Latestಕ್ರೀಡೆಕ್ರೀಡೆ/ಸಿನಿಮಾದೇಶ-ವಿದೇಶವೈರಲ್ ನ್ಯೂಸ್

ಜೈಪುರ ಕ್ರೀಡಾಂಗಣದಲ್ಲಿ ‘ವೈಭವ’ದ ಶತಕ, ದಿಗ್ಗಜ ಬೌಲರ್ ಗಳ ಚೆಂಡಾಡಿದ 14 ವರ್ಷದ ಪ್ರಚಂಡ ಹುಡುಗ..!

609

ನ್ಯೂಸ್ ನಾಟೌಟ್: “ಇವ ಇನ್ನೂ ಸಣ್ಣ ಹುಡುಗ, ಘಾಟಾನುಘಟಿ ಬೌಲರ್ಸ್ ಎದುರು ಇವನೇನು ಮಾಡ್ತಾನೆ..?” ಅ‌ಂತ ನನ್ನ ಫ್ರೆಂಡ್ ಹೇಳ್ತಿದ್ದ. ನಾನು ಕೂಡ ಹಾಗೆ ಯೋಚಿಸುತ್ತಿದ್ದಂತೆ ಆತ ಹುಲಿಯಂತೆ ಅಬ್ಬರಿಸೋಕೆ ಶುರು ಮಾಡಿದ್ದ. ದಿಗ್ಗಜ ಬೌಲರ್ ಗಳೆಲ್ಲರನ್ನು ಮನಸೋ ಇಚ್ಛೆ ಚೆಂಡಾಡಿದ. ಮೈದಾನದ ಮೂಲೆಮೂಲೆಗೂ ಚೆಂಡನ್ನು ಬಡಿದಟ್ಟಿದ. ಐಪಿಎಲ್ ನ ವೇಗದ 2ನೇ ಶತಕ ಬಾರಿಸಿದ. ಈ ಸಾಹಸಿ ಬೇರಾರೂ ಅಲ್ಲ.. ರಾಜಸ್ತಾನ್ ರಾಯಲ್ಸ್ ನ ಆರಂಭಿಕ ಬ್ಯಾಟ್ಸ್‌ಮನ್ 14 ವರ್ಷದ ಹುಡುಗ ವೈಭವ್ ಸೂರ್ಯವಂಶಿ..!!

ಇಷ್ಟು ಸಣ್ಣ ಹುಡುಗನ ತಂಡಕ್ಕೆ ಸೇರಿಸಿಕೊಳ್ಳುವಾಗ ಕೋಚ್ ರಾಹುಲ್ ದ್ರಾವಿಡ್ ತಲೆಯಲ್ಲಿ ಏನಿತ್ತೋ ಗೊತ್ತಿಲ್ಲ..ಸಂಜು ಸ್ಯಾಮ್ಸನ್ ಗಾಯದಿಂದ ತಂಡದಿಂದ ಹೊರಕ್ಕೆ ಬಿದ್ದಾಗ ಫ್ರಾಂಚೈಸಿ ಯಾವ ಧೈರ್ಯದಿಂದ ಈ ಮಗುವನ್ನು ಆಡಿಸಲು ದ್ರಾವಿಡ್ ತೆಗೆದುಕೊಂಡ ನಿರ್ಧಾರಕ್ಕೆ ಸಮ್ಮತಿ ಸೂಚಿಸಿತೋ ಗೊತ್ತಿಲ್ಲ.

