Latest

ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ದುರಂತದಿಂದ ಜನ ಸತ್ತರೆ ಬಿಜೆಪಿಯವರಿಗೆ ಕಾಣುವುದೇ ಇಲ್ಲವೇ..?, ಬಿಜೆಪಿ ವಿರುದ್ಧ ಹರಿಹಾಯ್ದ ಸುಳ್ಯದ ಹಿರಿಯ ಕಾಂಗ್ರೆಸ್ ಮುಖಂಡ

490

ನ್ಯೂಸ್ ನಾಟೌಟ್: ‘ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಸರಣಿ ದುರಂತದಲ್ಲಿ ಜನ ಸತ್ತರೆ ಬಿಜೆಪಿಯವರಿಗೆ ಕಾಣುವುದೇ ಇಲ್ಲವೇ..? ಒಂದರ ಮೇಲೊಂದು ಸರಣಿ ದುರಂತಗಳು ಸಂಭವಿಸುತ್ತಿದ್ದರೂ ಅದಕ್ಕೂ ನಮಗೂ ಸಂಬಂಧವಿಲ್ಲ ಅನ್ನುವಂತೆ ಇದ್ದಾರೆ, ಇವರು ಮಾಡುತ್ತಿರುವ ಹೋರಾಟ ರಾಜಕೀಯ ಲಾಭಕ್ಕಾಗಿ ಅಲ್ಲವೇ..?’ ಎಂದು ಸುಳ್ಯದ ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ನಗರ ಪಂಚಾಯತ್ ಸದಸ್ಯರಾಗಿರುವ ಎಂ. ವೆಂಕಪ್ಪ ಗೌಡ ಅವರು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿಯನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.

ಈ ಬಗ್ಗೆ ಮಾಧ್ಯಮಕ್ಕೆ ಪ್ರಕಟಣೆ ಹೊರಡಿಸಿರುವ ಅವರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ‘ದೇಶದಲ್ಲಿ ಎಲ್ಲೆಲ್ಲಿ ಬಿಜೆಪಿ ಸರ್ಕಾರ ಇದೆ, ಅಲ್ಲಲ್ಲಿ ದುರಂತ ಸಂಭವಿಸಿದ ಉದಾಹರಣೆಗಳಿವೆ. ಆದರೆ ಬಿಜೆಪಿಯವರಿಗೆ ತಮ್ಮ ಸರ್ಕಾರ ಇರುವ ರಾಜ್ಯಗಳಲ್ಲಿ ಏನು ದುರಂತ ಸಂಭವಿಸಿದರೂ ಅವರ ಕಣ್ಣಿಗೆ ಕಾಣಿಸುವುದೇ ಇಲ್ಲ. ಅಂತಹ ಸುದ್ದಿಗಳು ದೊಡ್ಡ ಮಾಧ್ಯಮಗಳಲ್ಲಿ ಸುದ್ದಿಯೇ ಆಗುವುದಿಲ್ಲ. ಘಟನೆ ನಡೆದ ಬಳಿಕ ಅವರು ಸಂತಾಪ ವ್ಯಕ್ತಪಡಿಸುವುದು ಕಣ್ಣೀರು ಸುರಿಸಿ ಪರಿಹಾರದ ನಾಟಕವಾಡಿ ಆ ಘಟನೆಯನ್ನು ಮರೆತೇ ಬಿಡುತ್ತಾರೆ’ ಎಂದು ಎಂ. ವೆಂಕಪ್ಪ ಗೌಡ ಅವರು ಕುಟುಕಿದ್ದಾರೆ.

‘ಇತ್ತೀಚಿನ ದುರಂತಗಳ ಬಗ್ಗೆ ಗಮನಿಸುವುದಾದರೆ ಹೈದರಾಬಾದ್ ನಲ್ಲಾಗಿರುವ ವಿಮಾನ ದುರಂತವನ್ನು ನೋಡಿ, ಮಧ್ಯ ಪ್ರದೇಶ, ಉತ್ತರ ಪ್ರದೇಶದಲ್ಲಿ ಸೇತುವೆ ದುರಂತಗಳಲ್ಲಿ ನೂರಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಹೆಲಿಕಾಪ್ಟರ್ ದುರಂತ, ಸೇತುವೆ ದುರಂತ, ದೇವಸ್ಥಾನದ ನೂಕು ನುಗ್ಗಲು ದುರಂತ, ಕುಂಭ ಮೇಳದ ಕೈಕಾಲು ತುಳಿತದ ಪ್ರಕರಣಗಳು ನಮ್ಮೆಲ್ಲರ ಕಣ್ಣ ಮುಂದಿದೆ. ನಮ್ಮ ಪ್ರಧಾನಿಗಳು ಅದೆಲ್ಲವನ್ನು ಮರೆತು ವಿದೇಶಿ ಪ್ರವಾಸವನ್ನು ಮಾಡುತ್ತಿದ್ದಾರೆ ಎಂದು ಟೀಕಿಸಿದರು. ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ಎ) ಮಾಡಿದ ಒಂದು ಎಡವಟ್ಟಿನಿಂದ ಅಮಾಯಕ 11 ಮಂದಿ ಆರ್ ಸಿಬಿ ಅಭಿಮಾನಿಗಳು ಪ್ರಾಣ ಕಳೆದುಕೊಳ್ಳುವಂತಾಯಿತು. ಇದನ್ನು ಬಿಜೆಪಿ ತನ್ನ ಲಾಭಕ್ಕಾಗಿ ಬಳಸಿಕೊಳ್ಳುತ್ತಿದೆ. ಪ್ರತಿಭಟನೆಯ ಸಭೆ ಮಾಡಿ ನಾಟಕ ಮಾಡುತ್ತಿದೆ, ಇದು ದುರಾದೃಷ್ಟವಲ್ಲದೆ ಮತ್ತೇನೂ ಅಲ್ಲ. ನಿನ್ನೆ ಮಹಾರಾಷ್ಟ್ರದಲ್ಲಿ ಹಾಗೂ ಉತ್ತರ ಪ್ರದೇಶದಲ್ಲಿ ನಡೆದ ಸೇತುವೆ ಅವಘಡ ಗಳಲ್ಲಿ ಸತ್ತವರ ಬಗ್ಗೆ ಇವರಿಗೆ ಅರಿವೇ ಇಲ್ಲ ಎಂದಾದರೆ ಇವರು ಮಾಡುತ್ತಿರುವ ಹೋರಾಟ ರಾಜಕೀಯ ಲಾಭಕ್ಕಾಗಿ ಅಲ್ಲವೇ?’ ಎಂದು ಎಂ. ವೆಂಕಪ್ಪ ಗೌಡ ಅವರು ಪ್ರಶ್ನಿಸಿದ್ದಾರೆ.

See also  ಕುಶಾಲನಗರ ಸಂಪತ್ ಕೊಲೆ ಪ್ರಕರಣ – ಸ್ನೇಹಿತನನ್ನೇ ಹತ್ಯೆ ಮಾಡಿದ ಮಹಿಳೆ ಸೇರಿ ಮೂವರು ಆರೋಪಿಗಳ ಬಂಧನ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget