಯಾಗಿದೆ.
ಜನಸಂಪರ್ಕ ಸಭೆಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳಿದ್ದರೂ ಬೆರಳೆಣಿಕೆಯ ಸಾರ್ವಜನಿಕರಷ್ಟೇ ಭಾಗವಹಿಸಿದ್ದರು. ಕಂದಾಯ ಇಲಾಖೆ ಸೇರಿದಂತೆ ಬೇರೆ ಬೇರೆ ಇಲಾಖೆಗಳ ಭ್ರಷ್ಟಾಚಾರ, ಸಾರ್ವಜನಿಕರನ್ನು ಸತಾಯಿಸುವುದು ಮುಂತಾದ ವಿಚಾರಗಳ ಬಗ್ಗೆ ಆರೋಪಿಸುವ ಸಾರ್ವಜನಿಕರು ಲೋಕಾಯುಕ್ತ ಜನಸಂಪರ್ಕ ಸಭೆಯಲ್ಲಿ ಸಮರ್ಪಕ ಮಾಹಿತಿ ಕೊರತೆಯಿಂದ ದೂರು ನೀಡಲು ಹಿಂದೇಟು ಹಾಕಿರುವುದು ಮೇಲ್ನೋಟಕ್ಕೆ ಗೋಚರಿಸಿದೆ ಎನ್ನಲಾಗಿದೆ.
ಅಕ್ರಮ ಸಕ್ರಮ ಜಮೀನಿನ ಮಂಜೂರಾತಿಗಾಗಿ ಕಳೆದ 33 ವರ್ಷಗಳಿಂದ ಹಕ್ಕುಪತ್ರಕ್ಕಾಗಿ ಅಲೆದಾಡುತ್ತಿರುವ ಇಚ್ಲಂಪಾಡಿ ಗ್ರಾಮದ ಅಲೆಕ್ಕಿ ನಿವಾಸಿ ವೃದ್ಧೆ ಕಮಲಾಕ್ಷಿ, “ನನಗೆ ಹಕ್ಕುಪತ್ರ ತೆಗೆಸಿಕೊಡಿ, ಇಲ್ಲದೇ ಹೋದರೆ ಜೀವ ಕಳೆದುಕೊಳ್ಳುವುದಷ್ಟೇ ನನ್ನ ಮುಂದಿರುವ ದಾರಿ” ಎಂದು ಕಣ್ಣೀರು ಹಾಕಿದ ಘಟನೆ ನಡೆದಿದೆ.
“ಲೋಕಾಯುಕ್ತ ಸಂಸ್ಥೆಯ ಬಗ್ಗೆ ಜನರಿಗೆ ಅರಿವು ಮೂಡಿಸಲು ಗ್ರಾಮಸಭೆಗಳಲ್ಲಿ ಮಾಹಿತಿ ನೀಡಲು ಕ್ರಮ ಕೈಗೊಳ್ಳಲಾಗುವುದು” ಎಂದು ಎಸ್ ಪಿ ತಿಳಿಸಿದ್ದಾರೆ.