ಏನೇ ಆಗಿದ್ದರೂ ಕಿರಿಯರ ಕ್ರಿಕೆಟ್ ನಲ್ಲಿ ತೋರಿಸಿದ ಪ್ರಚಂಡ ಪ್ರದರ್ಶನ ಬಿಹಾರದ ಹುಡುಗನನ್ನು ಐಪಿಎಲ್ ತಂಡಕ್ಕೆ ಆಯ್ಕೆಯಾಗುವಂತೆ ಮಾಡಿತ್ತು ಅನ್ನುವುದು ಕಟು ವಾಸ್ತವ. 1.1 ಕೋಟಿ ರೂ. ಹಣವನ್ನು ತೆತ್ತು ರಾಜಸ್ತಾನ್ ರಾಯಲ್ಸ್ ಫ್ರಾಂಚೈಸಿ ಬಿಡ್ ನಲ್ಲಿ ವೈಭವ್ ಸೂರ್ಯವಂಶಿಯನ್ನು ತಂಡಕ್ಕೆ ಸೇರಿಸಿಕೊಂಡಿತ್ತು. ಪದಾರ್ಪಣೆ ಪಂದ್ಯದಲ್ಲಿ ವೈಭವ್ ಗೆ ಅವಕಾಶ ಸಿಕ್ಕಿದರೂ ಅದನ್ನು ಸಕ್ಸಸ್ ಆಗಿ ಕನ್ವರ್ಟ್ ಮಾಡೋಕೆ ಆಗಿರಲಿಲ್ಲ. ಆದರೆ ಜೈಪುರದಲ್ಲಿ ಸೋಮವಾರ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಕೇವಲ 38 ಎಸೆತಗಳಲ್ಲಿ 100 ರನ್ ಚಚ್ಚಿದರು. ಐಪಿಎಲ್ ನಲ್ಲಿ ವೇಗದ ಶತಕ ಸಿಡಿಸಿದ ಮೊದಲ ಕಿರಿಯ ಆಟಗಾರ ಎನಿಸಿಕೊಂಡರು. ಈತನ ಶತಕದ ಅಬ್ಬರಕ್ಕೆ ಫೀಲ್ಡರ್ ಗಳೆಲ್ಲ ಪ್ರೇಕ್ಷಕರಾದ್ರು..ಪ್ರೇಕ್ಷಕರೆಲ್ಲ ಫೀಲ್ಡರ್ ಗಳಾಗಿದ್ದರು, ತನ್ನ ಕಾಲು‌ನೋವನ್ನು ಕೂಡ‌ ಮರೆತು ಕೋಚ್ ರಾಹುಲ್ ದ್ರಾವಿಡ್ ವ್ಹೀಲ್ ಚೇರ್ ನಿಂದ ಎದ್ದು ನಿಂತು ಚಪ್ಪಾಳೆ ಹೊಡೆದು ಶಿಷ್ಯನ ಸಾಧನೆಯನ್ನು ಸಂಭ್ರಮಿಸಿದರು. ಇಡೀ ಕ್ರೀಡಾಂಗಣದಲ್ಲಿ ನೆರೆದಿದ್ದ ಎರಡೂ ತಂಡದ ಅಭಿಮಾನಿಗಳು ಕೂಡ ವೈಭವದ ಬ್ಯಾಟಿಂಗ್ ಅನ್ನು ಎಂಜಾಯ್ ಮಾಡಿದ್ರು. ಗುಜರಾತ್ ಆಟಗಾರರು ಕೂಡ ಭಲೇ ಮಗನೆ ಎಂದು ಬೆನ್ನು ತಟ್ಟಿದರು. ಇಷ್ಟೆಲ್ಲ ರೋಚಕತೆಗೆ ಜೈಪುರ‌ದ ಕ್ರೀಡಾಂಗಣ ಸಾಕ್ಷಿಯಾಗಿತ್ತೆಂದರೆ ವೈಭವ್ ಸೂರ್ಯವಂಶಿಯ ಆಟ ಹೇಗಿದ್ದಿರಬಹುದು ಅನ್ನುವುದನ್ನು ಯೋಚಿಸಿ..

ಈ ಒಂದು ಪ‌ಂದ್ಯದಿಂದ ಸಣ್ಣವರೂ ದೊಡ್ಡವರೂ ಎಲ್ಲರೂ ಕೂಡ ಜೀವನದಲ್ಲಿ ಪಾಠ ಕಲಿಯಬೇಕಿರುವ ಅಂಶವೊಂದನ್ನು ನಾನು ಗಮನಿಸಿದೆ. ಯಾವುದೇ ಕೆಲಸದಲ್ಲಾಗಿರಲಿ ಎದುರಾಳಿ ಎಷ್ಟೇ ಬಲಿಷ್ಠ ವಾಗಿರಲಿ ನಮ್ಮ ಮನಸ್ಸಿನಲ್ಲಿ ನಾನು ಸಾಧಿಸಿಯೇ ತೀರುತ್ತೇನೆ ಅನ್ನುವ ಸಂಕಲ್ಪ ಇದ್ದರೆ ಯಾವ ಶಕ್ತಿಯೂ ನಮ್ಮನ್ನು ತಡೆಯಲಾರದು. ಪಂದ್ಯ ಮುಗಿದ ಬಳಿಕ ಮಾಧ್ಯಮಕ್ಕೆ ವೈಭವ್ ಹೇಳಿದ್ದು ಕೂಡ ಇದನ್ನೇ ..”ವಿಶ್ವದ ದಿಗ್ಗಜ ಬೌಲರ್ ಗಳು ಯಾರು ನಂಗೆ ಬೌಲಿಂಗ್ ಮಾಡ್ತಿದ್ದಾರೆ ಅನ್ನೋದನ್ನ ನಾನು ನೋಡಲಿಲ್ಲ. ಚೆಂಡು ಹೇಗೆ ಬರ್ತಿದೆ, ಅದನ್ನ ಸಿಕ್ಸರ್, ಬೌಂಡರಿ ಗಳಾಗಿ ಹೇಗೆ ಪರಿವರ್ತಿಸೋದು ಅಂತ ಮಾತ್ರ ಯೋಚಿಸಿದ್ದೆ” ಸಣ್ಣ ಹುಡುಗ‌ನ ಬಾಯಿಯಿಂದ ಬಂದ ದೊಡ್ಡ ಮಾತು ಇದೆ..ಏನೇ ಆಗಲಿ ಕಿರಿಯರ ಕ್ರಿಕೆಟ್ ನಲ್ಲಿ ಶತಕ, ದೇಶಿ ಕ್ರಿಕೆಟ್ ನಲ್ಲಿ ತ್ರಿಶತಕ ದಾಖಲಿಸಿರುವ ಹುಡುಗ ಈಗ ಐಪಿಎಲ್ ನಲ್ಲಿ ಮಿಂಚುತ್ತಿದ್ದಾನೆ. ಮುಂದೆ ಟೀಂ ಇಂಡಿಯದಲ್ಲೂ ಮಿಂಚುವಂತಾಗಲಿ..

ಬರಹ: ಹೇಮಂತ್ ಸಂಪಾಜೆ (Hemanth Sampaje)
  Ad Widget   Ad Widget     Ad Widget   Ad Widget   Ad Widget   Ad Widget