ನ್ಯೂಸ್ ನಾಟೌಟ್: ಕೆಲಸದಲ್ಲಿ ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿ ಇಂಡಿಗೋದ (Indigo) ತರಬೇತಿ ಪೈಲಟ್ ಒಬ್ಬರು ಮೂವರು ಹಿರಿಯ ಅಧಿಕಾರಿಗಳ ವಿರುದ್ಧ ಎಸ್ ಸಿ/ಎಸ್ ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ ಎಫ್ ಐಆರ್ ದಾಖಲಿಸಿದ್ದಾರೆ.
ತರಬೇತಿ ಪೈಲಟ್ ಮೊದಲು ಬೆಂಗಳೂರಿನಲ್ಲಿ ದೂರು ನೀಡಿದ್ದರು. ಇಂಡಿಗೋ ಅಧಿಕಾರಿಗಳಾದ ತಪಸ್ ಡೇ, ಮನೀಶ್ ಸಾಹ್ನಿ ಮತ್ತು ಕ್ಯಾಪ್ಟನ್ ರಾಹುಲ್ ಪಾಟೀಲ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಿಸಿದ ಬೆಂಗಳೂರು ಪೊಲೀಸರು ಈಗ ಈ ಪ್ರಕರಣವನ್ನು ಇಂಡಿಗೋದ ಪ್ರಧಾನ ಕಚೇರಿ ಇರುವ ಗುರುಗ್ರಾಮ ಪೊಲೀಸರಿಗೆ ವರ್ಗಾಯಿಸಿದ್ದಾರೆ. ಈ ಪ್ರಕರಣದ ಬಗ್ಗೆ ಇಂಡಿಗೋ ಇಲ್ಲಿಯವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ತಮ್ಮ ದೂರಿನಲ್ಲಿ ಪೈಲಟ್ ಏಪ್ರಿಲ್ 28 ರಂದು ಇಂಡಿಗೋದ ಗುರುಗ್ರಾಮ ಕಚೇರಿಯಲ್ಲಿ ನಡೆದ ಸಭೆಯಲ್ಲಿ ನಡೆದ ಘಟನೆಯನ್ನು ಉಲ್ಲೇಖಿಸಿದ್ದಾರೆ. 30 ನಿಮಿಷಗಳ ಕಾಲ ನಡೆದ ಸಭೆಯಲ್ಲಿ, “ನಿನಗೆ ವಿಮಾನ ಹಾರಿಸಲು ಬರಲ್ಲ. ಬದಲಾಗಿ ಚಪ್ಪಲಿ ಹೊಲಿಯಲು ನೀನು ಯೋಗ್ಯ ವ್ಯಕ್ತಿ. ಇಲ್ಲಿ ನಿನಗೆ ಕಾವಲುಗಾರನಾಗಲು ಸಹ ಅರ್ಹತೆ ಹೊಂದಿಲ್ಲ” ಎಂದು ಹೇಳಿ ನಿಂದಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ನಾನು ಉದ್ಯೋಗಕ್ಕೆ ರಾಜೀನಾಮೆ ನೀಡಬೇಕೆಂಬ ಕಾರಣಕ್ಕೆ ನನಗೆ ಕಿರುಕುಳ ನೀಡಲಾಗಿದೆ.. ಪರಿಶಿಷ್ಟ ಜಾತಿಗೆ ಸೇರಿದ ನನ್ನ ಗುರುತನ್ನು ಅವಮಾನಿಸುವ ಉದ್ದೇಶದಿಂದ ಈ ಅವಹೇಳನಕಾರಿ ಹೇಳಿಕೆಗಳನ್ನು ಅಧಿಕಾರಿಗಳು ನೀಡಿದ್ದಾರೆ ಎಂದು ದೂರಿದ್ದಾರೆ.
ಸಂಬಳ ಕಡಿತ, ಅನಗತ್ಯ ಎಚ್ಚರಿಕೆ ಪತ್ರಗಳನ್ನು ನೀಡುವ ಮೂಲಕ ನನ್ನನ್ನು ಬಲಿಪಶು ಮಾಡಲಾಗಿದೆ. ನನಗಾದ ಅನ್ಯಾದ ಬಗ್ಗೆ ಉನ್ನತ ಅಧಿಕಾರಿಗಳು ಮತ್ತು ಇಂಡಿಗೋದ ನೈತಿಕ ಸಮಿತಿ ದೂರು ನೀಡಿದ್ದೆ. ಆದರೆ ಅವರು ಯಾವುದೇ ಕ್ರಮಕೈಗೊಳ್ಳದ ಕಾರಣ ಪೊಲೀಸ್ ದೂರು ನೀಡಬೇಕಾಯಿತು ಎಂದು ದೂರುದಾರ ಹೇಳಿದ್ದಾರೆ.
ಮನೆಯೊಳಗೆ LPG ಗ್ಯಾಸ್ ಸಿಲಿಂಡರ್ ಸೋರಿಕೆಯಾಗಿ ಸ್ಫೋಟ..! ಪವಾಡವೆಂಬಂತೆ ಪಾರಾದ ಇಬ್ಬರು, ವಿಡಿಯೋ ವೈರಲ್