ನ್ಯೂಸ್ ನಾಟೌಟ್: ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷದ ನಡುವೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಇರಾನ್ ಜೊತೆಗಿನ ಸಂಘರ್ಷದಿಂದ ನನ್ನ ಮಗನ ಮದುವೆಯನ್ನು ಎರಡನೇ ಬಾರಿಗೆ ಮುಂದೂಡಬೇಕಾಯಿತು ಎಂದು ನೀಡಿರುವ ಹೇಳಿಕೆಯೊಂದು ಇಸ್ರೇಲ್ ನಲ್ಲಿ ವ್ಯಾಪಕ ಟೀಕೆ ಮತ್ತು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ.
ಜನರು ತಮ್ಮ ದೇಶಕ್ಕಾಗಿ ಹೋರಾಡುತ್ತಿರುವಾಗ ನೆತನ್ಯಾಹು ತಮ್ಮ ಮಗನ ಮದುವೆಯನ್ನು ಮುಂದೂಡಿರುವುದನ್ನು ದೊಡ್ಡ ವಿಷಯವನ್ನಾಗಿ ಮಾಡುವುದು ನಾಚಿಕೆಗೇಡಿನ ಸಂಗತಿ ಎಂದು ಜನರು ಸಾಮಾಜಿಕ ಮಾಧ್ಯಮದಲ್ಲಿ ಕಾಮೆಂಟ್ ಮಾಡುವ ಮೂಲಕ ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ಇಸ್ರೇಲ್ – ಇರಾನ್ ನಡುವಿನ ಸಂಘರ್ಷ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಈ ನಡುವೆ ಇರಾನ್ ನ ಮಿಲಿಟರಿ ನೆಲೆ ಮತ್ತು ಕ್ಷಿಪಣಿ ನೆಲೆಗಳನ್ನು ಗುರಿಯಾಗಿಸಿಕೊಂಡು ಇಸ್ರೇಲ್ ದಾಳಿ ನಡೆಸಿತ್ತು. ಇದಕ್ಕೆ ಪ್ರತಿಯಾಗಿ ಇರಾನ್ ಇಸ್ರೇಲ್ ಮೇಲೆ ಕ್ಷಿಪಣಿ ದಾಳಿ ನಡೆಸಿತು. ಇದರಿಂದ ಸೊರೊಕಾ ಆಸ್ಪತ್ರೆ ಕಟ್ಟಡಕ್ಕೆ ಭಾರಿ ಹಾನಿಯಾಗಿತ್ತು.
ಇದನ್ನು ಪರಿಶೀಲಿಸಲು ಬಂದಿದ್ದ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅಲ್ಲಿದ್ದ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡುವ ವೇಳೆ ಇರಾನ್ ನಡೆಸಿದ ದಾಳಿಯಿಂದ ಹಲವು ಮಂದಿ ಜೀವ ಕಳೆದುಕೊಂಡಿದ್ದಾರೆ ಇದಕ್ಕೆ ನಾನು ಜನರಲ್ಲಿ ಕ್ಷಮೆ ಕೇಳುತ್ತೇನೆ. ಜೊತೆಗೆ ಈ ಸಂಘರ್ಷದಿಂದ ನಾನು ನನ್ನ ಮಗನ ಮದುವೆಯನ್ನು ಎರಡನೇ ಬಾರಿಗೆ ಮುಂದೂಡಿದ್ದೇನೆ ಇದು ದೇಶಕ್ಕಾಗಿ ನಾನು ಮಾಡಿದ ತ್ಯಾಗ ಎಂದು ನೆತನ್ಯಾಹು ಹೇಳಿದ್ದಾರೆ. ಇರಾನ್ ನಡುವಿನ ಸಂಘರ್ಷದಲ್ಲಿ ನಾನು ವೈಯಕ್ತಿಕವಾಗಿ ನಷ್ಟವನ್ನು ಅನುಭವಿಸಿದ್ದೇನೆ ಜೊತೆಗೆ ನನ್ನ ಪತ್ನಿ ಮಾನಸಿಕ ಯಾತನೆಯನ್ನೂ ಅನುಭವಿಸಿದ್ದಾಳೆ ಎಂದು ಹೇಳಿಕೊಂಡಿದ್ದಾರೆ.
ಇನ್ನು ಪ್ರಧಾನಿ ತನ್ನ ಮಗನ ಮದುವೆ ಮುಂದೂಡಿದ ವಿಚಾರವನ್ನು ಪತ್ರಕರ್ತರ ಮುಂದೆ ಪ್ರಸ್ತಾಪಿಸುತ್ತಿದ್ದಂತೆ ಇಸ್ರೇಲ್ ನಾಗರಿಕರು ಆಕ್ರೋಶ ಹೊರ ಹಾಕಿದ್ದಾರೆ ದೇಶದಲ್ಲಿ ಯುದ್ಧ ನಡೆಯುತ್ತಿದ್ದರೆ ಪ್ರಧಾನಿಗೆ ಮಗನ ಮದುವೆ ಮುಂದೂಡಿದ ಚಿಂತೆ ದೇಶಕ್ಕಾಗಿ ಜನ ಸಾಯುತ್ತಿದ್ದಾರೆ ಆದರೆ ಪ್ರಧಾನಿಗೆ ಮಾತ್ರ ತನ್ನ ಕುಟುಂಬ ಸದಸ್ಯರ ಚಿಂತೆ ಮಾತ್ರ ದೊಡ್ಡದಾಗಿದೆ ಎಂದು ಟೀಕಿಸಿದ್ದಾರೆ.