ನ್ಯೂಸ್ ನಾಟೌಟ್: ಆಪರೇಷನ್ `ರೈಸಿಂಗ್ ಲಯನ್’ ಬಳಿಕ ಇಸ್ರೇಲ್-ಇರಾನ್ ನಡುವಿನ ಸಂಘರ್ಷ ತೀವ್ರ ಸ್ವರೂಪ ಪಡೆದುಕೊಂಡಿದೆ. ಈ ಹಿನ್ನೆಲೆ ಇರಾನ್ ನಲ್ಲಿ ಸಿಲುಕಿರುವ ಕರ್ನಾಟಕದ 9 ವಿದ್ಯಾರ್ಥಿಗಳನ್ನ ಕರೆತರಲು ಕೋರಿ ವಿದೇಶಾಂಗ ಸಚಿವರಿಗೆ ರಾಜ್ಯ ನಾನ್ ರೆಸಿಡೆನ್ಸ್ ಫೋರಂ ಡೆಪ್ಯೂಟಿ ಚೇರ್ಮನ್ ಆರತಿ ಕೃಷ್ಣ ಮನವಿ ಮಾಡಿಕೊಂಡಿದ್ದಾರೆ.
ಕರ್ನಾಟಕ ಮೂಲದ 9 ವಿದ್ಯಾರ್ಥಿಗಳು ಇರಾನ್ನ ಟೆಹ್ರಾನ್ ನಗರದ ಜಫ್ರಾನಿಯಾ ಪ್ರದೇಶದ ತೌಪಿಕ್ ಅಲ್ಲೆಯಲ್ಲಿ ಸಿಲುಕಿದ್ದಾರೆ. ವೈದ್ಯಕೀಯ ವಿದ್ಯಾಭ್ಯಾಸಕ್ಕಾಗಿ 9 ವಿದ್ಯಾರ್ಥಿಗಳು ಇರಾನ್ ಗೆ ತೆರಳಿದ್ದರು. ಸದ್ಯ ಇರಾನ್-ಇಸ್ರೇಲ್ ನಡುವೆ ಉದ್ವಿಗ್ನ ಪರಿಸ್ಥಿತಿ ಉಂಟಾದ ಹಿನ್ನೆಲೆ ವಿದ್ಯಾರ್ಥಿಗಳು, ಇರಾನ್ ನ ಭಾರತೀಯ ರಾಯಭಾರಿ ಕಚೇರಿ ಮತ್ತು ವಿದೇಶಾಂಗ ಸಚಿವಾಲಯಕ್ಕೆ ತುರ್ತು ಸಹಾಯಕ್ಕಾಗಿ ಮನವಿ ಮಾಡಿದ್ದರು. ಈ ಬೆನ್ನಲ್ಲೇ ಆರತಿ ಕೃಷ್ಣ ಕೂಡ ವಿದೇಶಾಂಗ ಸಚಿವ ಎಸ್. ಜೈಶಂಕರ್ ಗೆ ಪತ್ರ ಬರೆದು ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ವಾಪಸ್ ಕರೆತರುವಂತೆ ಮನವಿ ಮಾಡಿಕೊಂಡಿದ್ದಾರೆ.
ಸದ್ಯ ಅಣ್ವಸ್ತ್ರ ಮಿಲಿಟರಿ ನೆಲೆಗಳ ಬಳಿಕ ಇರಾನ್ ನ ಮೂಲ ಸೌಕರ್ಯಗಳನ್ನು ಗುರಿಯಾಗಿಸಿ ಇಸ್ರೇಲ್ ದಾಳಿ ಮಾಡಲು ಶುರು ಮಾಡಿದೆ. ಇರಾನ್ ನಲ್ಲಿ ಒಟ್ಟು 170ಕ್ಕೂ ಹೆಚ್ಚು ಸ್ಥಳಗಳು 720 ಮಿಲಿಟರಿ ಮೂಲ ಸೌಕರ್ಯಗಳ ಮೇಲೆ ದಾಳಿ ಮಾಡಿದೆ. ಇಸ್ರೇಲ್ ನಡೆಸಿದ ದಾಳಿಯಲ್ಲಿ 224 ಮಂದಿ ಸಾವನ್ನಪ್ಪಿದ್ದು, 1,277 ಜನರು ಗಾಯಗೊಂಡಿದ್ದಾರೆ. ಅದೇ ವೇಳೆ ಇರಾನ್ ನಡೆಸಿದ ದಾಳಿಯಲ್ಲಿ 14 ಇಸ್ರೇಲಿ ನಾಗರಿಕರು ಸಾವನ್ನಪ್ಪಿದ್ದು, 390 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.