ನ್ಯೂಸ್ ನಾಟೌಟ್: ಪಂಚಾಯತ್ ಮಟ್ಟದಲ್ಲಿ ಬಿಜೆಪಿಯವರು ಕಾಂಗ್ರೆಸ್ ವಿರುದ್ಧ ಹಮ್ಮಿಕೊಂಡ ಪ್ರತಿಭಟನೆ ಸುಳ್ಯದ ನಗರ ಪಂಚಾಯತ್ ಎದುರೂ ನಡೆಯಿತು. ಈ ಪ್ರತಿಭಟನೆಯನ್ನು ಹಿರಿಯ ಕಾಂಗ್ರೆಸ್ ಮುಖಂಡ ಹಾಲಿ ನಗರ ಪಂಚಾಯತ್ ಸದಸ್ಯ ಎಂ. ವೆಂಕಪ್ಪ ಗೌಡ ಲೇವಡಿ ಮಾಡಿದ್ದಾರೆ. ಇದೆಲ್ಲವೂ ನಾಟಕೀಯ ರಾಜಕಾರಣವೆಂದು ಕುಟುಕಿದ್ದಾರೆ.
ಮಾನ ಮರ್ಯಾದೆ ಇಲ್ಲದ ರಾಜಕಾರಣ
ಈ ಬಗ್ಗೆ ನ್ಯೂಸ್ ನಾಟೌಟ್ ಜೊತೆಗೆ ಮಾತನಾಡಿದ ಅವರು ತಮ್ಮ ಆಕ್ರೋಶವನ್ನು ಹೊರ ಹಾಕಿದರು. ಸುಳ್ಯದ ಬಿಜೆಪಿ ನಾಯಕರಿಗೆ ನಾಚಿಕೆ ಆಗಬೇಕು. ತಮ್ಮ ತಟ್ಟೆಯಲ್ಲಿ ಹೆಗ್ಗಣ ಇಟ್ಟುಕೊಂಡು ಇನ್ನೊಬ್ಬರ ತಟ್ಟೆಯಲ್ಲಿ ಹುಳ ಹುಡುಕುವ ಕೆಲಸವನ್ನು ಮಾಡುತ್ತಿದ್ದಾರೆ. ಸುಳ್ಯದಲ್ಲಿ ಕಸದ ಸಮಸ್ಯೆ ಹಲವು ವರ್ಷಗಳಿಂದ ಬೃಹದಾಕಾರವಾಗಿ ಬೆಳೆದಿದೆ. ಆಗಲೂ ಇವರದ್ದೇ ಆಡಳಿತ ಇತ್ತು, ಈಗಲೂ ಇವರದ್ದೇ ಆಡಳಿತ ಇದೆ. ಇವರು ಇದುವರೆಗೆ ಏನು ಕ್ರಮ ಕೈಗೊಂಡಿದ್ದಾರೆ..? ಕಸದ ಸಮಸ್ಯೆ ಸರಿಯಾಯಿತೇ..? ಇವರು ಇಷ್ಟು ದಿನ ಏನು ಮಾಡಿದರು ಅನ್ನುವುದು ನಮ್ಮ ಸುಳ್ಯದ ಜನರಿಗೆ ಚೆನ್ನಾಗಿ ಗೊತ್ತಿದೆ. ಅಂಗೈ ಹುಣ್ಣಿಗೆ ಕನ್ನಡಿ ಬೇಕಾ..? ಇನ್ನು ಮನೆ ಇಲ್ಲದವರಿಗೆ ಮನೆ ನೀಡುವ ಸುಮಾರು 500 ಅರ್ಜಿಗಳು ಹಾಗೆಯೇ ಗೆದ್ದಲು ಹಿಡಿಯುತ್ತಾ ಬಿದ್ದಿದೆ. ಬಡವರ ಪರ ಧ್ವನಿ ಎತ್ತುವವರು ಆಗಿದ್ದರೆ ಆ ಅರ್ಜಿಗಳ ಬಗ್ಗೆ ಇವರು ಯಾಕೆ ಇನ್ನೂ ಮಾತನಾಡುತ್ತಿಲ್ಲ. ನಮ್ಮ ನಗರದ ಒಳಚರಂಡಿ ವ್ಯವಸ್ಥೆಗೆ ಕೋಟಿಗಟ್ಟಲೆ ಖರ್ಚು ಆಗಿದೆ. 2003-04 ರ ಅವಧಿಯಲ್ಲಿ ಪ್ರಾರಂಭಗೊಂಡ ಈ ಕೆಲಸ ಇನ್ನೂ ದಾಖಲೆಯಲ್ಲಿಯೇ ಇದೆ. ಇದರ ಪ್ರಯೋಜನ ಜನರಿಗೆ ಯಾಕೆ ಸಿಕ್ಕಿಲ್ಲ. ಸುಳ್ಯ ನಗರದ ರಸ್ತೆ ಇಕ್ಕಟ್ಟಾಗಿದೆ. ಶಾಲೆ ಮಕ್ಕಳಿಗೆ, ಮಹಿಳೆಯರಿಗೆ, ವಯೋವೃದ್ಧರಿಗೆ ನಡೆದುಕೊಂಡು ಹೋಗುವುದಕ್ಕೂ ಸಾಧ್ಯವಾಗದ ಪರಿಸ್ಥಿತಿ ಇದೆ. ಇದಕ್ಕೆ ಪರ್ಯಾಯ ವ್ಯವಸ್ಥೆ ಮಾಡಿಸಲು ಬಿಜೆಪಿ ಬೆಂಬಲಿತ ಈ ನಗರ ಪಂಚಾಯತ್ ಸಂಪೂರ್ಣ ವಿಫಲವಾಗಿಬಿಟ್ಟಿದೆ. 110 ಕೆವಿ ವಿದ್ಯುತ್ ಕಾಮಗಾರಿ ಕುಂಟುತ್ತಾ ಸಾಗಿದೆ. ಎರಡೆರಡು ದಿನ ಇಡೀ ಸುಳ್ಯ ಕತ್ತಲಲ್ಲಿ ಕೊಳೆಯುತ್ತಿದ್ದರೂ ಮಾನಗೆಟ್ಟ ಆಡಳಿತಕ್ಕೆ ಏನೂ ಅನಿಸುವುದಿಲ್ಲ. ಶಾಸಕರು-ಸಂಸದರು ಮಾತನಾಡಿ ಈ ಸಮಸ್ಯೆ ಬಗೆಹರಿಸಬೇಕಿತ್ತು. ಅದನ್ನು ಬಿಟ್ಟು ಈಗ ಯಾವ ಮುಖ ಹೊತ್ತುಕೊಂಡು ಇವರದ್ದೇ ಆಡಳಿತ ಇರುವ ನಗರ ಪಂಚಾಯತ್ ಎದುರು ಪ್ರತಿಭಟನೆ ಮಾಡುತ್ತಿದ್ದಾರೋ ಗೊತ್ತಿಲ್ಲ. ಇವರ ಪ್ರತಿಭಟನೆ ಬಹುಶಃ ಇವರ ಆಡಳಿತದ ವಿರುದ್ಧವೇ ಇರಬೇಕು ಎಂದು ಅನಿಸುತ್ತಿದೆ’ ಎಂದು ವೆಂಕಪ್ಪ ಗೌಡರು ವ್ಯಂಗ್ಯವಾಡಿದರು.