ನ್ಯೂಸ್ ನಾಟೌಟ್: ಸುಳ್ಯ ತಾಲೂಕಿನಲ್ಲಿ ವಿಭಿನ್ನ ಶಿಕ್ಷಣದ ಮೂಲಕ ಗಮನ ಸೆಳೆದಿರುವ ಸ್ನೇಹ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಈಗ ಮತ್ತೊಂದು ಸಾಧನೆಯ ಮೂಲಕ ಸುದ್ದಿಯಾಗಿದ್ದಾರೆ.
ಇಲ್ಲಿನ ವಿದ್ಯಾರ್ಥಿಗಳು ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ (IISc) ಕೇಂದ್ರದಲ್ಲಿ ಆಯೋಜಿಸಿದ್ದ ‘ರಸಾಯನ ಶಾಸ್ತ್ರದ ರಹಸ್ಯಗಳು’ ಎಂಬ ಕಾರ್ಯಾಗಾರದಲ್ಲಿ ಭಾಗವಹಿಸಿದ್ದಾರೆ. ಶಾಲೆಯ 10ನೇ ತರಗತಿ ವಿದ್ಯಾರ್ಥಿ ಗಗನ್ ಹಾಗೂ 9ನೇ ತರಗತಿಯ ವಿದ್ಯಾರ್ಥಿ ಅಪ್ರಮೇಯ ಪಾಲ್ಗೊಂಡಿದ್ದಾರೆ. ರಸಾಯನ ಶಾಸ್ತ್ರದ ಮಹತ್ವವನ್ನು ಪ್ರಚಾರ ಪಡಿಸುವ ದೃಷ್ಟಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.
9ನೇ ತರಗತಿಯಿಂದ 12ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಅವಕಾಶ ಇತ್ತು. ವಿಶೇಷವೆಂದರೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಈ ಶಾಲೆಯ ವಿದ್ಯಾರ್ಥಿಗಳನ್ನು ಹೊರತುಪಡಿಸಿ ಬೇರೆ ಯಾವ ಶಾಲೆಯ ಮಕ್ಕಳು ಕೂಡ ಭಾಗವಹಿಸಿರಲಿಲ್ಲ. ಸ್ನೇಹ ಶಿಕ್ಷಣ ಸಂಸ್ಥೆಯ ನಿರ್ದೇಶಕರಾಗಿರುವ ಚಂದ್ರಶೇಖರ ದಾಮ್ಲೆಯವರು, ಜಯಲಕ್ಷ್ಮೀ ದಾಮ್ಲೆಯವರ ಪ್ರೋತ್ಸಾಹ, ಅತ್ಯುತ್ತಮ ಶಿಕ್ಷಕ ವರ್ಗದ ಕೋಚಿಂಗ್ ನಿಂದಾಗಿ ಇಂತಹ ಸುವರ್ಣಾವಕಾಶ ಸಿಕ್ಕಿತು ಎಂದು ವಿದ್ಯಾರ್ಥಿಗಳು ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ.
ಮಕ್ಕಳ ತಂಡವನ್ನು ಕರೆದೊಯ್ದ ಪೋಷಕರಾದ ಉಷಾ ರಾಮ ಮೋಹನ್ ರವರು ಕೂಡಾ ಹರ್ಷ ವ್ಯಕ್ತಪಡಿಸಿದ್ದಾರೆ. ಅಂತಹ ಪ್ರಸಿದ್ಧ ಸಂಸ್ಥೆಯೊಂದಿಗೆ ಸ್ನೇಹ ಶಾಲೆಗಿರುವ ಒಡನಾಟ ನಿಜಕ್ಕೂ ಮಕ್ಕಳ ಪಾಲಿಗೆ ಸಿಕ್ಕಿದ ಅದೃಷ್ಟ ಎಂದು ಬಣ್ಣಿಸಿದ್ದಾರೆ.